ನಮ್ಮ ಜೀವನ ಕ್ರಮವನ್ನು ಮುಂದಿನ ಪೀಳಿಗೆಗೆ ಸಾಗಿಸುವ ಸಂಪರ್ಕ ಸೇತುವೆಯೇ ಜಾನಪದ. ಜಾನಪದ ನಿಂತ ನಿರಲ್ಲ. ಕಾಲಕ್ಕೆ ತಕ್ಕಂತೆ ಬದಲಾಗುವ ತೊರೆಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ರಾಜ್ಯಾಧ್ಯಕ್ಷೆ ಡಾ. ಹೆಚ್.ಎಲ್. ಪುಷ್ಪ ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ‘ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಎಂಬ ವಿಚಾರ ಸಂಕಿರಣ ಮತ್ತು ಜಾಣ ಜಾಣೆಯರ ಜಾನಪದ ಗಾಯನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ಬೇರೆಲ್ಲಾ ಕಲೆಗಳಿಗಿಂತ ಜಾನಪದ ಕಲೆ ವಿಭಿನ್ನವಾದದ್ದು. ಪ್ರಸ್ತುತ ಜಾನಪದ ಕಲೆಯ ಅನಿವಾರ್ಯತೆ ಮತ್ತು ಅವಶ್ಯಕತೆಗಳನ್ನು ಯುವ ಪೀಳಿಗೆ ಅರಿಯಬೇಕು. ಜಾನಪದ ಹಾಡುಗಳು ನಮ್ಮ ಬದುಕಿನ ಎಲ್ಲಾ ಆಯಾಮಗಳನ್ನು ಕಟ್ಟಿಕೊಡುತ್ತವೆ. ಜಾನಪದವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕಿದೆ ಎಂದರು.
ಜಿ.ಪಂ. ಸಿಇಒ ಪ್ರಭು ಮಾತನಾಡಿ, ವೃತ್ತಿಪರತೆಗೆ ವಿಜ್ಞಾನ, ಮೌಲ್ಯಯುತವಾದ ಜೀವನಕ್ಕೆ ಜ್ಞಾನ. ಇವೆರಡೂ ಅವಶ್ಯಕ. ಇವೆರಡೂ ಬರುವುದು ನಮ್ಮ ಪರಿಸರ, ಸಂಸ್ಕೃತಿ ಹಾಗೂ ಜಾನಪದ ಆಚರಣೆಯಿಂದ. ಶಿಷ್ಟ ಶಿಕ್ಷಣ, ಬಾಹ್ಯಜ್ಞಾನ ಹಾಗೂ ಜನವಾಣಿ ಇವು ಯಶಸ್ವಿ ವ್ಯಕ್ತಿಯ ಮಾರ್ಗದರ್ಶಕಗಳಾಗಿವೆ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಕಾಶ್ ಮಾತನಾಡಿ, ಸ್ವ ಹಿತಾಸಕ್ತಿಗಾಗಿ ಬದುಕಿದವರು ಸ್ವಾವಲಂಬಿಯಾಗುತ್ತಾರೆ. ಇತರರಿಗಾಗಿ ಬದುಕಿದವರು ಇತಿಹಾಸವಾಗುತ್ತಾರೆ. ಸಾಧಕರಿಗೆ ಸಾವಿಲ್ಲ ಎಂಬುದನ್ನು ಬುದ್ಧ, ಬಸವ ಮತ್ತು ಅನೇಕ ಸಂತರು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ಜಾನಪದಕ್ಕೆ ಒಗ್ಗಿಕೊಂಡವರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಪಡೆಯುತ್ತಾರೆ ಎಂದರು.
‘ಜಾನಪದ ಕಲೆ ಉಳಿಯುವಿಕೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಹಿರಿಯ ಜಾನಪದ ತಜ್ಞ ಸಣ್ಣನಾಗಪ್ಪ ಮಾತನಾಡಿದರು. ಕಲಾವಿದರು ಜಾನಪದ ಗಾಯನ ನಡೆಸಿಕೊಟ್ಟರು. ಆನಂದ ಮಾದಲಗೆರೆ ಹಾಗೂ ಜಲಧಿ ರಾಜು ಅವರಿಗೆ ಸನ್ಮಾನ ಮಾಡಲಾಯಿತು.
ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ಜಮ್, ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತ, ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ಡಾ.ವೆಂಕಟರೆಡ್ಡಿರಾಮರೆಡ್ಡಿ, ಡಾ.ನಾಗಭೂಷಣ ಬಗ್ಗನಡು, ಡಾ.ರಾಮಕೃಷ್ಣ ಇದ್ದರು.


