Wednesday, February 4, 2026
Google search engine
Homeಮುಖಪುಟಮತದಾರರು ಮತದಾನದಿಂದ ವಂಚಿತರಾಗಬಾರದು-ವಸ್ತ್ರದ್

ಮತದಾರರು ಮತದಾನದಿಂದ ವಂಚಿತರಾಗಬಾರದು-ವಸ್ತ್ರದ್

ಮತದಾರರ ಜಾಗೃತಿ ಯುದ್ದಕಾಲೇ ಶಸ್ತ್ರಾಭ್ಯಾಸ ಅಂಥ ಆಗಬಾರದು. ಇದು ನಿರಂತರ ಪ್ರಕ್ರಿಯೆ ಆಗಿದೆ ಎಂದು ಚುನಾವಣಾ ಆಯೋಗದ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಹೇಳಿದ್ದಾರೆ.

ತುಮಕೂರು ಜಿಲ್ಲಾ ಪಂಚಾಯತ್‌ನಲ್ಲಿ ಬುಧವಾರ ವ್ಯವಸ್ಥಿತ ಮತದಾರರ ಸಾಕ್ಷರತೆ ಹಾಗೂ ಚುನಾವಣಾ ಪಾಲ್ಗೊಳ್ಳುವಿಕೆ ಸ್ವೀಪ್ ಚಟುವಟಿಕೆ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮತದಾರರನ್ನು ಚುನಾವಣೆಗೆ ಸಜ್ಜುಗೊಳಿಸುವುದು ನಿರಂತರ ಪ್ರಕ್ರಿಯೆ. ಚುನಾವಣೆ ಹತ್ತಿರ ಬಂದಾಗ ಮಾಡುವ ಕೆಲಸವಲ್ಲ. ಈ ನಿಟ್ಟಿನಲ್ಲಿ ಸ್ವೀಪ್ ಸಂಬಂಧಿತ ಅಧಿಕಾರಿಗಳು ಪ್ರಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದರು.

ಒಬ್ಬ ಮತದಾರರೂ ಮತದಾನದಿಂದ ವಂಚಿತರಾಗಬಾರದು ಎಂಬುದು ಚುನಾವಣಾ ಆಯೋಗದ ಉದ್ದೇಶ. ಈ ಕಾರಣದಿಂದ ಮತದಾರರ ಬೇಡಿಕೆಗನುಸಾರ ಎಲ್ಲ ಸೌಲಭ್ಯವನ್ನೂ ಮಾಡಬೇಕಿದೆ. ಈ ಚಟುವಟಿಕೆಯನ್ನು ನಿಯೋಜಿತ ಅಧಿಕಾರಿಗಳು ಮತದಾರರಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮತದಾರರು ಸರಿಯಾಗಿ ಚುನಾವಣೆಯಲ್ಲಿ ಪಾಲ್ಗೊಂಡಲ್ಲಿ ಮಾತ್ರ ಆಯೋಗದ ಉದ್ದೇಶ ಈಡೇರಲಿದೆ ಎಂದ ಅವರು, ದೇಶದಲ್ಲಿ ಆಗುವ ಎಲ್ಲ ಚುನಾವಣೆ ಸಂಬಂಧಿತ ವಿಚಾರಗಳೂ ನಿಯೋಜಿತ ಅಧಿಕಾರಿಗಳಿಗೆ ತಿಳಿದಿರಬೇಕು. ಆಗ ಮಾತ್ರ ಸ್ವೀಪ್ ಚಟುವಟಿಕೆ ಯಶಸ್ವಿ ಆಗಲಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಶೀಲನೆ, ಹೊಸ ಮತದಾರರ ನೋಂದಣಿ ಇತ್ಯಾದಿ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿದ್ದು, ಜಿಲ್ಲೆಯ ಎಲ್ಲ ನಿಯೋಜಿತ ಅಧಿಕಾರಿಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದರು.

ಸಭೆಯಲ್ಲಿ ಮತದಾರರ ಸಾಕ್ಷರತಾ ಸಂಘಗಳು, ಚುನಾವಣಾ ಜಾಗೃತಿ ಸಂಘಗಳ ಬಗ್ಗೆ ಚರ್ಚಿಸಲಾಯಿತು. ಸಂಬಂಧಿತ ಎಲ್ಲ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular