ಜಗತ್ತಿನಲ್ಲಿ ಪ್ರಸ್ತುತ ಹುಲ್ಲು ನೀರಿನ ಕೊರತೆಗಿಂತ ಹೆಚ್ಚಾಗಿ ಪ್ರೀತಿ ಮತ್ತು ವಿಶ್ವಾಸದ ಕೊರತೆ ಇದ್ದು, ಅಖಂಡ ಭಾರತದಲ್ಲಿ ಜನ ಸಾಮರಸ್ಯದ ಬದುಕನ್ನು ಬದುಕಬೇಕೆಂಬ ಸಂದೇಶವನ್ನು ಕರಿ ಕಂಬಳಿ ಮತ್ತು ಗಣೆ ಜಗತ್ತಿಗೆ ನೀಡಿದೆ ಎಂದು ದಾರ್ಶನಿಕ ಪರಂಪರೆ ವಿದ್ವಾಂಸ, ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ರಹಮತ್ ತರೀಕೆರೆ ವ್ಯಾಖ್ಯಾನಿಸಿದರು.
ತುಮಕೂರು ಜಿಲ್ಲೆ ಸಿರಾ ತಾಲ್ಲೂಕಿನ ಭೂತಪ್ಪನ ದೇವಸ್ಥಾನದ ಬಳಿ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಹುಲ್ಲು ನೀರಿಗಾಗಿ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಕಾರ್ಯಕ್ರಮದಲ್ಲಿ ಗಣೆ ಗೌರವ ಸ್ವೀಕರಿಸಿ ಮಾತನಾಡಿದ ಅವರು, ನನಗೆ ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿಗಳು ಬಂದಿವೆ, ಅವುಗಳಿಗೆ ಪ್ರತಿಷ್ಠೆ ಇದೆ, ಆದರೆ ಈ ಗಣೆ ಗೌರವ ಪ್ರಶಸ್ತಿಗೆ ಪಾವಿತ್ರ್ಯ ಹಾಗೂ ದೈವಿಕತೆ ಇದೆ. ಕೊಳಲು ರೂಪದ ಗಣೆ, ತಾಯಿ ಬಿದಿರಿನಿಂದ ಬೇರ್ಪಟ್ಟ ಮಗುವಾಗಿದೆ. ಇದರಿಂದ ಹೊರಹೊಮ್ಮುವ ಸಂಗೀತವು ತನ್ನ ತಾಯಿಯನ್ನು ನೆನೆಯುವ ವಿರಹದ ಹಾಡು ಎಂಬ ಸೂಫಿ ಕವಿ ಜಲಾಲುದ್ದೀನ್ ರವರ ಮಾತನ್ನು ಉಲ್ಲೇಖಿಸಿದರು ಎಂದು ಹೇಳಿದರು.
ಭಾರತದ ಜನ ಮನಸ್ಸಿನಲ್ಲಿನ ವಿಷ ತೆಗೆದುಹಾಕಿ, ಪ್ರೀತಿ ಮತ್ತು ವಿಶ್ವಾಸದ ಸಂಗೀತವನ್ನು ಹಾಡಬೇಕು, ಈ ಗಣೆಯಿಂದ ಎಂದೂ ಸಹ ಅಪಸ್ವರ ಬಾರದಿರಲಿ. ವಿವಿಧ ನಾದಗಳ ಮೂಲಕ ಉತ್ತಮ ಸಂಗೀತ ಹೊರಬರುವ ಹಾಗೆ ದೇಶದಲ್ಲಿನ ವಿವಿಧ ಧರ್ಮ, ಜಾತಿ, ಆಚಾರ ವಿಚಾರಗಳ ಜನ ಒಂದೇ ಎಂಬ ಭಾವನೆಯಿಂದ ಸಮಾಜವನ್ನು ಕಟ್ಟಬೇಕು, ಸಾಮರಸ್ಯದ ಬದುಕನ್ನು ಬದುಕಬೇಕು ಎಂಬ ಸಂದೇಶವನ್ನು ಈ ಗಣೆ ನೀಡುತ್ತದೆ. ನನಗೆ ಗೌರವದಿಂದ ನೀಡಿರುವ ಕರಿ ಕಂಬಳಿ ಮಹಮ್ಮದ್ ಪೈಗಂಬರ್ ಅವರು ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಬಳಸುತ್ತಿದ್ದರು. ಈ ಗಣೆ ಮತ್ತು ಕಂಬಳಿಯದ್ದು ಒಂದೇ ಸಂಕೇತ. ನಾವೆಲ್ಲರೂ ಮನುಷ್ಯರು ಒಟ್ಟಾಗಿ ಬದುಕಬೇಕು. ನಾವಷ್ಟೇ ಅಲ್ಲ ಗಿಡ, ಮರ, ಪ್ರಾಣಿ, ಪಕ್ಷಿ ಎಲ್ಲವೂ ಸುಖದಿಂದ ಜೀವಿಸಬೇಕು, ಜಗತ್ತಿನ ಸಣ್ಣ ಇರುವೆಯೂ ಕೂಡ ಬದುಕುವ ಹಕ್ಕನ್ನು