ರಾಜಕೀಯವನ್ನು ಪರಿವರ್ತನೆಯ ಅಸ್ತ್ರವಾಗಿಸಲು, ಹೇಗಾದರೂ ಸರಿ ಚುನಾವಣೆಯನ್ನು ಗೆಲ್ಲಬೇಕೆನ್ನುವ ಹಳೆಯ ರಾಜಕಾರಣಕ್ಕೆ ಅಂತ್ಯಹಾಡಿ, ಮುಕ್ತ ರಾಜಕಾರಣ ಕಟ್ಟಲು ಸಹಕಾರ ನೀಡಿ ಬೆಂಬಲಿಸಿ ಎಂದು ಜಾಗೃತ ಕರ್ನಾಟಕ ಸಂಘಟನೆಯ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಟ್ಟ ಮನವಿ ಮಾಡಿದ್ದಾರೆ.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ರಾಜಕೀಯ ಸಂಘಟನೆಯಾಗಿ ಜಾಗೃತ ಕರ್ನಾಟಕ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗೃತ ಕರ್ನಾಟಕ ರಾಜಕೀಯ ಪಕ್ಷವಲ್ಲ. ಆದರೂ ಚುನಾವಣೆಯ ರಾಜಕೀಯವನ್ನು ಬದಲಾಯಿಸುವ ಗುರಿ ಹೊಂದಿದೆ. ರಾಜಕೀಯ ಒಳ್ಳೆಯವರಿಗಲ್ಲ ಎಂಬುದನ್ನು ಸುಳ್ಳಾಗಿಸುವ ಆಕಾಂಕ್ಷೆಯಿಂದ ಮುನ್ನಡೆಯುತ್ತಿದೆ. ಧರ್ಮ ದ್ವೇಷ, ಜಾತಿ ಪ್ರೇಮ ಮತ್ತು ಹಣಬಲ ಮುಕ್ತ ರಾಜಕಾರಣ ಕಟ್ಟಲು ಹಾಗೂ ಹೊಸ ಪಕ್ಷವಲ್ಲದೆ, ಹಳೆಯ ಪಕ್ಷಗಳಲ್ಲೂ ಬದಲಾವಣೆ ತರುತ್ತಾ, ರಾಜಕಾರಣವನ್ನು ಬದಲಾಯಿಸಲು ಜಾಗೃತ ಕರ್ನಾಟಕವೀಗ ರಾಜಕೀಯ ಸಂಘಟನೆಯಾಗಿ ಘೋಷಿಸಿಕೊಂಡಿದೆ ಎಂದು ತಿಳಿಸಿದರು.
ರಾಜಕಾರಣ ಬದಲಾಗದೆ ದೇಶದಲ್ಲಿ ಏನು ಬದಲಾಗದು ಎಂಬುದು ಜಾಗೃತ ಕರ್ನಾಟಕದ ನಿಲುವಾಗಿದೆ. ಭಾರತದ ರಾಜಕೀಯ ಇಂದಿನ ಸ್ಥಿತಿಯ ಬಗ್ಗೆ ಅತೀವ ಆತಂಕದಲ್ಲಿದ್ದೇವೆ ಮತ್ತು ರಾಜಕೀಯವು ಇದೇ ಆದಿಯಲ್ಲಿ ಮುಂದುವರೆದರೆ ಹಸಿವು, ಅಸಮಾನತೆ ಶೋಷಣೆಯಿಂದ ಬಿಡುಗಡೆ ಪಡೆಯಲು ಸಾಧ್ಯವೇ ಇಲ್ಲ ಎಂದರು.
ಸುಳ್ಳು, ಅಸಹನೆ ಹಾಗೂ ದ್ವೇಷದ ಕಥನಗಳಿಂದ ಕಟ್ಟಲಾಗುವ ಮತೀಯ ರಾಜಕೀಯದಿಂದ ಕೊನೆಗೆ ಭಾರತ ಎಂಬ ದೇಶವೇ ಉಳಿಯುವುದಿಲ್ಲ ಎಂಬ ಸತ್ಯವನ್ನು ಮನಗಂಡು, ಭಾರತ ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂವಿಧಾನ ಪ್ರತಿಪಾದಿಸುವ ಸತ್ಯ, ನ್ಯಾಯ, ಸಮಾನತೆ ಮತ್ತು ಉದಾರತೆ, ಪ್ರಾಮಾಣಿಕತೆ, ವ್ಯಕ್ತಿ ಗೌರವ ಮತ್ತು ಬಂಧುತ್ವದ ಮೌಲ್ಯಗಳನ್ನು ರಾಜಕೀಯದಲ್ಲಿ ಮತ್ತು ಸಮಾಜದಲ್ಲಿ ಮರುಸ್ಥಾಪಿಸಲು. ಧರ್ಮದ್ವೇಷ, ಹಣಬಲ ಮತ್ತು ಜಾತಿಯತೆಯ ಪ್ರಭಾವಗಳನ್ನು ರಾಜಕೀಯದಿಂದ ತೊಡೆದುಹಾಕಲು ಸರ್ವರ ಹಿತಕಾಯುವ ಪರಿವರ್ತನೆಯ ಅಸ್ತ್ರವಾಗಿ ರಾಜಕೀಯವನ್ನು ಮರು ರೂಪಿಸಲು ಜಾಗೃತ ಕರ್ನಾಟಕ ಸಂಘಟನೆ ಶ್ರಮಿಸಲಿದೆ ಎಂದು ಹೇಳಿದರು.
ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಗೌರವಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಇಂದು ಹೋರಾಟದ ಮನೋಭಾವವೇ ಇಲ್ಲವಾಗಿ ಪ್ರಶ್ನಿಸುವ ಗುಣವನ್ನೇ ಕಳೆದುಕೊಳ್ಳುತ್ತಿರುವುದು ಆತಂಕ ಸೃಷ್ಠಿಸಿದೆ. ಹಾಗಾಗಿ ಜಾಗೃತ ಕರ್ನಾಟಕ ಸಂಘಟನೆ ಜನರ ನಡುವೆ ಚಿಂತನಶೀಲ ಮನೋಭಾವ ಮೂಡಿಸಿ ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಬೆಳಸಲಿದೆ ಎಂಬ ವಿಶ್ವಾಸವಿದೆ ಎಂದರು.
ಸ್ಲಂ ಜನಾಂದೋಲನ ಸಂಘಟನೆಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಜನರ ಬದುಕಿನ ಬಗ್ಗೆ ಮಾತನಾಡುವ ರಾಜಕಾರಣ ದೂರವಾಗಿರುವ ಸಂದರ್ಭದಲ್ಲಿ ಜಾಗೃತ ಕರ್ನಾಟಕ ರಾಜಕೀಯ ಸಂಘಟನೆಯಾಗಿರುವುದು ಆಶಾಭಾವನೆಯನ್ನು ಮೂಡಿಸಿದೆ ಎಂದು ತಿಳಿಸಿದರು.
ಸೂರ್ಯ ತೇಜಸ್ವಿ, ಸಿದ್ದು ಸೂರನಹಳ್ಳಿ, ಶಶಿ ಕುಮಾರ್, ಆದಮ್ ಖಾನ್, ಬಾಬು ಮನಸೆ, ಚೇತನ್, ಪತ್ರಕರ್ತರಾದ ಹರೀಶ್ ಕಮ್ಮನಕೋಟೆ, ನಾಗೇಂದ್ರಪ್ಪ, ಹರೀಶ್ ಹಾಜರಿದ್ದರು.


