ಸಬ್ ಇನ್ಸ್ ಪೆಕ್ಟರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪಿಎಸ್ಐ ಅವರನ್ನು ದಾವಣಗೆರೆ ಬಡಾವಣೆ ಠಾಣೆಯ 55 ವರ್ಷದ ನಾಗರಾಜು ಎಂದು ಗುರುತಿಸಲಾಗಿದೆ.
ದಾವಣಗೆರೆ ಬಡಾವಣೆ ಠಾಣೆಯ ಪಿಎಸ್ಐ ನಾಗರಾಜು ಜು.1ರಂದು ತುಮಕೂರು ನಗರದಲ್ಲಿರುವ ದ್ವಾರಕ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದರು. ಮೂರ್ನಾಲ್ಕು ದಿನಗಳಿಂದ ಲಾಡ್ಜ್ ನಲ್ಲಿಯೇ ವಾಸವಿದ್ದ ಪಿಎಸ್ಐ ನಾಗರಾಜು ರೂಂನಿಂದ ಹೊರ ಬಂದಿರಲಿಲ್ಲ ಎನ್ನಲಾಗಿದೆ.
ಲಾಡ್ಜ್ ಸಿಬ್ಬಂದಿ ಕರೆ ಮಾಡಿದರೂ ನಾಗರಾಜು ಕರೆ ಸ್ವೀಕರಿಸಿರಲಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ಮಾಲಿಕರಿಗೆ ಪೋನ್ ಮಾಡಿ ವಿಷಯ ತಿಳಿಸಿ ರೂಂ ಬಾಗಿಲು ಮುರಿದು ಒಳಗೆ ಹೋದಾಗ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿರುವುದು ಪ್ರಕರಣ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಕೊಠಡಿಯಲ್ಲಿ ನಾಗರಾಜ ಡೆತ್ ನೋಟ್ ಬರೆದಿಟ್ಟಿರುವುದು ಪತ್ತೆಯಾಗಿದೆ. ಎರಡು ಪುಟಗಳ ಡೆತ್ ನೋಟ್ ನಲ್ಲಿ ಕೌಟುಂಬಿಕ ಕಲಹೇ ಆತ್ಮಹತ್ಯೆಗೆ ಕಾರಣ ಎಂದು ಬರೆದಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳಕ್ಕೆ ಎಎಸ್ ಪಿ ಮತ್ತು ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


