ದರ ಪರಿಷ್ಕರಣೆ ಸೇರಿದಂತೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋ ಚಾಲನೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲಾ ನಿರ್ಣಯಗಳನ್ನು ಜಾರಿಗೆ ತರಬೇಕು, ಹಾಗೂ ತುಮಕೂರು ನಗರದಲ್ಲಿ ಪರ್ಮಿಟ್ರಹಿತ ಆಟೋ ಚಾಲನೆಗೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಕನ್ನಡ ಕಸ್ತೂರಿ ಆಟೋಚಾಲಕರ ವೇದಿಕೆಯ ರಾಜ್ಯಾಧ್ಯಕ್ಷ ರುದ್ರಾರಾಧ್ಯ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವಾರು ಮನವಿಗಳ ನಂತರ 2018ರಲ್ಲಿ ಆಟೋದರ ಪರಿಷ್ಕರಣೆ ಮಾಡಿ, ಮಿನಿಮಮ್ 25 ರೂ ಹಾಗೂ ಅದರ ನಂತರದ ಒಂದು ಕಿ.ಮಿ. 12.50 ದರ ನಿಗದಿ ಮಾಡಿದ್ದರೂ ಇದುವರೆಗೂ ಜಾರಿಗೆ ಬಂದಿಲ್ಲ. ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿಲ್ಲ. ಕೂಡಲೇ ಪರಿಷ್ಕೃತ ದರ ಮತ್ತು ಆಟೋ ಮೀಟರ್ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ತುಮಕೂರು ನಗರ ಸೇರಿದಂತೆ ಜಿಲ್ಲೆಯ 10 ತಾಲೂಕುಗಳಿಂದ ಸುಮಾರು 12 ಸಾವಿರ ಆಟೋಗಳಿವೆ. ಅವುಗಳಲ್ಲಿ ಸುಮಾರು 8 ಸಾವಿರ ಆಟೋಗಳು ತುಮಕೂರು ನಗರದಲ್ಲಿಯೇ ಸಂಚರಿಸುತ್ತಿವೆ. ಆದರೆ 3184 ಆಟೋಗಳಿಗೆ ಮಾತ್ರ ಟಿಟಿಪಿ ನಂಬರ್ ನೀಡಲಾಗಿದೆ. ನಗರದಲ್ಲಿ ಸಂಚರಿಸುವ ಶೇ40ರಷ್ಟು ಆಟೋಗಳಿಗೆ ಮಾತ್ರ ನಗರದಲ್ಲಿ ಕಾರ್ಯಾಚರಿಸಲು ಪರ್ಮಿಟ್ ಇದೆ. ಉಳಿದವು ಬೇರೆ ಬೇರೆ ತಾಲೂಕುಗಳಿಂದ ಬಂದು ನಗರದಲ್ಲಿ ಸಂಚರಿಸುತ್ತಿವೆ. ಇದರಿಂದ ತುಮಕೂರು ನಗರದಲ್ಲಿ ಪರ್ಮಿಟ್ ಪಡೆದ ಆಟೋಗಳಿಗೆ ಬಾಡಿಗೆ ಕಡಿಮೆಯಾಗಿದೆ. ಹಾಗಾಗಿ ಸಾರಿಗೆ ಪ್ರಾಧಿಕಾರದ ಸಭೆಯ ನಿರ್ಣಯದಂತೆ ಡಿಸ್ಪ್ಲೇ ಕಾಡುಗಳನ್ನು ಕಡ್ಡಾಯಗೊಳಿಸಬೇಕು ಎಂದರು.
