ಇವೊತ್ತು ಅನ್ನ ಕೊಡುವ ಭೂಮಿಯನ್ನು ಸರ್ಕಾರಗಳು ಕಸಿದುಕೊಳ್ಳುತ್ತಿವೆ. ಇದು ಖಂಡನೀಯವಾದುದು. ದೇವನಹಳ್ಳಿಯ ಸುತ್ತಮುತ್ತ 1700 ಎಕರೆಗೂ ಹೆಚ್ಚು ಭೂಮಿಯನ್ನು ಆಕ್ರಮಿಸಿಕೊಳ್ಳಲು ಹೊರಟಿರುವ ಭೂದಾಹಿಗಳಿದ್ದಾರೆ. ಈ ಭೂದಾಹಿಗಳ ವಿರುದ್ದವಾಗಿ ನಾವು ಮಾತನಾಡಲಿಲ್ಲ ಎಂದರೆ ನಮಗೆ ನಾವು ಮಾಡಿಕೊಂಡ ದ್ರೋಹವಾಗುತ್ತದೆ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಎಂದು ತಿಳಿಸಿದರು.
ತುಮಕೂರು ನಗರದ ರವೀಂದ್ರ ಕಲಾನಿಕೇತನದ ಸಭಾಂಗಣದಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಶಯ ನುಡಿಗಳನ್ನಾಗಿ ಅವರು ಮಾತನಾಡಿದರು.
ಅನ್ನ ಬೆಳೆಯುವ ಭೂಮಿಯನ್ನು ಆಕ್ರಮಿಸಕೊಳ್ಳುತ್ತಾ ಬಂದಿರುವುದು ಮತ್ತು ಈಗಾಗಲೇ ಆಕ್ರಮಿಸಿಕೊಂಡಿರುವ 80ರಷ್ಟು ಭೂಮಿ ಬೀಳುಬಿದ್ದಿದೆ. ಇತ್ತ ಕೃಷಿಯೂ ಆಗುತ್ತಿಲ್ಲ. ಅತ್ತ ಕೈಗಾರಿಕೆಗಳು ಆಗುತ್ತಿಲ್ಲ. ಆಕ್ರಮಿಸಿಕೊಂಡಿರುವ ಭೂಮಿ ಬೀಳುಬಿದ್ದ ಹೊತ್ತಿನೊಳಗೆ ಮತ್ತೆ ಈ ಆಕ್ರಮಣ ಮಾಡಲಾಗುತ್ತಿದೆ. ಈ ಭೂದಾಹಿಗಳು ಮಾಡುತ್ತಿರುವ ದ್ರೋಹ ಜನವಿದ್ರೋಹಿ ಕೃವ್ಯವಾಗಿದೆ. ಇದನ್ನು ನಾವು ಖಂಡಿಸಲೇಬೇಕಾಗಿದೆ. ಇದು ವೀಚಿ ಮತ್ತು ಅವರ ಸಾಹಿತ್ಯಕ್ಕೆ ಕೊಡುವ ದೊಡ್ಡ ಗೌರವ ಎಂದು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.
ಇಂದು ಬಹಳ ದುರ್ಬಲವಾದ ಕಾಲಘಟ್ಟದಲ್ಲಿ ನಾವು ಇದ್ದೇವೆ. ಇದು ಕೇವಲ ರಾಜಕೀಯವಾಗಿ ಮಾತ್ರವಲ್ಲ. ಸಾಂಸ್ಕೃತಿಕವಾಗಿಯೂ ಕೂಡ ಈ ಕಾಲಘಟ್ಟ ತುಂಬ ದುಷ್ಟಕಾಲವಾಗಿದೆ. ರಾಜಕಾರಣವನ್ನು ತಿದ್ದುವ ಕೆಲಸವನ್ನು ಕಲಾವಿದರು, ಸಾಹಿತ್ಯ ಕ್ಷೇತ್ರದಲ್ಲಿರುವವರು ಮತ್ತು ಸಾಮಾಜಿಕ ಕಾರ್ಯಕರ್ತರು ಎಚ್ಚರ ವಹಿಸಿದಂತೆ ಮಾಧ್ಯಮಗಳನ್ನು ಬಳಸಿಕೊಂಡು ಅದನ್ನು ನೇರಗೊಳಿಸುವ, ಸರಿದಾರಿಗೆ ತರುವ ಕಾರ್ಯವನ್ನ ಮಾಡುತ್ತಾ ಬಂದಿದ್ದಾರೆ. ಈ ಪ್ರಕ್ರಿಯೆ ಹಿಂದಿನಿಂದಲೂ ಕೂಡ ನಡೆದುಕೊಂಡು ಬಂದಿರುವುದು ಕನ್ನಡ ಸಾಹಿತ್ಯ ಪರಂಪರೆಯೊಳಗೆ ನಡೆದಿದೆ ಎಂದರು.
