Sunday, March 15, 2026
Google search engine
Homeಮುಖಪುಟ'ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣವಲ್ಲ'

‘ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣವಲ್ಲ’

ಈಗಿನ ಒತ್ತಡದ ಬದುಕಿನಲ್ಲಿ ಹಣ, ಆಸ್ತಿ ಇದ್ದವರು ಶ್ರೀಮಂತರಲ್ಲ, ಆರೋಗ್ಯ ಹೊಂದಿರುವವರೇ ದೊಡ್ಡ ಶ್ರೀಮಂತರು. ಇಂದು ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ದೇಹವನ್ನು ದೇಗುಲವೆಂದು ಭಾವಿಸಿ, ದೇಹದ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು.

ಇತ್ತೀಚೆಗ ಹೃದಯಾಘಾತದಿಂದ ಅಕಾಲ ಮರಣಕ್ಕೀಡಾದ ತುಮಕೂರು ತಾಲ್ಲೂಕು ಊರುಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹೆಬ್ಬಾಕದ ಎಚ್.ಎಸ್.ನೀಲಕಂಠಸ್ವಾಮಿ ಅವರ ಸ್ಮರಣಾರ್ಥ ಶನಿವಾರ ಹೆಬ್ಬಾಕ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೃದಯಾಘಾತ ಜಾಗೃತಿ, ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಒಳ್ಳೆಯ ಆಹಾರ ಪದ್ದತಿ ಅನುಸರಿಸಿ, ದುರಾಭ್ಯಾಸಗಳನ್ನು ತ್ಯಜಿಸಿದರೆ ಆರೋಗ್ಯವಂತರಾಗಲು ಸಾಧ್ಯವಿದೆ ಎಂದರು.

ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶರತ್‌ಕುಮಾರ್, ಧೂಮಪಾನ, ಮದ್ಯಪಾನ, ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಕ್ಕರೆ ಬಳಕೆ ಮೊದಲಾದವುಗಳಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಕೋವಿಡ್ ವ್ಯಾಕ್ಸಿನ್‌ನಿಂದಾಗಿ ಹೃದಯ ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕಿ, ಈ ಸಮಸ್ಯೆಗೆ ವ್ಯಾಕ್ಸಿನ್ ಕಾರಣವಲ್ಲ ಎಂದರು.

ಹಲವಾರು ಕಾರಣಗಳಿಂದ ಹೃದಯ ಸಮಸ್ಯೆ, ಹೃದಯಾಘಾತ ಆಗಬಹುದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯೋಗ್ಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯವಂತರಾಗಿ ಬಾಳಲು ಸಾಧ್ಯವಿದೆ. ನಿತ್ಯ ನಡಿಗೆ, ವ್ಯಾಯಾಮ ಮಾಡಬೇಕು. ಧೂಮಪಾನ, ಮದ್ಯಪಾನವನ್ನು ಬಿಡಬೇಕು. ನಮ್ಮ ಪರಿಸರದ ಆಹಾರ ಸೇವನೆ, ಒಳ್ಳೆಯ ನಿದ್ರೆ, ಮಾನಸಿಕ ಒತ್ತಡ ನಿಯಂತ್ರಣ ಮಾಡಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್, ರಾಜ್ಯಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಸಿದ್ಧಗಂಗಾ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಮಂಜುನಾಥ ಗುಪ್ತ, ಡಾ.ಸುಚಿತ್, ಡಾ.ರಾಹುಲ್ ಮೊದಲಾದವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular