ತುಮಕೂರು ನಗರದ ಸಮೀಪದ ರಾಮದೇವರಬೆಟ್ಟದ ತಪ್ಪಲಿನಲ್ಲಿ ಅವ್ಯಾಹತವಾಗಿ ಕ್ರಶರ್, ಕ್ವಾರಿ ನಡೆಯುತ್ತಿದ್ದು, ಇದರಿಂದ ರಾಮದೇವರಬೆಟ್ಟದ ತಪ್ಪಲಿನ ಜೀವವೈವಿಧ್ಯತೆ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೃಷಿ, ಜಲಚರ, ಪರಿಸರ ಹಾನಿಯಾಗುತ್ತಿದೆ. ಸಂಬಂಧಿಸಿದ ಇಲಾಖೆಗಳಿಗೆ ಹಾನಿಯ ಅರಿವಿದ್ದರೂ ಕಣ್ಣುಮುಚ್ಚಿಕೊಂಡು ಅನುಮತಿ ನೀಡಿರುವುದೇ ಇದಕ್ಕೆ ಕಾರಣ ಎಂದು ಹೈ ಕೋರ್ಟ್ ನ್ಯಾಯವಾದಿ ರಮೇಶ್ ನಾಯಕ್ ಎಲ್. ಹೇಳಿದ್ದಾರೆ.
ಪ್ರಕೃತಿ, ಪರಿಸರದ ಮೇಲಿನ ಹಾನಿ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾರೂಬ್ಬರೂ ಧನಾತ್ಮಕವಾಗಿ ಸ್ಪಂದಿಸಿಲ್ಲ, ಈ ಬಗ್ಗೆ ತಾವು ಹೈ ಕೋರ್ಟ್ಗೆ ಸಾರ್ವಜನಿಕ ಅರ್ಜಿ ಸಲ್ಲಿಸಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ತುಮಕೂರು ನಗರ ಹಾಗೂ ಸಿದ್ಧಗಂಗಾ ಮಠಕ್ಕೆ ಅತಿ ಸಮೀಪವಿರುವ ರಾಮದೇವರಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಧೂಳು ಆವರಿಸಿ ಜನಜೀವನದ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಶ್ರದ್ಧಾ ಕೇಂದ್ರವಾಗಿದ್ದ ರಾಮದೇವರಬೆಟ್ಟವು ಕಲ್ಲುಗಣಿಗಾರಿಕೆಯಿಂದ ಇಬ್ಭಾಗವಾಗಿದೆ. ಐತಿಹಾಸಿಕ ದೇವರಾಯನದುರ್ಗ ಮಿಸಲು ಆರಣ್ಯಪ್ರದೇಶದ ಸುತ್ತಮುತ್ತಲಿನ ಮೈದಾಳ, ಪಂಡಿತನಹಳ್ಳಿ, ಮಾರನಾಯಕನಪಾಳ್ಯ, ಅರೆಗುಜ್ಜನಹಳ್ಳಿ, ದುರ್ಗದಹಳ್ಳಿ, ಸೇಟುಪಾಳ್ಯ ಪ್ರದೇಶಗಳಲ್ಲಿ ಕಲ್ಲುಗಣಿಗಾರಿಗೆ ವ್ಯಾಪಕವಾಗಿ ನಡೆಯುತ್ತಿದೆ. ಮುಖ್ಯವಾಗಿ ಮೈದಾಳ ಗ್ರಾಮಕ್ಕೆ ಹೊಂದಿಕೊಂಡಿರುವ ರಾಮದೇವರಬೆಟ್ಟದ ತಪ್ಪಲಿನಲ್ಲಿ ಸುಮಾರು 20 ಎಕರೆ ಪ್ರದೇಶ ವಿಸ್ತೀರ್ಣದಲ್ಲಿ ಬೆಟ್ಟವನ್ನೇ ಕಡಿದುಹಾಕಲಾಗಿದೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಒಳಪಡಲಿರುವ ಮೈದಾಳ, ಸುತ್ತಮುತ್ತಲ ಗ್ರಾಮಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ನಗರದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಇಷ್ಟೆಲ್ಲದರ ಅರಿವಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಣಿಗಾರಿಕೆಗೆ ಅನುಮತಿ ನೀಡಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ತಾವು ನೀಡಿದ ದೂರಿನ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಅಧಿಕಾರಿಗಳು ಜನವರಿ 17ರಂದು ಮೈದಾಳಕ್ಕೆ ಕಲ್ಲುಗಣಿಗಾರಿಕೆ ಸ್ಥಳ ಮಹಜರಿಗೆ ತೆರಳಿದ್ದಾಗ ಕ್ರಷರ್-ಕ್ವಾರಿ ದಣಿಗಳ ಬೆಂಬಲಿಗರು ಅಡ್ಡಗಟ್ಟಿ ತಡೆದಿದ್ದಾರೆ ಎಂದು ಗೊತ್ತಾಗಿದೆ. ಈ ವೇಳೆ ಅಧಿಕಾರಿಗಳು ರಸ್ತೆಯಲ್ಲೇ ಸ್ಥಳ ಮಹಜರು ಶಾಸ್ತ್ರ ಮುಗಿಸಿದ್ದಾರೆ. ನಂತರ ಈ ಬಗ್ಗೆ ಅಧಿಕಾರಿಗಳು ಪೊಲೀಸರಿಗೂ ದೂರು ನೀಡಿಲ್ಲ, ಪೊಲೀಸ್ ರಕ್ಷಣೆಯಲ್ಲಿ ಸ್ಥಳ ಪರಿಶೀಲನೆ, ಕರ್ತವ್ಯಕ್ಕೆ ಅಡ್ಡಿ ವಿರುದ್ಧ ಕ್ರಮಕ್ಕೂ ಪ್ರಯತ್ನವನ್ನೂ ಮಾಡಿಲ್ಲ ಎಂದು ಹೇಳಿದ್ದಾರೆ.