ಹೊಂದಿದ್ದು, ಅದನ್ನು ಗೌರವಿಸಬೇಕು ಹಾಗೂ ಈ ಜಗತ್ತಿನಲ್ಲಿರುವ ನೀರು ಗಾಳಿ ಆಹಾರ ಎಲ್ಲವನ್ನೂ ಹಂಚಿಕೊಂಡು ಬದುಕಬೇಕು ಎಂಬುದು ಜುಂಜಪ್ಪನ ಕಾವ್ಯದಲ್ಲಿ ಕಟ್ಟಿಕೊಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಸಾಹಿತಿ, ಸಂಸ್ಕೃತಿ ಚಿಂತಕ ನಟರಾಜ್ ಬೂದಾಳ್ ಅಭಿನಂದನಾ ನುಡಿಗಳನ್ನಾಡಿ ರಹಮತ್ ತರೀಕೆರೆಯವರು ಮಾನವೀಯ ಮನಸುಳ್ಳವರು. ದೇಶ ವಿದೇಶಗಳಲ್ಲಿ ಜಾನಪದ ನೆಲೆಗಳನ್ನು ಹುಡುಕುತ್ತಾ, ಅಲೆದವರು. ನೆಲಮೂಲ ಸಂಸ್ಕೃತಿಯನ್ನು ತನ್ನದೇ ಆದ ಶೈಲಿಯಲ್ಲಿ ವಿಶಿಷ್ಟವಾಗಿ ಕಟ್ಟಿಕೊಟ್ಟಿರುವ ರಹಮತ್ ರವರಿಗೆ ಗಣೆ ಗೌರವ ನೀಡಿರುವುದು ನೊಬೆಲ್ ಪ್ರಶಸ್ತಿಗಿಂತ ಹೆಚ್ಚು ಮೌಲ್ಯಯುಳ್ಳದ್ದು ಎಂದ ಅವರು, ಚಿಕ್ಕ ವಯಸ್ಸಿನಲ್ಲೇ ಮನುಷ್ಯ ಪ್ರಕೃತಿ ಮತ್ತು ಜೀವಾದಿಗಳ ಅನುಸಂಧಾನದಿಂದ ಹೇಗೆ ಬದುಕಬೇಕೆಂಬ ರೀತಿ ತೋರಿಸಿಕೊಟ್ಟ ಜುಂಜಪ್ಪ, ಜಗತ್ತಿನಲ್ಲಿ ಆಹಾರ, ನೀರು, ಗಾಳಿ ಕೇವಲ ಉಳ್ಳವರ ಸ್ವತ್ತಾಗಿರುವುದನ್ನು ಖಂಡಿಸಿ, ಎಲ್ಲರಿಗೂ ಸಮಾನತೆಯಿಂದ ಬದುಕುವ ಹಕ್ಕಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ ಎಂದು ಬಣ್ಣಿಸಿದರು.
ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಜುಂಜಪ್ಪನ ಮಾನವೀಯತೆ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ನೈಸರ್ಗಿಕವಾದ, ದೈವಿಕ ಪರಿಕಲ್ಪನೆಯ ಪರಿಧಿಯೊಳಗೆ ಸಮಾಜದ ಓರೆಕೋರೆಗಳನ್ನು ಜುಂಜಪ್ಪ ತಿದ್ದಿದ್ದಾನೆ. ದನಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಆತನು ತನ್ನ ಮಾವನವರಿಗೆ ಹಾಗೂ ರಾಕ್ಷಸೀ ಗುಣ ಹೊಂದಿರುವ ಸಮಾಜದ ದುಷ್ಟಶಕ್ತಿಗಳಿಗೆ ತನ್ನದೇ ಆದ ವಿಶಿಷ್ಟ ದೈವೀ ಶಕ್ತಿಯಿಂದ ಉತ್ತರ ನೀಡಿದ್ದಾನೆ. ಬಡಮೈಲ ಎಂಬ ಹೋರಿ ಜುಂಜಪ್ಪನ ಅತ್ಮಸಖನಾಗಿ ಕೊನೆವರೆಗೂ ಇದ್ದು, ಕಷ್ಟ ಸಂದರ್ಭಗಳಲ್ಲಿ ರಕ್ಷಿಸುತ್ತದೆ. ಇದು ಜಾನುವಾರುಗಳ ಬಗ್ಗೆ ಇದ್ದ ಕಾಳಜಿಯ ಪ್ರತೀಕವಾಗಿದೆ. ಒಮ್ಮೆ ಹೋರಾಟದ ಮೂಲಕ ರಾಜ್ಯ ಗೆದ್ದರೂ ಸಹ ಸುಖ ಜೀವನ ಅನುಭವಿಸದೆ, ಜಾನುವಾರಗಳ ಏಳಿಗೆಗೆ ಶ್ರಮಿಸಿದ ಜುಂಜಪ್ಪ, ಮಾಟ-ಮಂತ್ರ ಹಾಗೂ ವೈದಿಕ ನೆಲೆಯ ಕೆಲಸಗಳಿಗೆ ಕಂಟಕನಾಗಿದ್ದನು ಎಂಬುದನ್ನು ವಿವರಿಸಿದರು.
