ತುಮಕೂರಿನ ಸಿದ್ದಗಂಗಾ ವಸ್ತು ಪ್ರದರ್ಶನದಲ್ಲಿ ಯುವಜನರು, ರೈತರು ಮತ್ತು ಸಾರ್ವಜನಿಕರು ಕಲಿಯುವಂತಹ ಸಾಕಷ್ಟು ವಿಚಾರಗಳಿದ್ದು, ಜನರು ಕುಟುಂಬ ಸಮೇತ ಬಂದು ಇಂತಹ ವಸ್ತು ಪ್ರದರ್ಶನವನ್ನು ನೋಡಿ ಆನಂದಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ವತಿಯಿಂದ ಆಯೋಜಿಸಿದ್ದ 64ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಸ್ತು ಪ್ರದರ್ಶನದಲ್ಲಿ ಅರ್ಟಿಪಿಷಿಯಲ್ ಇಂಟಲಿಜೆನ್ಸ್ ಹಾಗೂ ಇನ್ನಿತರ ಅತ್ಯಾಧುನಿಕ ವಿಷಯಗಳ ಕುರಿತು ಮಕ್ಕಳು ಪ್ರಾತ್ಯಕ್ಷಿಕೆಗಳನ್ನು ರಚಿಸಿ, ಅದನ್ನು ಬಂದವರಿಗೆ ವಿವರಿಸುವ ಮೂಲಕ ತಾವು ಕಲಿತು, ಇತರರಿಗೂ ಕಲಿಸುವ ಕೆಲಸ ಮಾಡುತ್ತಿದ್ದಾರೆ. ನಿಜಕ್ಕೂ ಇದು ಸಂತೋಷತರುವ ಕೆಲಸ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ನಗರ ಶಾಸಕ ಜಿ.ಬಿ.ಜೋತಿಗಣೇಶ್, ಆರು ದಶಕಗಳ ಹಿಂದೆ ಡಾ. ಶಿವಕುಮಾರ ಶ್ರೀಗಳು ಜನರಿಗೆ ಮಾಹಿತಿ ನೀಡುವ ಸಲುವಾಗಿ ಆರಂಭಿಸಿದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಕೃಷಿ ಮತ್ತು ಇತರೆ ಕ್ಷೇತ್ರಗಳಲ್ಲಿ ಆಗಿರುವ ಹೊಸ ಹೊಸ ಬೆಳೆವಣಿಗೆಯ ಕುರಿತು ಜನರಿಗೆ ಮಾಹಿತಿ ಜೊತೆಗೆ ಮಾರ್ಗದರ್ಶನ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಇದರ ಉಪಯೋಗವನ್ನು ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಿದ್ದಗಂಗಾ ಮಠದಲ್ಲಿ ನಡೆಯುತ್ತಿರುವ ಈ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ಉದ್ದಾನ ಶಿವಯೋಗಿಗಳು ಆರಂಭಿಸಿದ ಈ ಜಾತ್ರೆಯನ್ನು, ಶಿವಕುಮಾರಸ್ವಾಮೀಜಿ ಕೃಷಿ ಮತ್ತು ಕೈಗಾರಿಕೆಗಳ ಮಾಹಿತಿ ನೀಡಲು ವಸ್ತು ಪ್ರದರ್ಶನ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ವಸ್ತು ಪ್ರದರ್ಶನ ನಡೆಯುತ್ತಿದೆ. ಜಾನುವಾರುಗಳ ಕ್ರಯ, ವಿಕ್ರಯಕ್ಕೆ ಸಿದ್ದಗಂಗಾ ಜಾತ್ರೆ ಒಂದು ಉತ್ತಮ ವೇದಿಕೆಯಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ನೂರುನ್ನಿಸಾ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಿದ್ದಗಂಗಾ ವಿದ್ಯಾಸಂಸ್ಥೆಯ ಸಿಇಓ ಜಯವಿಭವಸ್ವಾಮಿ, ವಸ್ತು ಪ್ರದರ್ಶನ ಟ್ರಸ್ಟ್ನ ಕಾರ್ಯದರ್ಶಿ ಪ್ರೊ.ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್, ಕೆ.ಬಿ.ರೇಣುಕಯ್ಯ, ಸಾಂಸ್ಕೃತಿಕ ಸಂಚಾಲಕ ಉಮಾಮಹೇಶ್, ಸಹ ಸಂಚಾಲಕ ಎಂ.ನಂದೀಶ್ ಇದ್ದರು.


