Sunday, March 15, 2026
Google search engine
Homeಮುಖಪುಟಹಳ್ಳಿಗಾಡಿನ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು-ಸಚಿವ ಕೆ.ಎನ್.ರಾಜಣ್ಣ

ಹಳ್ಳಿಗಾಡಿನ ಯುವ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸಬೇಕು-ಸಚಿವ ಕೆ.ಎನ್.ರಾಜಣ್ಣ

ಹಳ್ಳಿಗಾಡಿನಿಂದ ಬರುವ ಉದಯೋನ್ಮುಖ ಯುವ ಸಾಹಿತಿಗಳನ್ನು ಗುರುತಿಸಬೇಕು. ಅಂಥವರಿಗೆ ಪ್ರೋತ್ಸಾಹ ನೀಡಬೇಕು. ಆಗ ಮಾತ್ರ ಸಾಹಿತ್ಯ ಉತ್ಕೃಷ್ಟವಾಗಿ ಬರಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ತುಮಕೂರಿನಲ್ಲಿ ವೀಚಿ ಸಾಹಿತ್ಯ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ವೀಚಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲೇಖಕಿ ಪಿ.ಚಂದ್ರಿಕಾ ಬರೆದ ಮೂವರ ಮಹಮದರು ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ, ಸಾಹಿತಿ ಡಾ.ಗೋವಿಂದರಾಜು ಎಂ.ಕಲ್ಲೂರ ಬರೆದಿರುವ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿಗೆ ವೀಚಿ ಯುವ ಸಾಹಿತ್ಯ ಪ್ರಶಸ್ತಿ, ತತ್ವಪದಕಾರ ಜಯರಾಮಯ್ಯ ದುಗ್ಗೇನಹಳ್ಳಿ ಅವರಿಗೆ ವೀಚಿ ಜನಪದ ಪ್ರಶಸ್ತಿ, ಸಾಮಾಜಿಕ ಕಾರ್ಯಕರ್ತೆ ತಾಹೇರ ಕಲ್ಸುಮ್ ಅವರಿಗೆ ವೀಚಿ ಕನಕ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ವರ್ಷಕ್ಕೆ ಒಮ್ಮೆ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದರಷ್ಟೇ ಸಾಲದು, ನಿರಂತರವಾಗಿ ಸಾಹಿತ್ಯದ ಕುರಿತು ಹೆಚ್ಚು ಹೆಚ್ಚು ಸೆಮಿನಾರ್ ಮತ್ತು ಸಂವಾದಗಳನ್ನು ಏರ್ಪಡಿಸಬೇಕು. ಇದರಿಂದ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ತುಂಬಾಡಿ ರಾಮಯ್ಯ ಅವರ ಮಣೆಗಾರ ಕೃತಿ ಬಹಳಷ್ಟು ಜನರ ಕೈಗೆ ಸಿಕ್ಕಿಲ್ಲ. ಹಾಗಾಗಿ ಅವರು ಮಣೆಗಾರ ಕೃತಿಯನ್ನು ಮತ್ತೆ ಮುದ್ರಣ ಮಾಡಿಸಲಿ. ನೀವೆಲ್ಲ ಬರೆಯುತ್ತಿರುವುದು ವಾಸ್ತವಕ್ಕೆ ಹತ್ತಿರವಿರುವ ಅಂಶಗಳನ್ನು ಬರೆದಿದ್ದೀರಿ. ಅದನ್ನು ಹೊಸ ಪೀಳಿಗೆಗೆ ಪರಿಚಯಿಸಬೇಕು.

ಇಂತಹ ಒಳ್ಳೆಯ ಕೃತಿಗಳನ್ನು ಯುವಜನತೆಗೆ ಪರಿಚಯ ಮಾಡಿಸಬೇಕು. ನಾವು ಎಲ್ಲಿಂದ ಬಂದಿದ್ದೇವೆ. ನಮ್ಮ ಹಿನ್ನೆಲೆ ಏನು? ನಾವು ಸಮಾಜದಲ್ಲಿ ಯಾವ ರೀತಿ ಬೆಳೆಯಬೇಕು. ಅಂಬೇಡ್ಕರ್ ಅವರನ್ನು ಹೇಗೆ ಗ್ರಹಿಸಬೇಕು. ಅವರ ವಿದ್ಯಾಭ್ಯಾಸ, ಬೆಳೆದುಬಂದ ರೀತಿಯನ್ನು ತಿಳಿಸಬೇಕು ಎಂದರು.

ಗೋವಿಂದರಾಜ ಎಂ.ಕಲ್ಲೂರ ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ವಿಶಿಷ್ಟವಾಗಿದೆ. ಮುಟ್ಟಿನ ನೆತ್ತರು ಅಂದರೆ ಎಲ್ಲರೂ ಅಸಹ್ಯದಿಂದ ನೋಡುತ್ತಾರೆ. ಹೀಗಾಗಿ ಅದರ ಬಗ್ಗೆ ತಿಳುವಳಿಕೆ ಮೂಡಿಸಬೇಕು. ನಮ್ಮ ನಡುವೆ ನಡೆಯುವ ಆಗುಹೋಗುಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದರು.

ಜಯರಾಮಯ್ಯ ತತ್ವಪದಕಾರರು. ತತ್ವಪದ ಗಾಯಕರಾಗಲು ದೊಡ್ಡ ವಿದ್ಯಾವಂತರಾಗಬೇಕಾಗಿಲ್ಲ. ತಮ್ಮ ಅನುಭವದ ಆಧಾರದ ಮೇಲೆ ಯಾವ ವಿಷಯಗಳ ಮೇಲೆ ಗಮನಹರಿಸಿರುತ್ತೇವೆ. ಆ ವಿಷಯಗಳು ಒಳಗೊಂಡಂತೆ ತತ್ವಪದಗಳನ್ನು ಕಟ್ಟಿರುತ್ತಾರೆ. ಹಳ್ಳಿಗಾಡಿನಿಂದ ಬಂದಂಥವರೆ ಈ ರೀತಿಯ ಜಾನಪದ ತತ್ವಪದಗಳನ್ನು ಕಟ್ಟಲು ಸಾಧ್ಯ ಮತ್ತು ಗಾಯನ ಮಾಡಲು ಸಾಧ್ಯ. ಇದು ಗ್ರಾಮೀಣ ಪ್ರದೇಶದ ಜನರ ಪ್ರತಿಭೆ ಎಂದರು.

ಹೊಸ ಹೊಸ ವಿಷಯಗಳನ್ನು ಮತ್ತು ಆವಿಷ್ಕಾರಗಳನ್ನು ನೋಡಲು ಸಾಹಿತ್ಯ ಓದಬೇಕು. ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದರು.

ವೇದಿಕೆಯಲ್ಲಿ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯ, ಡಾ.ಬಸವರಾಜ ಸಾಧರ, ಕತೆಗಾರ ತುಂಬಾಡಿ ರಾಮಯ್ಯ ಇದ್ದರು. ಎಂ.ಎಚ್.ನಾಗರಾಜ ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular