ರಾಜ್ಯದಲ್ಲಿ ಭೂ ಬಳಕೆ ಮತ್ತು ಭೂ ಹೊದಿಕೆ ನೀತಿಗೆ ಒತ್ತಾಯಿಸಿ ಹಾಗೂ ರೈತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಕಂಟಕವಾಗಿರುವ ಪ್ರಸ್ತಾಪಿತ ನಂದಿಹಳ್ಳಿ-ಮಲ್ಲಸಂದ್ರ-ವಸಂತ ನರಸಾಪುರ ಔಟರ್ ರಿಂಗ್ರಸ್ತೆ ಯೋಜನೆಯಿಂದ ಸರಕಾರ ಹಿಂದೆ ಸರಿಯಬೇಕೆಂದು ಒತ್ತಾಯಿಸಿ ಫೆ.8 ರಂದು ತುಮಕೂರು ಜಿಲ್ಲೆಯ ಗೂಳೂರು ಬಳಿಯ ಶೂಲದ ಆಂಜನೇಯಸ್ವಾಮೀ ದೇವಾಲಯದ ಬಳಿ ಬೃಹತ್ ರೈತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕ ಸಿ.ಯತಿರಾಜು ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇರುವ ಅತಿ ಕಡಿಮೆ ಭೂಮಿಯನ್ನು, ಬೇಡಿಕೆ ಇರುವ ಜನರಿಗೆ ಹಂಚಲು ಸರಕಾರಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮ ಸರಕಾರದ ಯೋಜನೆಗಳಿಗೂ ಭೂಮಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಭೂ ಬಳಕೆ ಮತ್ತು ಭೂ ಹೊದಿಕೆ ನಿಯಮ ಜಾರಿಗೆ ತಂದು, ಭೂ ಮಾಫೀಯ ಪಾಲಾಗದಂತೆ ರೈತರ ಫಲವತ್ತಾದ ಭೂಮಿಯನ್ನು ತಡೆ ಹಿಡಿಯಬೇಕಿದೆ ಎಂದರು.
ಸರಕಾರದ ಮುಂದೆ ಬಗರ್ ಹುಕುಂ ಸಾಗುವಳಿದಾರರ ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ. ಆದರೆ ಸರಕಾರ ಮಾತ್ರ ರಸ್ತೆ, ಇನ್ನಿತರ ಯೋಜನೆಗಳ ಹೆಸರಿನಲ್ಲಿ ಪಟ್ಟಭದ್ರರಿಗೆ ಭೂಮಿ ನೀಡುತ್ತಾ, ಬಡವರನ್ನು ಕಡೆಗಣಿಸುತ್ತಿದೆ. ಗ್ರಾಮ ಸಭೆಗಳನ್ನು ನಡೆಸದೆ, ರೈತರೊಂದಿಗೆ ಚರ್ಚಿಸದೆ ತನ್ನ ಮನಸ್ಸಿಗೆ ಬಂದಂತೆ ಭೂಮಿಯನ್ನು ಹರಾಜು ಹಾಕಲು ಹೊರಟಿದೆ. ಸರಕಾರದ ನೀತಿ ಹೀಗೆಯೇ ಮುಂದುವರೆದರೆ ರೈತರು ಒಗ್ಗೂಡಿ ಅಸಹಕಾರ ಚಳವಳಿ ನಡೆಸುವುದು ಅನಿವಾರ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಪ್ರಸ್ತಾಪಿತ 44 ಕಿ.ಮಿ.ಗಳ ರಿಂಗ್ ರಸ್ತೆಗೆ ಸುಮಾರು 26 ಹಳ್ಳಿಗಳ 750ಕ್ಕೂ ಹೆಚ್ಚು ರೈತರ 765 ಎಕರೆ ಭೂಮಿ ವಶಪಡಿಸಿಕೊಳ್ಳಲು ಎನ್.ಹೆಚ್.ಎ.ಐ ಮುಂದಾಗಿದೆ. ಪ್ರಸ್ತಾಪಿತ ಭೂಮಿಯಲ್ಲಿ ಶೇ70ರಷ್ಟು ಭೂಮಿಯಲ್ಲಿ ಅಡಿಕೆ, ತೆಂಗು, ಇನ್ನಿತರ ತೋಟಗಾರಿಕಾ ಬೆಳೆಗಳಿವೆ. ಆದರೆ ಪಹಣಿಯಲ್ಲಿ ಋಷ್ಕಿ ಎಂದು ತೋರಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು, ಶಾಸಕರಿಗೆ ಮನವಿ ಮಾಡಿದರೂ ಎನು ಪ್ರಯೋಜನವಾಗಿಲ್ಲ. ಸರಕಾರ ಹೀಗೆಯೇ ಯೋಜನೆಗಳ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳತ್ತಲೇ ಮುಂದುವರೆದರೆ ಶೀಘ್ರದಲ್ಲಿಯೇ ಆಹಾರದ ಕೊರತೆ ಎದುರಾಗುವುದು ಖಂಡಿತ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಏಕತಾ ಪರಿಷತ್ತಿನ ಪಿ.ವಿ.ರಾಜಗೋಪಾಲ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್.ಪಾಟೀಲ್, ಚಿಂತಕ ಕೆ.ದೊರೈರಾಜು, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಗೋವಿಂದರಾಜು, ಎಐಕೆಕೆಎಂ.ಎಸ್ನ ಸ್ವಾಮಿ, ಎಐಕೆಎಸ್ನ ಕಂಬೇಗೌಡ ಪಾಲ್ಗೊಳ್ಳಲಿದ್ದಾರೆ.
ರೈತ ಸಂಘದ ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಎಐಕೆಎಸ್ನ ಕಂಬೇಗೌಡ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ರೈತರಾದ ಉದಯ ನಂದಿಹಳ್ಳಿ, ಸಿದ್ದಗಂಗಯ್ಯ, ಸುರೇಶ್, ರಾಜಶೇಖರ್, ನಿಂಗರಾಜು ಇದ್ದರು.


