Wednesday, February 4, 2026
Google search engine
Homeಮುಖಪುಟಗಾಂಧೀಜಿ ವಿಚಾರಧಾರೆ ಕೊಲ್ಲುತ್ತಿರುವ ಯುವಜನತೆ

ಗಾಂಧೀಜಿ ವಿಚಾರಧಾರೆ ಕೊಲ್ಲುತ್ತಿರುವ ಯುವಜನತೆ

ಇಡೀ ವಿಶ್ವ ಮಹಾತ್ಮಗಾಂಧಿಯವರನ್ನು ಸತ್ಯ ಮತ್ತು ಅಹಿಂಸೆಯ ಪ್ರತಿರೂಪವಾಗಿ ನೋಡುತ್ತಿದೆ. ಆದರೆ ನಮ್ಮ ದೇಶ ಕೆಲ ಸೋಷಿಯಲ್ ಮೀಡಿಯಾಗಳು ಗಾಂಧಿಯ ವಿರುದ್ದ ನಿರಂತರ ಅಪಪ್ರಚಾರ ಮಾಡುತ್ತಾ, ಗಾಂಧಿಯನ್ನು ಕೊಂದಂತೆ, ಗಾಂಧೀಜಿ ವಿಚಾರಧಾರೆಗಳನ್ನು ಕೊಲ್ಲುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೆಂಗಳೂರು ಗಾಂಧಿ ಭವನದ ಅಧ್ಯಕ್ಷ ನಾಡೋಜ ವೋಡೆ.ಪಿ.ಕೃಷ್ಣ ವಿಷಾದಿಸಿದ್ದಾರೆ.

ತುಮಕೂರಿನ ಬಾಪೂಜಿ ವಿದ್ಯಾಸಂಸ್ಥೆಯ ರವೀಂದ್ರ ಕಲಾನೀಕೇತನದ ಹೆಚ್.ಎಂ.ಗಂಗಾಧರಯ್ಯ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ್ದ ಸರ್ವೋದಯ ದಿನಾಚರಣೆ, ಮಹಾತ್ಮಗಾಂಧಿ ಆತ್ಮಕಥನ ನನ್ನ ಸತ್ಯಾನ್ವೇಷಣೆ ಮಹಾ ಕೃತಿಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗಾಂಧಿವಾದಿ ಎಂ.ಬಸವಯ್ಯ ವಿರಚಿತ “ಸತ್ಯಾನ್ವೇಷಣೆ” ಹಾಗೂ “ಫಾತುಕ ಲೋಕದಿಂದ ಗಾಂಧಿಯಾನದೆಡೆಗೆ” ಕೃತಿಗಳನ್ನು ಬಿಡುಡಗೆ ಮಾಡಿ ಮಾತನಾಡಿದ ಅವರು, ಯುವಜನರು ಸಹ ಏಕಾಗ್ರತೆಯ ಕೊರತೆಯಿಂದ ಸತ್ಯ, ಸುಳ್ಳುಗಳ ವಿಮರ್ಶೆ ಮಾಡದೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಗಾಂಧೀಜಿಯ ಆತ್ಮಚರಿತ್ರೆ ಮೈ ಎಕ್ಸ್ಪೆರಿಮೆಂಟ್ ಅಫ್ ಟ್ರೂಥ್‌ನಂತಹ ಮತ್ತೊಂದು ಕೃತಿ ಇದುವರೆಗೂ ಬಂದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಕಾನೂನಿನ ಪಾಠ ಮಾಡಿದರೆ, ಗಾಂಧೀಜಿ ಅವರ ಈ ಕೃತಿ ಜನರಿಗೆ ನೈತಿಕತೆಯ ಪಾಠ ಹೇಳಲಿದೆ. ಸತ್ಯಾಗ್ರಹವೆಂದರೆ ನ್ಯಾಯಕ್ಕಾಗಿ ನಿರಂತರ ಆಗ್ರಹ. ಗಾಂಧಿಯನ್ನು ದೈಹಿಕವಾಗಿ ಕೊಲ್ಲಲಾಗಿದೆಯೇ ಹೊರತು, ಗಾಂಧಿಯ ವಿಚಾರಧಾರೆಗಳಿಗೆ ಎಂದಿಗೂ ಸಾವಿಲ್ಲ. ಇಡೀ ಪ್ರಪಂಚವೇ ಗಾಂಧಿ ಮಾರ್ಗದಲ್ಲಿ ನಡೆಯಲು ಉತ್ಸುಕವಾಗಿದೆ. ಮೂಲಭೂತವಾದ, ಹಿಂಸಾವಾದ ಮತ್ತು ಕೋಮುವಾದ ಇವುಗಳ ವಿರುದ್ದ ಭಾರತೀಯರು ಹೋರಾಟ ರೂಪಿಸಬೇಕಿದೆ. ವಿಜ್ಞಾನ ಮತ್ತು ಆಧ್ಯಾತ್ಮವನ್ನು ಒಗ್ಗೂಡಿಸುವ ಕೆಲಸ ಆಗಬೇಕಿದೆ ಎಂದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಗಾಂಧೀಜಿಯನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಎಂ.ಬಸವಯ್ಯ ಬರೆದಿರುವ ಸತ್ಯಾನ್ವೇಷಣೆ ಹಾಗೂ ಡಾ.ಹೆಚ್.ಎಸ್.ಸುರೇಶ್ ಅವರು ಬರೆದಿರುವ ಘಾತಕ ಲೋಕದಿಂದ ಗಾಂಧಿಯಾನದೆಡೆಗೆ ಎರಡು ಪುಸ್ತಕಗಳನ್ನು ಜಿಲ್ಲೆಯ ಪ್ರತಿ ಶಾಲಾ, ಕಾಲೇಜುಗಳ ಗ್ರಂಥಾಲಯಗಳಲ್ಲಿ ದೊರೆಯುವಂತೆ ಮಾಡಲಿದ್ದೇವೆ. ಜಿಲ್ಲಾ ಕಾರಾಗೃಹದ ಖೈದಿಗಳಿಗೂ ನೀಡಲಾಗುವುದು ಎಂದು ಹೇಳಿದರು.

ಗಾಂಧಿ ಸ್ಮಾರಕ ನಿಧಿಯ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ಕೆಲವರು ಗಾಂಧಿ, ಅಂಬೇಡ್ಕರ್, ಬುದ್ದ, ಬಸವಣ್ಣನಂತಹ ದೊಡ್ಡವರನ್ನು ಅಪಹಾಸ್ಯ ಮಾಡಿ, ನಾವು ದೊಡ್ಡವರು ಎಂಬ ಭ್ರಮೆಯಲ್ಲಿ ಬದುಕುತಿದ್ದಾರೆ ಎಂದು ತಿಳಿಸಿದರು.

ಗಾಂಧಿ ಭವನದ ಕಾರ್ಯದರ್ಶಿ ನರೇಂದ್ರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಸವಯ್ಯ ವಹಿಸಿದ್ದರು. ಪರಿಸರವಾದಿ ಸಿ.ಯತಿರಾಜು, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಭಾಗ್ಯಮ್ಮ ಬಸವಯ್ಯ, ಉಪನ್ಯಾಸಕರಾದ ಎಚ್.ಗೋವಿಂದಯ್ಯ, ಸುಮಂಗಲ ಜೇಮ್ಸ್, ಪ್ರೊ.ಸಿದ್ದಿಬಾಬು, ಚಿದಾನಂದಸ್ವಾಮಿ. ಜಿ, ಬಿಂದುಶ್ರೀ, ಸುರೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular