ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಾರಿಗೆ ಬಸ್ಗಳ ಸಂಚಾರ ವಿರಳವಾಗಿದ್ದು ಬಸ್ಗಳ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.
ಕೆಎಸ್ಸಾರ್ಟಿಸಿ ನೌಕರರ ಮುಷ್ಕರದಿಂದಾಗಿ ಕಲ್ಪತರುನಾಡಿನ 10 ತಾಲ್ಲೂಕುಗಳಲ್ಲೂ ಸಹ ಸಾರಿಗೆ ಬಸ್ಗಳ ಸಂಚಾರದಲ್ಲಿ ಶೇ.50 ರಷ್ಟು ವ್ಯತ್ಯಯ ಉಂಟಾಗಿತ್ತು. ಹೀಗಾಗಿ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಬಸ್ಗಳ ಸೌಲಭ್ಯ ಇಲ್ಲದೆ ಊರುಗಳಿಗೆ, ಕೆಲಸ ಕಾರ್ಯಗಳಿಗೆ ತೆರಳಲು ಪ್ರಯಾಸಪಡುವಂತಾಯಿತು.
ಬೆಂಗಳೂರು- ತುಮಕೂರು ಮಧ್ಯೆ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸಿದವು. ಆದರೆ ಗ್ರಾಮೀಣ ಭಾಗದ ಕಡೆಗೆ ಹೋಗುವ ಬಸ್ಗಳ ಸಂಖ್ಯೆ ತೀರಾ ಕಡಿಮೆಯಾಗಿತ್ತು. ಇದರಿಂದ ಹಳ್ಳಿಗಳಿಗೆ ಹೋಗುವ ಪ್ರಯಾಣಿಕರು ನಗರದ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾದು ಕುಳಿತಿರುವ ದೃಶ್ಯಗಳು ಕಂಡು ಬಂತು.
ದೂರದ ಊರುಗಳಿಂದ ಬರುವ ಬಸ್ಗಳು ಮಾತ್ರ ಬಸ್ ನಿಲ್ದಾಣಕ್ಕೆ ಆಗಮಿಸಿದವು. ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ವಿರಳವಾಗಿರುವುದು ಕಂಡು ಬಂತು. ಜಿಲ್ಲೆಯಲ್ಲಿ ಪ್ರತಿ ದಿನ 675 ಬಸ್ಗಳು ಸಂಚರಿಸುತ್ತಿದ್ದವು. 2,400ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಮಂಗಳವಾರ ಮುಷ್ಕರದಿಂದಾಗಿ ನೌಕರರು ಹಾಗೂ ಬಸ್ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂತು. ಹೀಗಾಗಿ ಸಾರಿಗೆ ನೌಕರರ ಮುಷ್ಕರದ ಬಿಸಿ ಕಲ್ಪತರುನಾಡಿಗೂ ತಟ್ಟಿತು.
ಬಸ್ಗಳಿಲ್ಲದೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ತೆರಳಲಾಗದೆ ಪರದಾಡಿದರು.
ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಭಾಗಿಯಾಗುವ ನೌಕರರ ವಿರುದ್ಧ ಸರ್ಕಾರದ ನಿಯಮಾವಳಿಗಳಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.
ಪ್ರಯಾಣಿಕರ ಸಂಖ್ಯೆ ಶೇ. 50 ರಷ್ಟು ಕಡಿಮೆಯಾಗಿದ್ದು, ನಮ್ಮ ಸಂಸ್ಥೆ ಎಸ್ಮಾ ಆಕ್ಟ್ ಗೆ ಒಳಪಡುತ್ತದೆ. ಎಸ್ಮಾ ಜಾರಿ ಇದ್ದೇ ಇದೆ. ಎಸ್ಮಾ ಎಲ್ಲರಿಗೂ ಅನ್ವಯವಾಗುತ್ತದೆ. ನೌಕರರ ಹತ್ತಿರ ಸಹಿ ಪಡೆದುಕೊಂಡಿದ್ದೇವೆ. ಈಗಾಗಲೇ ನೌಕರರಿಗೆ ತಿಳುವಳಿಕೆ ನೀಡಿದ್ದೇವೆ. ಮೆಜಾರಿಟಿ ಜನರು ಬಂದಿದ್ದಾರೆ. ಕೆಲವರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಪ್ರತಿಭಟನೆ ಮಾಡಿಲ್ಲ, ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದರು.


