ಈ ಕಾಲದ ಸಂಕಟಗಳನ್ನು ನೀಹ ವಿಭಿನ್ನವಾಗಿ ‘ಅವು ಅಂಗೇ ‘ ಸಂಕಲನದಲ್ಲಿ ಅನಾವರಣಗೊಳಿಸಿದ್ದಾರೆ. ಜಾತಿ ಅವಮಾನ ರೋಗಗ್ರಸ್ತ ಸಮಾಜದ ಆಚೆಗೆ ಸಮಾಜವನ್ನು ನೋಡಿರುವ ವಿಭಿನ್ನ ನಿರೂಪಣೆ ಈ ಸಂಕಲನದಲ್ಲಿದೆ ಎಂದು ಖ್ಯಾತ ಕಥೆಗಾರ್ತಿ ಡಾ. ಬಿ.ಟಿ ಜಾಹ್ನವಿ ಅವರು ತಿಳಿಸಿದರು.
ತುಮಕೂರು ನಗರದ ಕನ್ನಡ ಭವನದಲ್ಲಿ ಜಲಜಂಬೂ ಲಿಂಕ್ಸ್, ಅರುಣೋದಯ ಸಹಕಾರ ಸಂಘ, ಜಿಲ್ಲಾ ಕಸಾಪ, ಕರ್ನಾಟಕ ಲೇಖಕಿಯರ ಸಂಘ, ತುಮಕೂರು ಅಲೇಖ್ಯ ಎಂಟರ್ ಪ್ರೈಸಸ್ ವತಿಯಿಂದ ಆಯೋಜಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಹಾಗೂ ವಿಮರ್ಶಕ ಡಾ.ರವಿಕುಮಾರ್.ನೀ.ಹ. ಅವರ ಅವು ಅಂಗೇ ಕಥಾ ಸಂಕಲನ ಲೋಕಾರ್ಪಣೆ ಹಾಗು ಚರ್ಚೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಕೃತಿ ಕುರಿತು ಮಾತನಾಡಿದ ಶಿವಮೊಗ್ಗದ ಚಿಂತಕಿ ಮತ್ತು ಕುವೆಂಪು ಭಾಷಾ ಪ್ರಾಧಿಕಾರದ ಸದಸ್ಯರು ಆದ ಡಾ.ಭಾರತಿದೇವಿ. ಇಡೀ ಸಂಕಲನ ಹೊಸ ನಿರೂಪಣೆಯಿಂದ ಕೂಡಿ ಮಾನವೀಯ ಬದುಕನ್ನು ಕಟ್ಟಿಕೊಡಲು ಹಂಬಲಿಸುತ್ತವೆ. ಜೊತೆಗೆ ಸಶಕ್ತವಾದ ಮಹಿಳಾ ಪಾತ್ರಗಳು ಕನ್ನಡ ಕಥನ ಲೋಕವನ್ನು ಮುನ್ನಡೆಸಿದಂತೆ ಇಲ್ಲಿ ತನಗೆ ತಾನೇ ಕಟ್ಟಿಕೊಟ್ಟಿದೆ ಎಂದರು.
ಇಡೀ ಕಥನ ಪರಂಪರೆಯೊಳಗೆ ಕೊಟ್ಟಿರುವ ಲೋಕಸತ್ಯವನ್ನು ಲೋಕಲ್ ಆದ ಭಾಷಾ ಸೊಗಡಿನ ಮೂಲಕ ಈ ಸಂಕಲನ ಹೊಸ ಪರಿಭಾಷೆಯನ್ನು ಕಟ್ಟಿದೆ. ಮಹಿಳಾ ಜಗತ್ತು, ದಲಿತ ಜಗತ್ತು ಕೂಡಿಕೊಂಡು ಕನ್ನಡದ ಲೋಕ ವಿಸ್ತಾರಗೊಂಡಿದೆ ಎಂದರು.
ಈ ಹೊತ್ತು ಬರೆಯುತ್ತಿರುವ ಮಹಿಳಾ ಕಥನಕಾರರು ನಗರದ ಸಂಬಂಧದ ಸಂಕಟಗಳನ್ನ ಅನಾವರಣಗೊಳಿಸುತ್ತಿದ್ದರೆ, ಪುರುಷ ಕಥನಕಾರರು ಮತ್ತೆ ತಮ್ಮ ಹಳ್ಳಿಗೆ ಹಿಂದಿರುಗಿ ಗತದ ನೆನಪುಗಳನ್ನು ಕಥನವಾಗಿ ಕಟ್ಟುವಲ್ಲಿ ನಡೆಯುತ್ತಿದ್ದಾರೆ. ಈ ಎರಡು ಈ ಕಾಲದ ಬಹುಮುಖ್ಯವಾದಂತ ಹೆಜ್ಜೆ ಗುರುತುಗಳು ಅಂತ ಕಾಣಿಸುತ್ತದೆ. ಈ ತರದ ನಿಲುವಿಗೆ ಈ ಕಾಲದ ಬರಹಗಾರರು ಯಾಕೆ ಬಂದಿದ್ದಾರೆ ಎಂಬ ಪ್ರಶ್ನೆ ಕೂಡ ನಮ್ಮ ಮುಂದೆ ಇದೆ. ಎಂದು ಡಾ. ಭಾರತಿ ದೇವಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ತುಂಬಾಡಿ ರಾಮಯ್ಯ ಮಾತನಾಡಿ, ಡಾ.ರವಿಕುಮಾರ್ ನೀ.ಹ. ಅವರು ಕಥೆಗಳನ್ನು ನೆಲಮೂಲದ ಭಾಷೆಯ ಸೊಗಡನ್ನು ಹೊಂದಿದ್ದರೂ, ಹಟ್ಟಿ, ಕೇರಿಗಳನ್ನು ದಾಟಿ ನಗರವನ್ನು ತಲುಪಿವೆ. ಕಥಾ ಸಂಕಲನದಲ್ಲಿ ಅವರು ಬಳಸಿರುವ ಭಾಷೆ ಓದುಗರನ್ನು ಸೆಳೆಯುತ್ತದೆ. ಕಥೆಗಳು ಕಾವ್ಯ, ನಾಟಕ, ಚಿತ್ರಕಥೆ, ಖಂಡಕಾವ್ಯ ಎಲ್ಲಾ ರೀತಿಯ ಸಾಹಿತ್ಯ ಪ್ರಕಾರಗಳನ್ನು ಓದುಗನ ಮುಂದಿಡುತ್ತವೆ ಎಂದರು.
ಅವು ಅಂಗೇ ಕಥಾ ಸಂಕಲನದ ಕರ್ತೃ ಡಾ.ರವಿಕುಮಾರ್ ನೀ.ಹ.ಮಾತನಾಡಿ, 23ವರ್ಷಗಳ ಹಿಂದೆ ಒಂದು ಕಥೆಯನ್ನು ಬರದು, ವಿಮರ್ಶೆಯತ್ತ ಹೊರಳಿದ್ದು,ಟಿಪ್ಪುಸುಲ್ತಾನ್ನ ಕುರಿತು ಕಾದಂಬರಿಯೊಂದು ಸಿದ್ದಗೊಳ್ಳುತ್ತಿರುವ ಹೊತ್ತಿನಲ್ಲಿ ಅದಕ್ಕೊಂದು ಪೀಠಿಕೆ ಎಂಬಂತೆ 2023ರಲ್ಲಿ ಸುಮಾರು 8 ಕಥೆಗಳನ್ನು ರಚಿಸಿದ್ದು, ಕಥೆಯಲ್ಲಿರುವ ಎಲ್ಲಾ ಪಾತ್ರಗಳು ಜೀವಂತವಾಗಿವೆ. ಕಾಲ್ಪನಿಕವಲ್ಲ. ನೆಲಮೂಲ ಭಾಷೆಗಾಗಿ ಕೇರಿ, ಹಟ್ಟಿಗಳನ್ನು ಓಡಾಡಿದ್ದೇನೆ. ಕಥೆಗಳು ಹೆಚ್ಚು ಓದಿಸಿಕೊಳ್ಳುವ ಮೂಲಕ ನೆಲಮೂಲದ ಭಾಷೆ ಗೆದಿದ್ದೆ ಎಂದರು.
ಅವು ಅಂಗೇ ಕಥಾ ಸಂಕಲನ ಕುರಿತು ಉದ್ಯೋನ್ಮುಖ ಕವಿ ನವೀನ್ ಪೂಜಾರಳ್ಳಿ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾ ಬಸವರಾಜು, ಡಾ.ಮೂರ್ತಿ ತಿಮ್ಮನಹಳ್ಳಿ ಮಾತನಾಡಿದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಡಾ.ಮುಕುಂದ್, ಡಾ.ಹನುಮಂತರಾಯಪ್ಪ ಪಾಲಸಂದ್ರ, ಗುರುಪ್ರಸಾದ್ ಕಂಟಲಗೆರೆ, ಕಾಂತರಾಜ್ ಗುಪ್ಪಟ್ಣ, ಮೋದೂರು ತೇಜು, ಆಶಾರಾಣಿ, ಪಾವರ್ತಿ.ಎಚ್. ಇದ್ದರು.


