Wednesday, February 4, 2026
Google search engine
Homeಮುಖಪುಟನದಿ ಜೋಡಣೆ: ವಿಶೇಷ ಅಧಿವೇಶನದಲ್ಲಿ ಚರ್ಚಿಸಿ- ಮಾಜಿ ಸಂಸದ ಜಿ.ಎಸ್.ಬಸವರಾಜು ಆಗ್ರಹ

ನದಿ ಜೋಡಣೆ: ವಿಶೇಷ ಅಧಿವೇಶನದಲ್ಲಿ ಚರ್ಚಿಸಿ- ಮಾಜಿ ಸಂಸದ ಜಿ.ಎಸ್.ಬಸವರಾಜು ಆಗ್ರಹ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಈಗಾಗಲೇ ಬಜೆಟ್‌ನಲ್ಲಿ ಮಂಡಿಸಿರುವ ನದಿ ಜೋಡಣೆ ವಿಚಾರದ ಬಗ್ಗೆ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸುವಂತೆ ತುಮಕೂರಿನ ಮಾಜಿ ಸಂಸದ ಜಿ.ಎಸ್. ಬಸವರಾಜು ಒತ್ತಾಯಿಸಿದರು.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ಜೋಡಣೆ ವಿಚಾರವಾಗಿ ರಾಜ್ಯದಲ್ಲಿ ಜಿಲ್ಲೆ, ಜಿಲ್ಲೆಗಳ ಮಧ್ಯೆ ಈಗಾಗಲೇ ಹೋರಾಟಗಳು ಆರಂಭವಾಗಿವೆ. ಎಲ್ಲಾ ವರ್ಗದವರ ಅಭಿಪ್ರಾಯಗಳನ್ನು ಗಣನೆಗೆ ತೆಗದುಕೊಂಡು, ವಿಶೇಷ ವಿಧಾನಸಭಾ ಅಧಿವೇಶನದಲ್ಲಿ ಚರ್ಚಿಸಿ, ಪ್ರತಿಯೊಂದು ನದಿ ಪಾತ್ರದ ಇಂತಿಷ್ಟು ನೀರನ್ನು ಇಂತಹ ಪ್ರದೇಶಗಳಿಗೆ ಅಲೋಕೇಷನ್ ಮಾಡುತ್ತೇವೆ ಎಂಬ ಒಂದು ಸಮಗ್ರ ನೀರಿನ ಬಳಕೆಯ ಕಾನೂನು ರೂಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರನ್ನು ಆಗ್ರಹಿಸಿದರು.

ಗೋದಾವರಿ-ಕಾವೇರಿ ನದಿ ಜೋಡಣೆಯಲ್ಲಿ, ತೆಲಂಗಾಣ-43.64 ಟಿ.ಎಂ.ಸಿ, ಆಂಧ್ರ ಪ್ರದೇಶ- 45.27, ಟಿ.ಎಂ.ಸಿ, ತಮಿಳುನಾಡು-40.82 ಟಿ.ಎಂ.ಸಿ, ಕರ್ನಾಟಕ -15.89 ಟಿ.ಎಂ.ಸಿ ಮತ್ತು ಪುದುಚೇರಿ- 2.30 ಟಿ.ಎಂ.ಸಿ ಹಾಗೂ ಕರ್ನಾಟಕ ರಾಜ್ಯಕ್ಕೆ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯಲ್ಲಿ 18.50 ಟಿ.ಎಂ.ಸಿ ಅಡಿ ನೀರು ಸೇರಿದಂತೆ ಸುಮಾರು 166.42 ಟಿ.ಎಂ.ಸಿ ಅಡಿ ನೀರಿನ ಯೋಜನೆ ರೂಪಿಸುತ್ತಿದೆ. ಈ ಯೋಜನೆಯಿಂದ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಕುಡಿಯುವ ನೀರು, ಕೈಗಾರಿಕೆಗಳಿಗೆ ಮತ್ತು ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಲಿದೆ ಎಂದರು.

ಅದೇ ರೀತಿ ಅಘನಾಶಿನಿ-ವೇದಾವತಿ ನದಿ ಜೋಡಣೆಯಿಂದ ಸುಮಾರು 35.10 ಟಿ.ಎಂ.ಸಿ ಅಡಿ ನೀರಿನ ಯೋಜನೆಯ ಅಧ್ಯಯನವೂ ನಡೆಯುತ್ತಿದೆ. ಇದರಿಂದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಅನೂಕೂಲವಾಗಲಿದೆ ಎಂದು ಹೇಳಿದರು.

ಕಾಳಿ ನದಿಯಿಂದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಿಗೆ, ಕುಮಾರಧಾರ ನದಿ ನೀರನ್ನು ಎತ್ತಿನೊಳೆ ಯೋಜನೆಗೆ, ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಹೀಗೆ ರಾಜ್ಯಾದ್ಯಂತ ಅನೇಕ ಯೋಜನೆಗಳ ಅಧ್ಯಯನ ನಡೆಯುತ್ತಿದೆ. ತುಮಕೂರಿನ ಜಾಲಗುಣಿ ಸೇರಿದಂತೆ ಸುಮಾರು 10 ಕಡೆ ಹೊಸದಾಗಿ ‘ಬಫರ್ ಡ್ಯಾಂ’ ಗಳನ್ನು ನಿರ್ಮಾಣ ಮಾಡಲು ಯೋಜನೆ ಸಿದ್ಧವಾಗಬೇಕಿದೆ ಎಂದು ತಿಳಿಸಿದರು.

ಹೇಮಾವತಿ ಲಿಂಕ್ ಕೆನಾಲ್‌ಗೆ ನೇತ್ರಾವತಿ-ಹೇಮಾವತಿ ನದಿ ಜೋಡಣೆಯ ನೀರನ್ನು ಬಳಸಿಕೊಳ್ಳುವುದು ಸೂಕ್ತವಾಗಿದೆ. ಹೀಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ‘ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು’ ಯೋಜನೆಯಡಿಯಲ್ಲಿ ಪ್ರತಿಯೊಂದು ಪ್ರದೇಶಕ್ಕೂ ನದಿ ನೀರಿನ ಅಲೋಕೇಷನ್ ಮಾಡಬೇಕಿದೆ. ಇದಕ್ಕೂ ಸಹ ಅಧ್ಯಯನ ನಡೆಯುತ್ತಿದೆ. ಪ್ರತಿಯೊಂದು ಯೋಜನೆಗಳ ಕಡತದ ಅನುಸರಣೆಯನ್ನು ನಿರಂತರವಾಗಿ ಕುಂದರನಹಳ್ಳಿ ರಮೇಶ್ ಮಾಡುತ್ತಾ ಬಂದಿದ್ದಾರೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ರಾಷ್ಟಿçÃಯ ನದಿ ಜೋಡಣೆ (ಎನ್.ಪಿ.ಪಿ) ಯೋಜನೆಯಡಿಯಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಿಗೆ ಶ್ರಮಿಸಬೇಕಿದೆ. ಹಲವಾರು ವರ್ಷಗಳ ನಮ್ಮ ಹೋರಾಟಕ್ಕೆ ಪ್ರತಿಫಲ ದೊರೆಯಲಿದೆ. ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ನಿರ್ಣಯ ಈ ಎಲ್ಲಾ ಯೋಜನೆಗಳಿಗೆ ಪೂರಕವಾಗಿದೆ. ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯನವರ ಅಧ್ಯಯನಕ್ಕೆ ಮುಕ್ತಿ ಸಿಗಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕುಂದರನಹಳ್ಳಿ ರಮೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular