ಪೊಲೀಸರು ನೀಡಿದ ವಾರಂಟ್ ಗೆ ಹೆದರಿಕೊಂಡು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಹಾರ ರಾಜ್ಯದ ನಳಂದಾ ಜಿಲ್ಲೆಯ ರಾಜಗೀರ್ ಧರ್ಮಶಾಲೆಯಲ್ಲಿ ನಡೆದಿದೆ. ಪ್ರವಾಸದ ನೆಪದಲ್ಲಿ ಬಿಹಾರಕ್ಕೆ ತೆರಳಿದ್ದ ನಾಗಪ್ರಸಾದ್ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡವರನ್ನು ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಜಿ.ಆರ್. ಸುಮಂಗಲ, ನಾಗಪ್ರಸಾದ್, ಶಿಲ್ಪಾ ಮತ್ತು ಶ್ರುತಾ ಎಂದು ಗುರುತಿಸಲಾಗಿದೆ.

ನಾಗಪ್ರಸಾದ್ ಅವರ ಸ್ವಂತ ತಂಗಿ ಸುಮಂಗಲ ಪುತ್ರ ಅಮೋಘ ಕೀರ್ತಿ ಆನ್ ಲೈನ್ ಫ್ರೀ ಫೈರ್ ಗೇಮ್ ಗೆ ದಾಸನಾಗಿದ್ದ, ಇದರಿಂದ ಅವನ ಮಾವ ನಾಗಪ್ರಸಾದ್ ಬೇಸತ್ತು ಹೋಗಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 8, 2025ರಂದು ಅಮೋಘ ಕೀರ್ತಿಯ ಹತ್ಯೆಯಾಗಿತ್ತು. ಈ ಹತ್ಯೆಯಲ್ಲಿ ಅವನ ಮಾವ ನಾಗೇಂದ್ರ ಪ್ರಸಾದ್ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದ್ದು, ಅವರ ಬಂಧನಕ್ಕೆ ಪೊಲೀಸರು ವಾರೆಂಟ್ ಹೊರಡಿಸಿದ್ದರು ಎನ್ನಲಾಗಿದೆ. ಇದರಿಂದ ನಾಗಪ್ರಸಾದ್ ನೊಂದಿದ್ದರು ಎಂದು ತಿಳಿದುಬಂದಿದೆ.
ನಾಗಪ್ರಸಾದ್ ಸೇರಿದಂತೆ ನಾಲ್ವರು ಬಿಹಾರಕ್ಕೆ ಪ್ರವಾಸ ಹೋಗಿದ್ದರು. ನಳಂದಾ ಜಿಲ್ಲೆಯ ರಾಜಗೀರ್ ಧರ್ಮಶಾಲೆಯಲ್ಲಿ ಉಳಿದುಕೊಂಡಿದ್ದ ಅವರು ಕೊಠಡಿಯಿಂದ ವಾಸನೆ ಬರುತ್ತಿತ್ತು. ಇದರಿಂದ ಧರ್ಮಶಾಲೆಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಕೊಠಡಿಯ ಬಾಗಿಲು ತೆಗೆದಾಗ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ


