Thursday, January 29, 2026
Google search engine
Homeಮುಖಪುಟ'ಮಾನಸಿಕ ಮಾಲಿನ್ಯ, ಭಾವ ಭಾರತ ಸ್ವಚ್ಚಗೊಳಿಸಬೇಕು'-ಬರಗೂರು ರಾಮಚಂದ್ರಪ್ಪ

‘ಮಾನಸಿಕ ಮಾಲಿನ್ಯ, ಭಾವ ಭಾರತ ಸ್ವಚ್ಚಗೊಳಿಸಬೇಕು’-ಬರಗೂರು ರಾಮಚಂದ್ರಪ್ಪ

ಧರ್ಮ ದ್ವೇಷವನ್ನು ಕುರಿತು ಮಾತನಾಡುವುದು ಇದೆಯಲ್ಲ. ಅದು ಬಹಿರಂಗದಲ್ಲೇ ಕಾಣಿಸುತ್ತಿದೆ. ಆದರೆ ಅಂತರಂಗದ ಒಳಗಡೆ ಮಾನಸಿಕ ಮಾಲಿನ್ಯ ಇದೆ. ಅದರ ಪ್ರತಿಫಲನವಾಗಿ ಈ ಭಾಷೆ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮನಸ್ಸಿನ ಒಳಗಡೆ ಸಾಮಾಜಿಕ ನ್ಯಾಯದ ವಿರುದ್ಧವಾಗಿರುವ ಅಂಶಗಳು ಇರುತ್ತವೆ. ಮಹಿಳೆಯರಿಗೆ ವಿರುದ್ಧವಾದ ಅಂಶಗಳಿರುತ್ತವೆ. ಅಸ್ಪೃಶ್ಯತೆಯನ್ನು ಆಚರಿಸುವಂತಹ ಮಾಲಿನ್ಯ ಇರುತ್ತದೆ. ಅಸಮಾನತೆಯ ಅಂಶಗಳು ಜಾಗೃತವಾಗಿರುತ್ತವೆ. ಈ ಮಾನಸಿಕ ಮಾಲಿನ್ಯ ಇದೆಯಲ್ಲಾ ಇದನ್ನೂ ಕುರಿತು ನಾವು ಹೆಚ್ಚು ಹೆಚ್ಚು ಆಲೋಚನೆಯನ್ನು ಮಾಡಭೇಕಾಗಿದೆ ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದರು.

ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಈದಿನ ಡಾಟ್ ಕಾಮ್ ಹಮ್ಮಿಕೊಂಡಿದ್ದ ‘ನಮ್ಮ ಕರ್ನಾಟಕ ನಡೆದು 50 ಹೆಜ್ಜೆ, ಮುಂದಿನ ದಿಕ್ಕು’ ವಿಶೇಷ ಸಂಚಿಕೆ ಮತ್ತು ನ್ಯೂಸ್ ಆಪ್ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪರಿಸರ ಮಾಲಿನ್ಯದ ಕುರಿತು ನಾವು ಮಾತನಾಡುತ್ತೇವೆ. ಸ್ವಚ್ಛ ಭಾರತ ಬೇಕು. ಆದರೆ ಬೀದಿಗಳು ಸ್ವಚ್ಛವಾದರೆ ಸಾಕೇ? ಭಾವ ಭಾರತ ಸ್ವಚ್ಛವಾಗುವುದು ಬೇಡವೇ? ಎಂಬುದ ನನ್ನ ಪ್ರಶ್ನೆ, ಬರೀ ಬೀದಿಗಳು ಸ್ವಚ್ಛವಾದರೆ ಸಾಲದು, ಭಾವ ಭಾರತವನ್ನು ಸ್ವಚ್ಛಗೊಳಿಸಬೇಕು. ಭಾವ ಭಾರತ ಸ್ವಚ್ಛವಾಗಬೇಕಾದರೆ ನನ್ನ ಮನಸ್ಸು ಸ್ವಚ್ಛವಾಗಬೇಕು. ನನ್ನ ಮನಸ್ಸು ಸ್ವಚ್ಛವಾಗಬೇಕಾದರೆ, ಸಾವಿರಾರು ವರ್ಷಗಳಿಂದ ಮನಸ್ಸಿನಲ್ಲಿ ಬೇರು ಬಿಟ್ಟಿರುವಂತಹ ಮನುಸ್ಮೃತಿ ಆಗಿರಬಹುದು, ಬಂಡವಾಳಶಾಹಿಯಾಗಿರುವಂತಹ ಚಾಣಾಕ್ಷನ ತಂತ್ರಗಾರಿಕೆ ಆಗಿಬರಹುದು. ಪ್ಯೂಡಲೀಸಂಗೆ ಸಂಬಂಧಪಟ್ಟಂತಹ ಪರಿಭಾಷೆಗಳು, ಈ ಮಾಲಿನ್ಯವನ್ನು ನಮ್ಮ ಒಳಗಡೆ ತುಂಬಿಕೊಂಡಿದೆಯಲ್ಲ, ಇದನ್ನು ನಾಶಪಡಿಸುವುದು ಹೇಗೆ ಎಂಬುದು ಬಹಳ ಮುಖ್ಯವಾದುದು ಎಂದರು.

ಪ್ರಜಾಪ್ರಭುತ್ವದ ಜಾಗದಲ್ಲಿ ಮೂಲಭೂತವಾದ ವಿಜೃಂಭಿಸುತ್ತಿರುವ ಸಂದರ್ಭದಲ್ಲಿ ನಾವು ಸೇರಿದ್ದೇವೆ. ಹಾಗಾಗಿ ಮಾನಸಿಕ ಮಾಲಿನ್ಯವನ್ನು ನಾಶ ಮಾಡಬೇಕು ಎಂಬುದರ ಅರ್ಥ ಜನರ ಮನಸ್ಸಿನ ಒಳಗಡೆ ಅಥವಾ ಜನಪ್ರತಿನಿಧಿಗಳ ಮನಸ್ಸಿನ ಒಳಗಡೆ ಇರುವಂತಹ ಜನವಿರೋಧಿ ಅಂಶಗಳನ್ನು ನಾಶ ಮಾಡಬೇಕು. ಮನುಸ್ಮೃತಿಯ ಅಂಶಗಳು ಮನಸ್ಸಿನಲ್ಲಿ ಬೇರು ಬಿಟ್ಟಿದೆ. ಅದು ಅನೇಕರಿಗೆ ಗೊತ್ತಿದೆ. ಅಂದರೆ ಮನಸ್ಸನ್ನು ಭಾವೋನ್ಮಾದಗೊಳಿಸುವಂತಹ ಶಕ್ತಿಗಳಿಗೆ ಗೊತ್ತಿದೆ ಎಂದು ಹೇಳಿದರು.

