Wednesday, February 4, 2026
Google search engine
Homeಮುಖಪುಟಸಮಾಜದಲ್ಲಿ ಬದಲಾವಣೆ ಕಂಡಿಲ್ಲ ಎನ್ನುವವರು ಅರೆಗುರುಡರು- ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್

ಸಮಾಜದಲ್ಲಿ ಬದಲಾವಣೆ ಕಂಡಿಲ್ಲ ಎನ್ನುವವರು ಅರೆಗುರುಡರು- ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್

ಕಳೆದ 50 ವರ್ಷಗಳಿಂದ ಬರಗೂರರು ಚಳವಳಿಯನ್ನು ಕಟ್ಟಿಕೊಂಡು ಬಂದವರು, ಚಳವಳಿಯನ್ನು ಹುಟ್ಟುಹಾಕಿದವರು. ಇದರ ಮೂಲಕವೇ ನೂರಾರು ಜನ ಕಲಾವಿದರನ್ನು ಹುಟ್ಟುಹಾಕಿದಂಥವರು. ಬೇರೆ ಬೇರೆ ಹಿನ್ನೆಲೆಯಿಂದ ಬಂದ ಕಲಾವಿದರು. ಯಾರು ಗಮನಕ್ಕೆ ಬರುತ್ತಿರಲಿಲ್ಲವೋ ಅಂಥವರನ್ನು ಮುನ್ನೆಲೆಗೆ ತರಬೇಕು ಅನ್ನೋ ಅಪೇಕ್ಷೆಯನ್ನು ಒಂದು ಪ್ರಯತ್ನವನ್ನು ನಿರಂತರವಾಗಿ ಮಾಡಿದರು ಎಂದು ಪ್ರಸಿದ್ದ ವಿಮರ್ಶಕ ಡಾ.ಎಚ್.ಎಸ್. ರಾಘವೇಂದ್ರ ರಾವ್ ಹೇಳಿದರು.

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ತುಮಕೂರಿನ ಕನ್ನಡ ಭವನದಲ್ಲಿ  ಆಯೋಜಿಸಿದ್ದ ಹಿರಿಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ ಮತ್ತು ಲಲಿತಾ ಸಿದ್ದಬಸವಯ್ಯ ಅವರ ಕೊಡುಗೆಗಳನ್ನು ಕುರಿತ ಸಾಹಿತ್ಯ ಸಹವಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶಯ ನುಡಿಗಳನ್ನಾಡಿ ಅವರು ಮಾತನಾಡಿದರು.

