ರಾಜ್ಯ ರಾಜಕಾರಣದಲ್ಲಿ ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗುತ್ತದೆ ಎಂದು ಪುನರುಚ್ಚರಿಸಿರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಕ್ರಾಂತಿ ಏನು ಎಂಬುದನ್ನು ಈಗಲೇ ಬಹಿರಂಗಪಡಿಸಿದರೆ ಅದಕ್ಕೆ ಮಹತ್ವ ಇರುವುದಿಲ್ಲ ಎಂದು ಹೇಳಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕ್ರಾಂತಿ ಏನಾಗುತ್ತದೆ ಎಂಬುದನ್ನು ಈಗಲೇ ಹೇಳಿದರೆ ಅದಕ್ಕೆ ಖದರ್ ಇರುವುದಿಲ್ಲ. ಹಾಗಾಗಿ ಇನ್ನು ಎರಡು ತಿಂಗಳ ಕಾಲ ಕಾಯಿರಿ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ದೇಶದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ. ಹಾಗೆಯೇ ರಾಜ್ಯದಲ್ಲೂ ಬದಲಾವಣೆಯಾಗಲಿದೆ ಎಂದು ಪುನರುಚ್ಚರಿಸಿದ ರಾಜಣ್ಣ ಈಗಿನ್ನೂ ಜುಲೈ ತಿಂಗಳು ಸೆಪ್ಟೆಂಬರ್ ವರೆಗೆ ತಾಳ್ಮೆಯಿಂದ ಕಾಯಬೇಕು ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕರ್ನಾಟಕ ರಾಜ್ಯಕ್ಕೆ ಈಗಾಗಲೇ ಒಂದು ಬಾರಿ ಬಂದು ಹೋಗಿದ್ದಾರೆ. ಏನೂ ಬದಲಾವಣೆ ಆಗಿಲ್ಲ. ಮತ್ತೊಮ್ಮೆ ಬಂದು ಹೋದರೂ ಏನೂ ಆಗುವುದಿಲ್ಲ ಎಂದು ರಾಜಣ್ಣ ತಿಳಿಸಿದ್ದಾರೆ.