ಇಂದು ಮಾನಸಿಕ ಮಾಲಿನ್ಯವನ್ನು ತೊಲಗಿಸಬೇಕು ಎಂದರೆ ಅಲ್ಲಿ ಬಂಡವಾಳಶಾಹಿ ಇದೆ. ಪುರೋಹಿತಶಾಹಿ ಇದೆ. ಪ್ಯೂಡಲ್ ಪದ್ದತಿ ಇದೆ. ಹಾಗಾಗಿ ನಮ್ಮ ಭಾಷೆ ಕೆಡುತ್ತಿದೆ. ನನ್ನ ಭಾಷೆ ಕೆಟ್ಟಿದೆ ಎಂದರೆ ಅದು ಒಂದು ಜನ ಜೀವನವನ್ನು ಕೆಡಿಸಿದೆ. ಹಾಗಾಗಿ ಈ ಮಾನಸಿಕ ಮಾಲಿನ್ಯವನ್ನು ನಾಶಗೊಳಿಸಬೇಕೆಂದರೆ ನಾವು ಜನರ ಮನಸ್ಸನ್ನು ಮುಟ್ಟಬೇಕು. ಈ ಬಗ್ಗೆ ಕಾರ್ಯವಿಧಾನಗಳನ್ನು ರೂಪಿಸಬೇಕಾಗಿದೆ. ಜನರ ಮನಸ್ಸು ಮುಟ್ಟಲು ಆಗದೇ ಹೋದರೆ, ಆಗ ಅವರನ್ನು ಬದಲಾಯಿಸಲು ಸಾಧ್ಯವಿಲ್ಲ. ಜನರ ಮನಸ್ಸನ್ನು ಮುಟ್ಟಲು ಎಂಥಾ ಭಾಷೆಯನ್ನು ಬಳಸಬೇಕು ಎಂಬುದನ್ನು ಕಂಡುಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಜನರ ಮನಸ್ಸಿನಲ್ಲಿ ಒಂದು ಪರಂಪರೆ ಇದೆ. ಪರಂಪರೆ ಬೇರೆ, ಸಂಪ್ರದಾಯ ಬೇರೆ, ಪರಂಪರೆಗೆ ಒಂದು ಚಲನಶೀಲತೆ ಇರುತ್ತದೆ. ಸಂಪ್ರದಾಯಕ್ಕೆ ಜಡತೆ ಇರುತ್ತದೆ. ಇದು ಬದಲಾಗುವುದಿಲ್ಲ. ಪರಂಪರೆಗೆ ಒಂದು ಪ್ರಜ್ಞೆ ಇದೆಯಲ್ಲ, ಅದರ ಬಗ್ಗೆ ನನಗೆ ಗೌರವ ಇದೆ. ನಾವು ಜನರ ಮನಸ್ಸನ್ನು ಮುಟ್ಟಿ ಅವರ ಮಾನಸಿಕ ಮಾಲಿನ್ಯವನ್ನು ನಾಶಪಡಿಸಬೇಕು ಅಂದರೆ, ಪರಂಪರೆಯಲ್ಲಿರುವ ಚಲನಶೀಲ ಚಿಂತನೆಗೆಳನ್ನು, ಅದರ ರೂಪಕಗಳನ್ನು, ಅಲ್ಲಿರುವ ವ್ಯಕ್ತಿಗಳನ್ನು ಬಳಸಿಕೊಂಡು ನಾವು ಜನರ ಮನಸ್ಸು ಮುಟ್ಟಬೇಕಾಗಿದೆ. ಇಂದು

ಇಡೀ ದೇಶದಲ್ಲಿ ವಿಜೃಂಭಿಸುತ್ತಿರುವ ಜಾತಿವಾದವನ್ನು, ಕೋಮುವಾದವನ್ನು, ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಆಗುತ್ತಿರುವ ಧಕ್ಕೆಯನ್ನು ತಪ್ಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಹಿರಿಯ ಸಾಮಾಜಿಕ ಚಿಂತಕ ಕೆ.ದೊರೈರಾಜ್ ಈದಿನ ಡಾಟ್ ಕಾಮ್ ಆಪ್ ಬಿಡುಗಡೆ ಮಾಡಿದರು. ಈದಿನ ಡಾಟ್ ಕಾಮ್ ನ ಡಾ.ಎಚ್.ವಿ.ವಾಸು, ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಸರವಾದಿ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ಎ.ನರಸಿಂಹಮೂರ್ತಿ, ನಿಖಿತ್ ರಾಜ್ ಮೌರ್ಯ, ಎಸ್.ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ, ಸಾಮಾಜಿಕ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ, ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ, ಸಹಬಾಳ್ವೆ ಸಂಘಟನೆಯ ಅಧ್ಯಕ್ಷೆ ದೀಪಿಕಾ, ಎಐಟಿಯುಸಿ ಮುಖಂಡ ಗಿರೀಶ್, ಸಾಮಾಜಿಕ ಹೋರಾಟಗಾರ ತಾಜುದ್ದೀನ್ ಷರೀಫ್, ಟೂಡಾ ಶಶಿಧರ್, ರಂಗಮ್ಮ, ಅನಿಲ್ ಕುಮಾರ್ ಚಿಕ್ಕದಾಳವಟ್ಟ, ಚಂದನ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular