ಒಳಮೀಸಲಾತಿಗೆ ಸಂಬಂಧ ಎಂಪೆರಿಕಲ್ ಡೇಟಾ ಸಂಗ್ರಹಕ್ಕೆ ನ್ಯಾ.ನಾಗಮೋಹನ್ದಾಸ್ ಸಮಿತಿ ಶೀಘ್ರದಲ್ಲಿಯೇ ಸಮೀಕ್ಷೆ ಆರಂಭಿಸಲಿರುವ ಹಿನ್ನೆಲೆಯಲ್ಲಿ ಗುರುವಾರ ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರು ಸಭೆ ಸೇರಿ, ಸಮೀಕ್ಷೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.
ನ್ಯಾ.ನಾಗಮೋಹನ್ ದಾಸ್ ಸಮಿತಿಯ ಮಧ್ಯಂತರ ವರದಿಯ ಶಿಫಾರಸ್ಸಿನಂತೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಹೊಸದಾಗಿ ಎಂಪೆರಿಕಲ್ ಡೇಟಾ ಸಂಗ್ರಹಕ್ಕೆ ಎಲ್ಲಾ ಸಿದ್ದತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಮಾದಿಗ ಸಮುದಾಯದ ಮುಖಂಡರು, ಹೋರಾಟಗಾರರು, ಯುವಜನರು ಸಕ್ರಿಯವಾಗಿ ಪಾಲ್ಗೊಂಡು, ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ಮೂಲಕ ಎಕೆ, ಎಡಿ, ಎಎ ಇರುವ ಕಲಂಗಳಲ್ಲಿ ಸಂಬಂಧಪಟ್ಟ ಉಪಜಾತಿಯನ್ನು ಕಡ್ಡಾಯವಾಗಿ ನಮೂದಿಸುವ ಮೂಲಕ ಅಂತಿಮ ಹಂತದ ಹೋರಾಟವನ್ನು ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ನಿವೃತ್ತ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಮಾದಿಗ ಸಮುದಾಯಕ್ಕೆ ಇದೊಂದು ಸುವರ್ಣ ಅವಕಾಶ. ನ್ಯಾ.ನಾಗಮೋಹನದಾಸ್ ಸಮಿತಿ ಸಮೀಕ್ಷೆಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಜಾತಿ, ಉಪಜಾತಿ ಸಮೀಕ್ಷೆ ನಡೆಸಿದ್ದಾರೆಯೇ ಇಲ್ಲವೇ ಎಂಬುದನ್ನು ಕಾವಲು ನಾಯಿಯಂತೆ ಕಾಯುವ ಕೆಲಸ ಮಾದಿಗ ಸಮುದಾಯದ ಮುಖಂಡರದ್ದಾಗಿದೆ. ಸಮೀಕ್ಷೆಯ ವೇಳೆ ಮಾದಿಗರ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ನಡೆಯಬಹುದು ಎಂಬ ಅನುಮಾನ, ಆಂತಕ ನಮ್ಮಲ್ಲಿದೆ. ಹಾಗಾಗಿ ಸಮೀಕ್ಷೆ ನಡೆಯುವ ಅಷ್ಟು ದಿನ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲಾ ಮಾದಿಗ ಸಮುದಾಯದ ಜನರು ತಮ್ಮ ಉಪಜಾತಿ ಕಲಂನಲ್ಲಿ ಮಾದಿಗ ಎಂದಷ್ಟೇ ನಮೂದಿಸಬೇಕು. ಅಲ್ಲದೆ ಪ್ರತಿ ಮನೆಯ ಯಜಮಾನನ ಸಹಿ ಇಲ್ಲವೇ, ಹೆಬ್ಬೇರಳಿನ ಅಚ್ಚು ಪಡೆಯುವಂತೆ ಸಮಿತಿಯ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು. ಇದನ್ನು ಕ್ರಾಸ್ಚೆಕ್ ಮಾಡುವ ಜವಾಬ್ದಾರಿಯನ್ನು ವಿದ್ಯಾವಂತ ಮಾದಿಗ ಯುವಜನರು ಹೊರಬೇಕೆಂದರು.