ಕುವೆಂಪು ಅವರು ಈ ಥರದ ಪ್ರತಿಕ್ರಿಯೆ ನೀಡಿದಾಗ ಸರ್ಕಾರ ಒಂದು ನೋಟೀಸ್ ಕೊಡುತ್ತದೆ. ಅದನ್ನು ಕುರಿತು ಒಂದು ಪದ್ಯವನ್ನೇ ಬರೆಯುತ್ತಾರೆ.ನಿಮ್ಮ ಸರ್ಕಾರ ಐದು ವರ್ಷ ಮಾತ್ರ ಇರುತ್ತದೆ. ನಮ್ಮ ಸರ್ಕಾರದಲ್ಲಿ ಪಂಪನೇ ಮುಖ್ಯಮಂತ್ರಿ. ನಮ್ಮ ಸರ್ಕಾರ ಶಾಶ್ವತವಾಗಿರುತ್ತದೆ. ಕನ್ನಡದ ಸಚಿವ ಸಂಪುಟ, ಸಾಹಿತ್ಯದ ಸಚಿವ ಸಂಪುಟ. ನಮ್ಮ ಕನ್ನಡ ಸಂದರ್ಭದೊಳಗೆ ಏಕವ್ಯಕ್ತಿ ಚಳವಳಿಯ ಪ್ರಾತಿನಿಧಿಕ ಗುಂಪೇ ಕುವೆಂಪು. ಇಂದಿಗೂ ಕುವೆಂಪು ಸೃಷ್ಟಿಸಿದ ಪದಗಳನ್ನು ಬಳಸುತ್ತಿದ್ದೇವೆ. ಕನ್ನಡ ನಾಡಿಗೆ, ನುಡಿಗೆ ಸಂಬಂಧಪಟ್ಟಂತೆ
ಹೆಚ್ಚು ಬಳಸುತ್ತಿದ್ದೇವೆ ಎಂದು ಹೇಳಿದರು.
ಇಂದು ದ್ವಿಭಾಷಾ ನೀತಿ ಬಗ್ಗೆ ಇತ್ತೀಚೆಗೆ ಹೆಚ್ಚು ಚರ್ಚೆಯಾಗುತ್ತಿದೆ. ಕುವೆಂಪು ಕೂಡ ದ್ವಿಭಾಷಾ ನೀತಿ ಬಗ್ಗೆ ಹೇಳಿದ್ದರು. ದ್ವಿಭಾಷಾ ನೀತಿಯೋ ತ್ರಿಶೂಲವೋ ಎಂಬ ಮಾತುಗಳನ್ನಾಡಿದ್ದರು. ತ್ರಿಭಾಷಾ ಸೂತ್ರದಿಂದ ಆಗುವ ಅನಾಹುತ ಪ್ರಾದೇಶಿಕ ಭಾಷೆಗಳಿಗೆ ಕೆಟ್ಟ ಕಾಲ ಸಂಭವಿಸಲಿದೆ ಎಂದು ಹಿಂದೆಯೇ ಹೇಳಿದ್ದರು. ಈಗ ಎಚ್ಚೆತ್ತುಕೊಂಡ ರೀತಿಯ ಒಳಗೆ ಮುಖ್ಯಮಂತ್ರಿಗಳು ದ್ವಿಭಾಷಾ ನೀತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕೆ ಖಾಸಗೀ ವಲದಯ ಶಿಕ್ಷಣ ಲಾಬಿ ನಮಗೆ ತ್ರಿಭಾಷಾ ಸೂತ್ರವೇ ಇರಲಿ ಎಂದು ಪ್ರತಿಪಾದಿಸುತ್ತಿದೆ. ಇದು ಖಂಡನೀಯವಾದದ್ದು. ಯಾಕೆ ಅಂದರೆ ಖಾಸಗಿಯವರು ಲಾಭದ ದೃಷ್ಟಿ ಇಟ್ಟುಕೊಂಡು ಒಂದು ಪ್ರಾದೇಶಿಕ ಭಾಷೆಯನ್ನು ಪ್ರಾದೇಶಿಕ ಬದುಕಿನ, ಪ್ರಾದೇಶಿಕ ಪರಂಪರೆಯನ್ನು, ಸಂಸ್ಕೃತಿಯನ್ನು ವಿನಾಶವನ್ನು ಅವರು ಬಯಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದರು.
