ವಿ.ಚಿಕ್ಕವೀರಯ್ಯ ಕನ್ನಡದ ಮಹತ್ವದ ಕವಿ. ಅದರಲ್ಲೂ ವ್ಯವಸಾಯವನ್ನೇ ಜೀವನವನ್ನಾಗಿಸಿಕೊಂಡು ಕಾವ್ಯವನ್ನು ಉಸಿರಾಡಿದವರು. ತಮ್ಮ ಬದುಕಿನ ಬಹುಕಾಲವನ್ನು ಇವುಗಳೊಳಗೆ ಹುದುಗಿಸಿಕೊಂಡು ವಿಭಿನ್ನ ಪ್ರಯೋಗಗಳನ್ನು ಮಾಡಿದವರು ವೀಚಿ.
ನವ್ಯದ ರೀತಿಯಲ್ಲಿ ತಮ್ಮ ಕವಿತೆಗಳನ್ನು ಆರಂಭ ಮಾಡಿದರೂ ಕೊನೆಯಲ್ಲಿ ಕಾವ್ಯದ ಒಳಗಡೆ ಆಧ್ಯಾತ್ಮದ ರೂಪವನ್ನು ‘ಯೋಗಿ ಯೋಗಿನಿ ಸೊಲ್ಲು’ ಕವಿತೆಯಲ್ಲಿ ಗಮನಿಸಬಹುದು. ಅವರ ಸಂಕರತಳಿ, ವಿಷಾದ ನಕ್ಷೆ, ಸಿದ್ಧರಬೆಟ್ಟ ಒಂದು ದರ್ಶನ, ನೆಚ್ಚಿನವರು ನನ್ನವರು, ಮತ್ತಿತರ ಗದ್ಯಪದ್ಯ ಕೃತಿಗಳ ಒಳಗಡೆ ವೀಚಿ ಅಚ್ಚಳಿಯದೆ ಉಳಿದಿದ್ದಾರೆ. ಗೋಪಾಲಕೃಷ್ಣ ಅಡಿಗರ ಕಾವ್ಯ ಪರಂಪರೆಯನ್ನು ಮುಂದುವರಿಸಿದವರಾಗಿ, ನವ್ಯದ ನಂತರದ ತಲೆಮಾರಿನ ಹೊಸ ಐಡಿಯಾಲಜಿಗಳನ್ನು ಕಟ್ಟಿದವರಾಗಿ, ಆಧುನಿಕ ಕವಿಯಾಗಿ ಅರಳಿದವರು.
ಬೇಸಾಯದ ನೆಲೆಗಳನ್ನು ಕಾವ್ಯದ ಒಳಗೆ ಕಟ್ಟುತ್ತಲೆ, ಬದುಕಿನ ಸಂಕೀರ್ಣತೆಗಳನ್ನು ತನ್ನ ವಯೋಮಾನದವರಿಗಿಂತ ಭಿನ್ನವಾಗಿ ನೋಡುವ ಕಣ್ಣುಗಳನ್ನು ಧರಿಸಿಕೊಂಡಿದ್ದರು. ಈ ಕಾರಣದಿಂದಲೇ ಇವರ ಕವಿತೆಗಳು ಭಿನ್ನಹೆಜ್ಜೆಯನ್ನು ಕನ್ನಡದಲ್ಲಿ ರೂಪಿಸಿಕೊಂಡಿವೆ.
ನಿರ್ಲಕ್ಷ್ಯಕ್ಕೆ ಒಳಗಾಗಿ, ಸಾಹಿತ್ಯದೊಳಗಡೆ ಹೆಚ್ಚು ಚರ್ಚೆಯಾಗದೆ ಕಡೆಗಣಿಸಲ್ಪಟ್ಟ ಕವಿ ವೀಚಿ. ತಮ್ಮ ಕವಿತೆಗಳನ್ನು ಯಾರು ಮಾತನಾಡಲಿ, ಬಿಡಲಿ. ಬಿಳಿಯಾದ ಜುಬ್ಬ ಪೈಜಾಮ, ಕರಿಯ ಕೊಡೆಯಿಡಿದು ತುಮಕೂರು ನೆಲದಲ್ಲಿ ನಗೆಯಾಡಿಕೊಂಡು ಓಡಾಡಿದವರು. ಈಗಲೂ ನೆಲದಲ್ಲಿ ಓಡಾಡಿದಂತೆಯೇ ಕಾಣುತ್ತಿದ್ದಾರೆ.
ಕವಿತ್ವವನ್ನು ಧ್ಯಾನದ ರೀತಿಯಲ್ಲಿ ಇರುವವರೆಗೂ ಬರೆದವರು ಮತ್ತು ಬದುಕುತ್ತಿದ್ದವರು. ತುಮಕೂರಿನಲ್ಲಿ ಒಂದು ಸಾಂಸ್ಕೃತಿಕ ಜಗತ್ತನ್ನು ಕಳೆದ ಐದಾರು ದಶಕಗಳಿಂದ ಕಾಪಿಟ್ಟುಕೊಂಡು ಬಂದಿದ್ದವರು.
ಅಂತಹ “ವೀಚಿ” ಕವಿಯ ಹೆಸರಿನಲ್ಲಿ ರಾಜ್ಯಮಟ್ಟದ ಒಂದು ಪ್ರಶಸ್ತಿ ಇಪ್ಪತ್ತೈದು ವರ್ಷಗಳಿಂದ ನಡೆಸಿಕೊಂಡು ಬಂದಿರುವುದು ದೊಡ್ಡ ಸಾಧನೆಯೇ.