ಸರಕಾರ 2017ರಲ್ಲಿ ತುಮಕೂರು ನಗರವನ್ನು ಸ್ಮಾರ್ಟ್ಸಿಟಿಯಾಗಿ ಘೋಷಿಸಿದೆ. ಇದಕ್ಕೂ ಮುನ್ನ ನಗರದಲ್ಲಿ ಸುಮಾರು 176 ಆಟೋ ನಿಲ್ದಾಣಗಳಿದ್ದವು. ಆದರೆ ಇಂದು ಕೇವಲ 19 ಆಟೋ ನಿಲ್ದಾಣಗಳನ್ನು ಮಾತ್ರ ಗುರುತಿಸಲಾಗಿದೆ. ಜಿಲ್ಲಾಡಳಿತ, ನಗರಪಾಲಿಕೆ ಪ್ರತಿ ಬಸ್ ನಿಲ್ದಾಣದ ಪಕ್ಕದಲ್ಲಿ ಆಟೋ ನಿಲ್ದಾಣಕ್ಕೆ ಅವಕಾಶ ಕಲ್ಪಿಸಬೇಕು. ಬಸ್ ನಿಲ್ದಾಣಗಳಲ್ಲಿ ಇಳಿಯುವ ಜನರಿಗೆ ಕೂಗಳತೆಯ ದೂರದಲ್ಲಿ ಆಟೋ ಸೇವೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಹಲವಾರು ಬಾರಿ ಜಿಲ್ಲಾಡಳಿತ, ಸಾರಿಗೆ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಗಮನಹರಿಸಿಲ್ಲ. ವಿದ್ಯಾವಂತ ನಿರುದ್ಯೋಗಿಗಳು, ಬಡವರು ಆಟೋ ಚಾಲನೆಯಿಂದ ಜೀವನ ನಡೆಸುತಿದ್ದಾರೆ.
ಆಟೋ ನಿಲ್ಲಿಸಿಕೊಂಡು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಒಂದು ನಿಗದಿತ ಸ್ಥಳವಿಲ್ಲದಿದ್ದರೆ ಹೇಗೆ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಜಿಲ್ಲಾಡಳಿತ ಇದನ್ನು ಗಂಭಿರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಆಟೋ ಓಡಿಸಲು ಕನಿಷ್ಠ ಲಘು ವಾಹನ ಚಾಲನಾ ಪರವಾನಗಿ ಜೊತೆಗೆ, ಬ್ಯಾಡ್ಜ್ ಹೊಂದಿರಬೇಕು ಎಂಬ ನಿಯಮ ಜಾರಿಯಲ್ಲಿದೆ. ಆದರೆ ಕೆಲವರು ವಾಮ ಮಾರ್ಗದಲ್ಲಿ ಡ್ರೆöÊವರ್ಗಳ ಬಳಿ ಇರುವ ಬ್ಯಾಡ್ಜ್ ವಿತ್ ಡಿ.ಎಲ್.ನ್ನು ಬಳಸಿಕೊಂಡು ಆಟೋ ಚಾಲನೆ ಮಾಡುತ್ತಿದ್ದಾರೆ. ಸೂಕ್ತ ತರಬೇತಿ ಇಲ್ಲದ ಎಲ್ಲೋ ಬೋರ್ಡ ವಾಹನಗಳನ್ನು ಚಲಾಯಿಸಿ ಅಪಫಾತ ಮತ್ತೊಂದು ಸಂಭವಿಸಿದರೆ ಅನಾಹುತಗಳಿಗೆ ಹೊಣೆಯಾರು ಎಂಬುದಾಗಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಈ ರೀತಿ ಬ್ರೋಕರ್ಗಳಿಂದ ಬರುವ ಆಟೋಗಳಿಗೆ ನೊಂದಣಿ ಮಾಡಬಾರದು ಎಂದು ಆಗ್ರಹಿಸಿದರು.
ರವಿಕಿರಣ್, ಇಂತ್ತಿಯಾಜ್,ಶೌಕತ್ ಆಲಿ, ಇಲಿಯಾಜ್, ಯಲ್ಲಪ್ಪ, ಅಮಾನುಲ್ಲಾ, ರವಿಕುಮಾರ್ ಸೇರಿದಂತೆ ಹತ್ತಾರುಆಟೋಚಾಲಕರು ಪಾಲ್ಗೊಂಡಿದ್ದರು.


