ತುಮಕೂರಿನ ಸಿದ್ದಗಂಗಾ ಮಠದ 63ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆಬ್ರವರಿ 6 ರಿಂದ 20 ರವರೆಗೆ ನಡೆಯಲಿದೆ ಎಂದು ವಸ್ತುಪ್ರದರ್ಶನ ಟ್ರಸ್ಟ್ ಕಾರ್ಯದರ್ಶಿ ಬಿ.ಗಂಗಾಧರಯ್ಯ ತಿಳಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೃಷಿ, ಕೈಗಾರಿಕೆಗಳ ಮಾಹಿತಿಯ ಜೊತೆಗೆ, ಮನರಂಜನೆಯನ್ನು ವಸ್ತು ಪ್ರದರ್ಶನಕ್ಕೆ ಬರುವ ಜನರಿಗೆ ಒದಗಿಸಲಿದೆ ಎಂದರು.
ವಸ್ತು ಪ್ರದರ್ಶನದಲ್ಲಿ ಈ ಬಾರಿ ರಾಜ್ಯ ಮತ್ತು ಕೇಂದ್ರ ಸರಕಾರದ 21 ಮಳಿಗೆಗಳು ಹಾಗೂ ಗೃಹಯೋಪಯೋಗಿ ಹಾಗೂ ಆಹಾರ ಪದಾರ್ಥಗಳು ಸೇರಿದ 175 ಖಾಸಗಿ ಮಳಿಗೆಗಳು ಸೇರಿದಂತೆ ಒಟ್ಟು 195 ಮಳಿಗೆಗಳು ಈ ಬಾರಿ ವಸ್ತು ಪ್ರದರ್ಶನದಲ್ಲಿ ನೋಡುಗರಿಗೆ ದೊರೆಯಲಿವೆ ಎಂದರು.
ವಸ್ತು ಪ್ರದರ್ಶನ ಟ್ರಸ್ಟ್ ಜಂಟಿ ಕಾರ್ಯದರ್ಶಿ ಕೆಂ.ಬಾ ರೇಣುಕಯ್ಯ ಮಾತನಾಡಿ, 20 ದಿನಗಳ ಕಾಲ ನಡೆಯುವ ಸಿದ್ದಗಂಗಾ ವಸ್ತು ಪ್ರದರ್ಶನದ ತೆರೆದ ರಂಗಮಂದಿರದಲ್ಲಿ 31 ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇವುಗಳಲ್ಲಿ 13 ನಾಟಕಗಳ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸಿದ್ದು, ಇದರಲ್ಲಿ 7 ಸಾಮಾಜಿಕ ನಾಟಕಗಳಿಗೆ ಅವಕಾಶ ನೀಡಲಾಗಿದೆ. ಬೆಳ್ಳಿ ಪಲ್ಲಕ್ಕಿ ದಿನ ಮಿಮಿಕ್ರಿ ಗೋಪಿ ತಂಡದಿಂದ ಇಡೀ ರಾತ್ರಿ ನೆಗೆ ಹಬ್ಬ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಫೆ.6 ರಂದು ಸಂಜೆ 6:30ಕ್ಕೆ ಆರಂಭವಾಗಲಿದ್ದು, ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಶಾಸಕರಾದ ಬಿ.ಸುರೇಶಗೌಡ. ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಎಸ್ಪಿ ಅಶೋಕ್.ಕೆ.ವಿ, ಪಾಲಿಕೆ ಆಯುಕ್ತೆ ಶುಭ.ಬಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಿದ್ದಗಂಗಾ ಮಠದ ವ್ಯವಸ್ಥಾಪಕ ಎಸ್.ವಿಶ್ವನಾಥಯ್ಯ, ಕಾರ್ಯದರ್ಶಿ ಬಿ.ಗಂಗಾಧರಯ್ಯ, ಜಂಟಿ ಕಾರ್ಯದರ್ಶಿಗಳಾದ ಎಸ್.ಶಿವಕುಮಾರ್, ಕೆ.ಬಿ.ರೇಣುಕಯ್ಯ, ಸಮನ್ವಯಾಧಿಕಾರಿ ಆನಂದ್, ಸಂಚಾಲಕ ಉಮಾಮಹೇಶ್ ಇದ್ದರು.