ಈ ಬಾರಿಯ 2023ನೇ ಸಾಲಿನ “ವೀಚಿ ಯುವ ಪ್ರಶಸ್ತಿ ಪ್ರಶಸ್ತಿ” ಹೊಸತಲೆಮಾರಿನ ಅತ್ಯುತ್ತಮ ಕಥೆಗಾರ ಗೋವಿಂದರಾಜು ಕಲ್ಲೂರು ಅವರ ಮೊದಲ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನಕ್ಕೆ ಲಭಿಸಿದೆ.
“ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು” ಪುರಾಣಗಳನ್ನು ಒಡೆಯುತ್ತಲೇ ಮರು ನಿರೂಪಿಸುವ, ಚರಿತ್ರೆಯನ್ನು ಹೊಸದಾಗಿ ಕಟ್ಟುವ, ಶ್ರಮಿಕ ಮತ್ತು ಸಮುದಾಯಗಳ ಕಣ್ಣಿನಿಂದ ಪರಂಪರೆಯನ್ನು ಎದುರುಗೊಳ್ಳುವ ಬಗೆಯಲ್ಲಿ ವಿಭಿನ್ನತೆಯನ್ನು ಸಾಧಿಸಿದೆ. ಆ ನೆತ್ತರು ಕೇವಲ ಮುಟ್ಟಿನ ನೆತ್ತರಷ್ಟೇ ಅನ್ನುವ ಸೀಮಿತ ಅರ್ಥಕ್ಕಿಂತ ಅದು ಮುಟ್ಟಿಸಿಕೊಳ್ಳಲಾಗದವರ ನೆತ್ತರಾಗಿ ಈ ಲೋಕದ ತರತಮಕ್ಕೆ ಎದುರಾಗಿದೆ.
ಮೇಲ್ನೋಟಕ್ಕೆ ಮಹಿಳಾ ಮುಟ್ಟಿನ ನೆತ್ತರಾಗಿ ಕೇಳಿಸಿಕೊಳ್ಳುವ. ಆದರೆ ಆಂತರ್ಯದಲ್ಲಿ ‘ಮುಟ್ಟು’ ಪರಿಕಲ್ಪನೆಯನ್ನು ‘ಅನ್ ಟಚಬಿಲಿಟಿ’ ಅನ್ನುವ ರೂಪಕವಾಗಿಯೂ, ದಮನಿತ ಸಮುದಾಯಗಳ ಸಂಕಟದ ಅಭಿವ್ಯಕ್ತಿಯಾಗಿಯೂ, ಇನ್ನೂ ಮುಂದುವರೆದು ಪುರಾಣ ಚರಿತ್ರೆಗಳಿಂದ ಮುಟ್ಟಿಸಿಕೊಳ್ಳದೆ ದೂರವಿರುವ ಸಮುದಾಯಗಳಿಗೆ ಒಂದು ಘನತೆಯನ್ನು, ಸ್ವಾಭಿಮಾನವನ್ನು ತಂದುಕೊಡುವ ಬಹುದೊಡ್ಡ ಅಭಿವ್ಯಕ್ತಿಯ ರೂಪಕವಾಗಿ ಈ ಸಂಕಲನವಿದೆ.
ಹೊಸತಲೆಮಾರಿನವರು ಬರೆಯುತ್ತಿರುವ ಈ ಸಂದರ್ಭದಲ್ಲಿ ಗೋವಿಂದರಾಜು ವಿಭಿನ್ನವಾಗಿ ನಿಲ್ಲುವುದು ಪರಂಪರೆಯನ್ನು ಎಡತಾಕುವುದರಲ್ಲಿ. ಅದು ‘ಗೋವಿನ ಹಾಡು’ ಕಥೆ ಇರಲಿ, ‘ಯಶೋಧರ ಚರಿತೆ’ಯ ಕಥೆಯಿರಲಿ ಅಥವಾ ಸ್ಥಾಪಿತ ಪುರಾಣಗಳನ್ನು ಎದುರುಗೊಳ್ಳುವುದಿರಲಿ ಇವೆಲ್ಲವುದರಲ್ಲೂ ಕಲ್ಲೂರು ಹೊಸ ದಾರಿಯನ್ನೇ ತುಳಿಯುತ್ತಿದ್ದಾರೆ.
ಈಗ ಕಥನಗಳ ಸುಗ್ಗಿ. ಅತಿ ಹೆಚ್ಚು ಕಥನಗಳು ನಮ್ಮ ಮುಂದೆ ಹಾಸುತ್ತಲೇ ಇಡೀ ಅನುಭವಲೋಕವನ್ನೇ ವಿಸ್ತರಿಸುತ್ತಿವೆ. ಇದು ಸಂಭ್ರಮಿಸುವ ಸಮಯ. ಕಥನವೆಂಬುದು ಬಹುಪಾಲು ಬರಹಗಾರರ ಅಭಿವ್ಯಕ್ತಿಯಾಗಿ ವಿಸ್ತರಣೆಗೊಳ್ಳುತ್ತಿರುವ ಹೊತ್ತಿನಲ್ಲಿ ಕಥನಕ್ಕೆ ವೀಚಿ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ಮತ್ತು ಹೆಮ್ಮೆಯ ವಿಚಾರ. ಆ ಮೂಲಕ ವೀಚಿ ಹೊಸ ಹೊಸ ಕಥನಗಾರರನ್ನು ಒಳಗು ಮಾಡಿಕೊಳ್ಳುತ್ತಿದ್ದಾರೆ.
ಇಬ್ಬರಿಗೂ ಶುಭಾಶಯಗಳು… ವೀಚಿ ಬಳಗದ ಸಂತತಿ ಸಾವಿರವಾಗಲಿ….
ಲೇಖಕರು: ಡಾ.ರವಿಕುಮಾರ್ ನೀ.ಹ. ಉಪನ್ಯಾಸಕರು