ರಾಜ್ಯ ಅಲೆಮಾರಿ ಬುಡಕಟ್ಟು ಸಮುದಾಯದ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ ಹುಲ್ಲು ನೀರಿನ ಜುಂಜಪ್ಪನ ಕುರಿತು ಮಾತನಾಡಿ, ಪಶುಪಾಲನಾ ವೃತ್ತಿಯೇ ಮುಖ್ಯವಾಗಿದ್ದ ಜುಂಜಪ್ಪನ ಕಾಲದಲ್ಲಿ ವ್ಯಕ್ತಿಯ ಸಂಪತ್ತನ್ನು ಜಾನುವಾರುಗಳ ಆಧಾರದಲ್ಲಿ ಅಳೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಪಶುಪಾಲಕ ಬುಡಕಟ್ಟು ಸಮುದಾಯಗಳು ಸಮೃದ್ಧವಾಗಿದ್ದವು ಎಂಬುದನ್ನ ತಿಳಿಸಿ, ಜಾನುವಾರಗಳನ್ನು ಉಳಿಸಿಕೊಳ್ಳಲು ಜಂಜಪ್ಪ ಹುಲ್ಲು ನೀರಿಗಾಗಿ ಪಟ್ಟ ಸಂಕಷ್ಟಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಕೆ.ರಂಗನಹಳ್ಳಿ ಜುಂಜಣ್ಣ, ಯಲಪೇನಹಳ್ಳಿ ಮಂಜುನಾಥ್ ಕಥನ ಗಾಯನ ಹಾಗೂ ಕುಂಬಾರಹಳ್ಳಿ ಚಿತ್ತಯ್ಯ ಗಣೆವಾದನ, ಕುಂಬಾರಹಳ್ಳಿಯ ಅರೆ ಕಲಾವಿದರು ನಡೆಸಿದ ಅರೆವಾದ್ಯ ಹಾಗೂ ಯಲಪೇನಹಳ್ಳಿ ಮಡಪ್ಪ ಸ್ವಾಮಿ ಕೋಲಾಟ ಕಲಾ ತಂಡದ ಮಕ್ಕಳು ನಡೆಸಿಕೊಟ್ಟ ಕೋಲಾಟ, ಧಾರವಾಡ ರಂಗಾಯಣದ ಕಲಾವಿದರು ಅಭಿನಯಿಸಿದ ಕಂದಗಲ್ಲರಿಗೆ ನಮಸ್ಕಾರ ನಾಟಕ ಪ್ರೇಕ್ಷಕರ ವಿಶೇಷ ಗಮನ ಸೆಳೆದವು.
ಜಾನಪದ ವಿದ್ವಾಂಸ ಹಾಗೂ ಪ್ರಾಂಶುಪಾಲ ಹೊನ್ನಗೊಂಡನಹಳ್ಳಿ ಕರಿಯಣ್ಣ ಜುಂಜಪ್ಪನ ಕುರಿತ ಹಾಡುಗಳನ್ನು ಹಾಡಿದ್ದು, ಎಲ್ಲರ ಗಮನ ಸೆಳೆಯಿತು. ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಗೋಮಾರದಹಳ್ಳಿ ಮಂಜುನಾಥ್, ಸಂಚಾಲಕ ಹಾಗೂ ಶಿಕ್ಷಕ ಆರ್.ತಿಪ್ಪೇಸ್ವಾಮಿ, ರಂಗ ಸಂಘಟಕ ಅಂಕಸಂದ್ರ ಪ್ರೇಮ್ ಕುಮಾರ್, ಕಳುವರಹಳ್ಳಿ ಸತೀಶ್, ಡಿ ವಿವೇಕಾನಂದ ಹಾಜರಿದ್ದರು.