ಸಮುದಾಯದ ಹಿರಿಯ ಹೋರಾಟಗಾರ ಕೆ.ದೊರೆರಾಜು ಮಾತನಾಡಿ, ಮಾದಿಗರು ತಮ್ಮ ನಿಖರವಾದ ಜನಸಂಖ್ಯೆಯನ್ನು ಸರಕಾರದ ಮುಂದಿಡಲು ಇದೊಂದು ಸುಸಮಯ. ಹಾಗಾಗಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು, ಸಮೀಕ್ಷೆಯನ್ನು ಯಶಸ್ವಿ ಮಾಡೋಣ. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಒಂದು ಸಮಿತಿ ರಚಿಸಿ, ಅದರ ಅಡಿಯಲ್ಲಿ ತಾಲೂಕು ಸಮಿತಿಗಳನ್ನು ಮಾಡಿ, ಯಾರೊಬ್ಬರು ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ಎಚ್ಚರ ವಹಿಸಬೇಕಾಗಿದೆ. ಯಾರು ಸಹ ಅನ್ಯತಾ ಭಾವಿಸದೆ ತಮ್ಮ ವಯುಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಸಮೀಕ್ಷೆಯ ಬಗ್ಗೆ ಸಮುದಾಯಕ್ಕೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಸಭೆಯಲ್ಲಿ ಮುಖಂಡರಾದ ಕೇಶವಮೂರ್ತಿ, ನರಸಿಂಹಯ್ಯ, ಪಿ.ಎನ್.ರಾಮಯ್ಯ, ಕೊಟ್ಟ ಶಂಕರ್, ಮಧುಗಿರಿ ನರಸಿಂಹಯ್ಯ, ಕೇಬಲ್ ರಘು, ಮೋಹನ್ ಕುಮಾರ್, ನರಸಿಂಹಮೂರ್ತಿ, ಕೆಂಪರಾಜು, ಕೊಡಿಯಾಲ ಮಹದೇವ್, ಗೂಳರಿಮೆ ನಾಗರಾಜು ಇದ್ದರು.
ಚರ್ಚೆಯ ನಂತರ ಡಾ.ವೈ.ಕೆ.ಬಾಲಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿ ರಚಿಸಿದ್ದು, ಜಿಲ್ಲಾ ಸಮಿತಿಗೆ ತಿಪಟೂರಿನಿಂದ ಶಾಂತಪ್ಪ, ಡಿ.ಕೆ.ಕುಮಾರ್, ಗುಬ್ಬಿಯಿಂದ ಕೊಡಿಯಾಲ ಮಹದೇವ್ ಮತ್ತು ಜಗದೀಶ್, ತುಮಕೂರು ಗ್ರಾಮಾಂತರದಿಂದ ನಾಗರಾಜು ಗೂಳರಿವೆ ಮತ್ತು ಯೋಗೀಶ್ ಸೋರೆಕುಂಟೆ, ತುಮಕೂರು ನಗರದಿಂದ ಕೇಬಲ್ ರಘು, ಪಿ.ಎನ್.ರಾಮಯ್ಯ, ಕೊರಟಗೆರೆಯಿಂದ ಗಂಗಣ್ಣ, ಸಿದ್ದಗಂಗಯ್ಯ, ಶಿರಾದಿಂದ ಸಣ್ಣಬೂತಯ್ಯ, ಕೊಟ್ಟಶಂಕರ್, ತುರುವೇಕೆರೆಯಿಂದ ಗಂಗಾಧರ್ ಬಾಣಸಂದ್ರ, ಮೂರ್ತಿ, ಚಿ.ನಾ.ಹಳ್ಳಿ ಲಿಂಗದೇವರು, ಚನ್ನಬಸವಯ್ಯ, ಕುಣಿಗಲ್ ಶಿವಶಂಕರ್, ಶ್ರೀನಿವಾಸ್, ಮಧುಗಿರಿ ನರಸಿಂಹಯ್ಯ, ದೊಡ್ಡೇರಿ ಕಣಿಮಯ್ಯ, ಪಾವಗಡದಿಂದ ರಮೇಶ್ ಮತ್ತು ನಾರಾಯಣ ಅವರನ್ನು ಒಳಗೊಂಡ ಸಮಿತಿ ರಚಿಸಲಾಯಿತು.
ಇದೇ ವೇಳೆ ಬಾಬು ಜಗಜೀವನ್ರಾಂ ಪ್ರಶಸ್ತಿ ಪಡೆದ ಹಿರಿಯ ಚಿಂತಕ ಕೆ.ದೊರೆರಾಜು ಅವರನ್ನು ಅಭಿನಂದಿಸಲಾಯಿತು.