ಖಚಿತವಾಗಿ ಜಾತ್ಯತೀತವಾಗಿ, ಖಚಿತವಾಗಿ ಜನಪರವಾಗಿ, ಖಚಿತವಾಗಿ ಬಹುತ್ವದ ಪರವಾಗಿ , ಹಲವು ಧರ್ಮಗಳು, ಹಲವು ಜಾತಿಗಳು, ಹಲವು ಹಿನ್ನೆಲೆಯಿಂದ ಬಂದವರು ಇದ್ದರು. ಇದು ಏಕವಲ್ಲ, ಅನೇಕ ಎಂಬುದನ್ನು ಮರೆತರೆ ನಾವೆಲ್ಲ ವಕೀಲರಾಗಿ ಬಿಡುತ್ತೇವೆಯೇ ಹೊರತು ಬುದ್ದಿಜೀವಿಗಳಾಗುವುದಿಲ್ಲ. ಈ ರೀತಿಯ ಹುಡುಕಾಟವನ್ನು ನಡೆಸಿದವರು, ಈ ರೀತಿಯ ಬದಲಾವಣೆಯನ್ನು ಮಾಡಲು ಹೊರಟವರು ಸಾಕಷ್ಟು ಯಶಸ್ಸನ್ನು ಪಡೆದವರು,ನಾವು ಸಮಾಜವನ್ನು ನೋಡಿ ಏನೂ ಬದಲಾಗಲ್ಲ, ಸ್ವಾರ್ಥ ಹೋಗಿಲ್ಲ, ಭ್ರಷ್ಟಾಚಾರ ಹೋಗಿಲ್ಲ, ಎಲ್ಲಾ ಹಾಗೇ ಇದೆ. ನಾಯಿ ಬಾಲ ಡೊಂಕು ಅನ್ನುವ ರೀತಿಯಲ್ಲಿ ಸಿನಿಕತನದ ತೀರ್ಮಾನಕ್ಕೆ ಬಂದರೆ ಅವರನ್ನು ನಾನು ಅರೆಗುರುಡರು ಎಂದು ಕರೆಯುತ್ತೇನೆ ಎಂದರು.
ಕಳೆದ 50 ವರ್ಷಗಳಲ್ಲಿ ಆರೋಗ್ಯಕರ ಬದಲಾವಣೆಯಾಗಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ನಮ್ಮ ಕಾಲದ ಕಚೇರಿಗಳನ್ನು ನೋಡಿದರೆ ಸಾಂಸ್ಕೃತಿಕ ವೇದಿಕೆಗಳನ್ನು ನೋಡಿದರೆ ನನ್ನ ಮಾತು ಎಷ್ಟು ನಿಜ ಅನ್ನಿಸದೆ ಇರುವುದಿಲ್ಲ. ಏಕಶಿಲಾಕೃತಿಯಲ್ಲಿ ಅನೇಕ ಧಾರೆಗಳು ಸೇರಿ ಹರಿಯುವ ಒಂದು ನದಿಯನ್ನು ಬಿಂಬಿಸುವಂತಹ ಕಾರ್ಯ ಆಗಿರುವುದರಲ್ಲಿ ಅನುಮಾನವೇ ಇಲ್ಲ. ಹೀಗೆ ಆಗು ಮಾಡಲಿಕ್ಕೆ ಪ್ರಯತ್ನಪಟ್ಟ ವ್ಯಕ್ತಿಯ, ಒಬ್ಬ ಸಾಮಾಜಿಕ ನಾಯಕನ ಸಾಹಿತ್ಯ ಮೀಮಾಂಸೆ, ಸಾಹಿತ್ಯ ತತ್ವ ವಿಭಿನ್ನವಾಗಿದ್ದರೆ, ತನ್ನದೇ ಆದ ಉದ್ದಿಶ್ಯಗಳನ್ನು ಹೊಂದಿದ್ದರೆ ಅದರಲ್ಲಿ ಯಾವ ತಪ್ಪೂ ಇಲ್ಲ ಎಂದರು.

ಒಬ್ಬ ಲೇಖಕನ ಜೀವನ ಶೈಲಿ, ಅವನ ಲೇಖನ ಶೈಲಿ, ಅವನು ಬದುಕುವ ಬಗೆ, ಅವನವಳು ಬರೆಯುವ ಬಗೆ, ಮತ್ತು ಅವರು ಸಾಮಾಜಿಕವಾಗಿ ತೊಡಗಿಕೊಳ್ಳುವ ಬಗೆ, ಸಮಾಜದೊಂದಿಗೆ ನಮ್ಮ ಸಂಬಂಧ ಯಾವ ರೀತಿಯದು ಅಂತ ಯೋಚಿಸಿ, ತೀರ್ಮಾನ ಮಾಡಿ, ಅದನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಯೋಜನೆ ಮಾಡುವುದು ಒಂದು ಒಳಗೊಳ್ಳುವಿಕೆ ಅಂತ ಹೇಳಬಹುದು. ಹೀಗೆ ಮಾಡುವವರು ಸಾಹಿತಿಗಳು, ಅವರು ರೂಪಿಸಿಕೊಳ್ಳುವ ಸಾಹಿತ್ಯ ತತ್ವ, ಸಾಹಿತ್ಯ ಸಿದ್ದಾಂತ ಅದಕ್ಕೂ ಅವರ ಬೇರೆ ಬಗೆಯ ತಿಳುವಳಿಕೆಗೂ ಇರುವ ಬೇರೆ ಸಂಬಂಧ ಯಾವುದು? ಒಬ್ಬ ಲೇಖಕ ರೂಪಿಸಿಕೊಳ್ಳುವ ಸಾಹಿತ್ಯ ತತ್ವ, ಆತನ ಗುರಿ, ಉದ್ದೇಶಗಳ ಸಾಧನೆಗಾಗಿ ಹೇಗೆ ನೆರವಾಗುತ್ತೆ, ಹೇಗೆ ಸಹಾಯಕವಾಗುತ್ತದೆ. ಇದನ್ನು ನಮ್ಮಲ್ಲಿ ಪ್ರತಿಯೊಬ್ಬರೂ ಕೇಳಿಕೊಳ್ಳಬೇಕಾದ ಪ್ರಶ್ನೆ. ಕೇಳಿಕೊಂಡಿರುವ ಪ್ರಶ್ನೆ. ಪಡೆದುಕೊಂಡ ಉತ್ತರಗಳು ಎಷ್ಟರ ಮಟ್ಟಿಗೆ ಯಶಸ್ವಿಯಾದವು ಎನ್ನುವ ಮಾತು ಬೇರೆ. ಆದರೆ ಈ ಸಂಬಂಧಗಳನ್ನು ನಿರ್ಲಕ್ಷಿಸಿದರೆ ಅನಗತ್ಯವಾಗಿ ನ್ಯಾಯ ನಿರ್ಣಯ ಮಾಡುವಂತಹ ಒಂದು ಅಪಾಯದ ಕುರಿತು ತಪ್ಪು ಮಾಡುತ್ತಿರುತ್ತೇವೆ. ವಿಮರ್ಶಕರಾದರೂ ಅಷ್ಟೇ, ಬುದ್ದಿಜೀವಿಗಳಾದರೂ ಅಷ್ಟೇ. ರಾಜಕೀಯದಲ್ಲಿರುವವರಾದರೂ ಅಷ್ಠೇನೆ. ನಮಗೆ ಯಾವುದು ಉಚಿತವೋ ಅದರ ಆಚೆಗಿನ ಸತ್ಯಗಳನ್ನು ಗಮನಿಸದೆ ಹೋದರೆ ನಾವು ಕೇಳಿದ ಚಿಂತನೆ, ಆಲೋಚನೆ ವಿಮರ್ಶೆ ಅಂತ ಕರೀತಿವಿ ಅದನ್ನು ಮೀರುವ ಸವಾಲು ಇಂತಹ ಸಂದರ್ಭದಲ್ಲಿ ಮಾತನಾಡಬೇಕಾದಂಥ, ಯೋಚನೆ ಮಾಡಬೇಕಾದಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