ಈಗಿನ ಸಂದರ್ಭ ರಾಜಕಾರಣಕ್ಕಿಂತ ಹೆಚ್ಚು ದುಷ್ಟ ಕಾಲವಾದ ಸಂದರ್ಭವಾಗಿದ್ದು, ಇದರ ವಿರುದ್ದ ಯಾರೂ ಮಾತನಾಡುತ್ತಿಲ್ಲ. ಕೆಲವರು ಜಾಣಮೌನ ವಹಿಸಿದ್ದು, ಅವಕಾಶವಾದಿ ರಾಜಕಾರಣವನ್ನು ಮಾಡುವಂತಹ ಸಾಂಸ್ಕೃತಿಕ ವಾತಾವರಣ ಖಂಡನೀಯವಾದುದು. ನುಡಿಗೆ ಅಪತ್ತು ಬಂದಾಗ ನಾವೆಲ್ಲರೂ ಕೂಡ ದಿಟ್ಟವಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಅಂತಹ ಸ್ಥಿತಿ ಇವೊತ್ತು ನಮಗೆ ಎದುರಾಗಿದೆ ಎಂದು ತಿಳಿಸಿದರು.
ಕನ್ನಡ ಪುಸ್ತಕ ಪ್ರಾಥಿಕಾರ ಹಿರಿಯರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಕಾರ್ಯವನ್ನು ಬಹಳ ಹಿಂದಿನಿಂದ ಮಾಡಿಕೊಂಡು ಬರುತ್ತಿದೆ. ಈಗಾಗಲೇ ಸಾಹಿತ್ಯ ಬಂದಿದೆ. ಈಗ ಇರುವ ಸಾಹಿತಿಗಳ ಸಾಹಿತ್ಯವೂ ಪ್ರಕಟಿಸಿದೆ.ಕಣ್ಮರೆಯಾಗಿರುವ ಸಾಹಿತಿಗಳ ಸಾಹಿತ್ಯವನ್ನು ಪ್ರಕಟಿಸಿದೆ. ಬಹಳ ಮುಖ್ಯವಾಗಿ ವೀಚಿ ಅವರ ಕಾವ್ಯವನ್ನು ಕುರಿತಂತೆ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಒಂದು ಮನವಿಯನ್ನು ಕೊಡುವುದು ಬಹಳ ಒಳ್ಳೆಯದು ಎಂದು ವೀಚಿ ಸಾಹಿತ್ಯ ಪ್ರತಿಷ್ಠಾನಕ್ಕೆ ಕೋರುತ್ತೇನೆ. ವೀಚಿ ಸಮಗ್ರ ಸಾಹಿತ್ಯವನ್ನು ಪ್ರತಿಷ್ಠಾನ ಪ್ರಕಟಿಸುವುದಕ್ಕಿಂತ ಪುಸ್ತಕ ಪ್ರಾಧಿಕಾರ ಪ್ರಕಟಿಸಿದರೆ ಅದಕ್ಕೆ ಅಧಿಕೃತ ಮಾನ್ಯತೆ, ವ್ಯಾಪಕವಾದ ಪ್ರಚಾರ ಸಿಗುತ್ತದೆ. ವೀಚಿ ಸಮಗ್ರ ಕಾವ್ಯ ಪ್ರಕಟಿಸುವಂತೆ ಪುಸ್ತಕ ಪ್ರಾಧಿಕಾರಕ್ಕೆ ಒಂದು ಮನವಿಯನ್ನು ಕೊಟ್ಟರೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಸಾಹಿತಿ ಡಾ.ಬಸವರಾಜ ಸಾದರ, ಕತೆಗಾಗ ತುಂಬಾಡಿ ರಾಮಯ್ಯ, ಪತ್ರಿಕೋದ್ಯಮಿ ಎಸ್.ನಾಗಣ್ಣ, ರಂಗಕರ್ಮಿ ಡಾ.ಬೇಲೂರು ರಘುನಂದನ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಬಸವಯ್ಯ, ಲೇಖಕಿ ಪಿ.ಚಂದ್ರಿಕಾ, ಸಾಹಿತಿ ಡಾ.ಗೋವಿಂದ ಎಂ ಕಲ್ಲೂರು, ತತ್ವಪದ ಗಾಯಕ ಜಯರಾಮಯ್ಯ ದುಗ್ಗೇನಹಳ್ಳಿ, ಸಾಮಾಜಿಕ ಕಾರ್ಯಕರ್ತೆ ತಾಹೆರಾ ಕುಲ್ಸುಮ್ ಇದ್ದರು.