ಎರಡು ಬಗೆಯ ಲೇಖಕರ ಸಮುದಾಯದಲ್ಲಿ, ನಾಗರಿಕ ಸಮುದಾಯದ ನಡುವೆ ವರ್ಗೀಕರಣ ಮಾಡುವುದಕ್ಕೆ ಅವಕಾಶವಿದೆ. ಕೊನೆಗೂ ನಾವು ಪ್ರಶ್ನೆ ಕೇಳಿಕೊಳ್ಳಬೇಕಾಗಿ ಬಂದ್ರೆ ನಾನು ಕೊಡುವ ಖಚಿತವಾದ ಉತ್ತರ ಅಂದ್ರೆ ಸಾಮಾಜಿಕವಾದ, ಸಾಂಸ್ಕೃತಿಕವಾದ ರಾಜಕೀಯವಾದ ಬದಲಾವಣೆಗೆ ಸತತವಾಗಿ ಪ್ರಯತ್ನಪಟ್ಟಾಗ್ಯೂ ಒಬ್ಬ ಹೋರಾಟಗಾರ, ಒಬ್ಬ ಕಲಾವಿದ, ಇವರಿಬ್ಬರಲ್ಲಿ ಯಾರ ಪಾತ್ರ ಹೆಚ್ಚು ಮುಖ್ಯವಾದದ್ದು ಅನ್ನುವ ಪ್ರಶ್ನೆ ಕೇಳಿಕೊಂಡಾಗ ನಾವು ಕೊಡುವ ನಿಸ್ಸಂದೇಹದ ಉತ್ತರ ಎರಡನೆಯವರು ಅನಿಸುತ್ತದೆ ಎಂದರು.

ಇದು ಕೇವಲ ಗಾಂಧಿ ಮತ್ತು ಅಂಬೇಡ್ಕರ್ ರಂಥ ಹಿರಿಯರನ್ನು ನೋಡಿಕೊಂಡ ಮಾತನಾಡುವ ಮಾತಾಗಿರುವುದಿಲ್ಲ. ಎಲ್ಲಾ ಕಾಲದಲ್ಲಿಯೂ ಕೂಡ ಮನುಷ್ಯರ ಬದಲಾವಣೆಗಾಗಿ, ಸಮುದಾಯಗಳ ಬದಲಾವಣೆಗಾಗಿ ಸಮಾಜದ ಬದಲಾವಣೆಗಾಗಿ ಜವಾಬ್ದಾರಿಯುತ ಪ್ರಯತ್ನವನ್ನು ಮಾಡುತ್ತಿರುವ ಶಕ್ತಿ ಅದು ಹೆಚ್ಚು ವಿಶಾಲವಾದದ್ದು ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ.

ಹೋರಾಟಗಳಲ್ಲಿ ತೊಡಗಿಕೊಂಡವನು, ಸಾಹಿತಿಯೂ ಆದಾಗ, ಕಲಾವಿದನೂ ಅದಾಗ ಆತ ಕಟ್ಟಿಕೊಳ್ಳುವಂತಹ ಸಾಹಿತ್ಯ ತತ್ವ ಇದೆಯಲ್ಲ, ಆತ ನಡೆಯಬೇಕಾದಂತಹ ಕತ್ತಿಯಂಚಿನ ದಾರಿ ಇದೆಯಲ್ಲ, ಆ ದಾರಿ ಯಾವುದು? ಗಾಂಧೀಜಿಯವರಿಗಾಗಲಿ, ಅಂಬೇಡ್ಕರ್ ಅವರಿಗಾಗಲಿ ಈ ಬಿಕ್ಕಟ್ಟು, ಈ ಸವಾಲುಗಳು ಇಲ್ಲ. ಆದರೆ ನಮ್ಮ ಕಾಲದಲ್ಲಿ ಅದರಲ್ಲೂ ಕರ್ನಾಟಕದ, ಭಾರತದ ಬೇರೆಬೇರೆ ರಾಜ್ಯಗಳ ಸನ್ನಿವೇಶದಲ್ಲಿ ಈ ರೀತಿಯ ಸೃಷ್ಟಿ ಮತ್ತು ಬದಲಾವಣೆ ಎರಡರಲ್ಲೂ ಕಟ್ಟಿಕೊಂಡಂತಹ ರೀತಿಯಲ್ಲಿ ಇದ್ದಾರಲ್ಲ ಇವರ ಕೆಲಸವನ್ನು ಪ್ರೀತಿಯಿಂದ ಗೌರವದಿಂದ ಹಾಗೆಯೇ ತಿಳಿವಳಿಕೆಯಿಂದ ನೋಡಬೇಕಾದ ಜವಾಬ್ದಾರಿ ನಮ್ಮ ಸಮುದಾಯಕ್ಕೆ ಇದೆ ಎನ್ನುವುದು ನನ್ನ ಖಚಿತವಾದ ನಂಬಿಕೆ ಎಂದು ವಿವರಿಸಿದರು.

ಅಜೀಂ ಪ್ರೇಮ್ ಜಿ ಫೌಂಡೇಶನ್ ಮುಖ್ಯ ಸಂವಹನಾಧಿಕಾರಿ ಸುಧೀಶ್ ಬೆಂಕಟೇಶ್ ಪ್ರಾಸ್ತಾವಿಕ ಮಾತನಾಡಿದರು. ನಂತರ ನಡೆದ ಗೋಷ್ಠಿಯಲ್ಲಿ ಬರಗೂರರ ಸಾಹಿತ್ಯದಲ್ಲಿ ಪ್ರಧಾನ ಆಶಯ ಮತ್ತು ಅದರ ಅಭಿವ್ಯಕ್ತಿಯ ಸ್ವರೂಪದ ಕುರಿತು ತುಮಕೂರು ವಿವಿ ಕಲಾ ಕಾಲೇಜಿನ ಅಧ್ಯಾಪಕಿ ಡಾ.ಆಶಾ ಬಗ್ಗನಡು, ಬರಗೂರರ ಬದುಕು ಹೋರಾಟದ ಹೆಜ್ಜೆ ಗುರುತು ವಿಷಯದ ಕುರಿತು ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿದರು. ಸಾಹಿತಿ ಡಾ.ರಾಜಪ್ಪ ದಳವಾಯಿ ಬರಗೂರರ ಸಿನಿಮಾಗಳಲ್ಲಿ ಪ್ರತಿರೋಧದ ನೆಲೆಗಳು ಕುರಿತು ಮಾತನಾಡಿದರು.

ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ, ಲೇಖಕಿ ಲಲಿತಾ ಸಿದ್ದಬಸವಯ್ಯ, ಪತ್ರಕರ್ತ ಚ.ಹ.ರಘುನಾಥ್ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular