ಯುವಜನರು, ಅದರಲ್ಲಿಯೂ ಹೆಣ್ಣು ಮಕ್ಕಳು ಓದುವ ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ, ದಾರಿ ತಪ್ಪಿದರೆ, ಬದುಕಿನದ್ದಕ್ಕೂ ಸಂಕಷ್ಟದ ಜೀವನ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನಿಸಾ ಎಚ್ಚರಿಸಿದ್ದಾರೆ.
ತುಮಕೂರು ನಗರದ ಮಳೆಕೋಟೆಯ ಧಾನಿಶ್ ಸಭಾಂಗಣದಲ್ಲಿ ಮೌಲಾನ ಅಬ್ದುಲ್ ಕಲಾಂ ಆಜಾದ್ ಶಾಲೆಯ ಮಕ್ಕಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊಬೈಲ್, ಇನ್ನಿತರ ಅಕರ್ಷಣೆಗಳಿಂದ ದೂರವಿದ್ದು, ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡರೆ, ಸಾಧಕರ ಪಟ್ಟಿಯಲ್ಲಿ ನಿಲ್ಲಬಹುದು.ಇದಕ್ಕೆ ನನ್ನ ಜೀವನವೇ ಉದಾಹರಣೆ ಎಂದರು.
ನಮ್ಮ ತಂದೆ, ತಾಯಿ, ನಮಗೆ ಬೇಕಾದನ್ನು ಕೊಡಿಸಲಿಲ್ಲ, ಒಳ್ಳೆಯ ಶಾಲೆಗೆ ಸೇರಿಸಲಿಲ್ಲ ಎಂದು ದೂರುವ ಬದಲು ಇರುವುದರಲ್ಲಿಯೇ ಕಷ್ಟಪಟ್ಟು ಓದಿ, ಒಳ್ಳೆಯ ಅಂಕ ಪಡೆದು, ಇರುವ ಅವಕಾಶಗಳನ್ನು ಬಳಸಿಕೊಂಡರೆ ನೀವು ಕೂಡ ನಮ್ಮಂತೆ ನ್ಯಾಯಾಧೀಶರೋ, ವಕೀಲರೋ, ಅಧಿಕಾರಿಗಳೋ ಆಗಬಹುದು. ಮನೆಯಲ್ಲಿ ಅಪ್ಪ, ಅಮ್ಮ ನಮಗೆ ಸಮಯ ನೀಡುತ್ತಿಲ್ಲ ಎಂದು ಸೊಷಿಯಲ್ ಮೀಡಿಯಾದಲ್ಲಿ ಗೆಳೆಯರನ್ನು ಹುಡುಕುವ ಬದಲು ಅದೇ ಸಮಯವನ್ನು ಓದಿಗೆ ನೀಡಿದರೆ ಸಕಲವೂ ನಿಮ್ಮ ಬಳಿ ಬರುತ್ತದೆ. ಅರ್ಥಿಕ ಸ್ವಾವಲಂಬಿಗಳಾದರೆ, ನಿಮ್ಮ ಪೋಷಕರು ಈಡೇರಿಸಲಾಗದ ಬೇಡಿಕೆಗಳನ್ನು ನೀವೇ ಸ್ವತಃ ಈಡೇರಿಸಿಕೊಳ್ಳುವ ಅವಕಾಶ ದೊರೆಯುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್ ಮಾತನಾಡಿ, ಎಲ್ಲಾ ಮಕ್ಕಳಲ್ಲಿಯೂ ಪ್ರತಿಭೆ ಇದೆ. ಆದರೆ ಅದರ ಸದುಪಯೋಗವನ್ನು ಹೇಗೆ ಮಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಪೋಷಕರು, ಶಿಕ್ಷಕರು ಗಮಹರಿಸಬೇಕು. ಶಾಲೆಗೆ ಹೋಗುವ ಮಗು ಏನು ಕಲಿಯುತಿದ್ದಾನೆ. ಆತನ ಸ್ನೇಹಿತ ಬಳಗದ ಬಗ್ಗೆಯೂ ಗಮನಹರಿಸಬೇಕು. ಇಲ್ಲದಿದ್ದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಸಾಧನೆಗೆ ಅಡ್ಡದಾರಿಗಳಿಲ್ಲ. ವಿದ್ಯುತ್ತೇ ಇಲ್ಲದೆ ಬಿಇ ವರೆಗೆ ಓದಿ, ಇಂದು ಅಡಿಷನಲ್ ಎಸ್.ಪಿ. ಅಗಿದ್ದೇನೆ. ನನ್ನಂತಹ ಅನೇಕರು ಹಲವು ಕೊರತೆಗಳ ನಡುವೆಯೇ ಹುಬ್ಬೇರಿಸುವಂತೆ ಸಾಧನೆ ಮಾಡಿದ್ದಾರೆ. ಅವರೆಲ್ಲರೂ ನಿಮಗೆ ಸ್ಪೂರ್ತಿಯಾಗಬೇಕು. ಒಂದು ಹಂತದವರಗೆ ಸೊಷಿಯಲ್ ಮಿಡಿಯಾದಿಂದ ದೂರವಿರಿ ಎಂದು ಸಲಹೆ ನೀಡಿದರು.
ತಹ್ರೀಕ್ ಉರ್ದು ಆದಬ್ನ ಅಧ್ಯಕ್ಷ ತಾಜುದ್ದೀನ್ ಷರೀಫ್ ಮಾತನಾಡಿ, ತಂದೆ, ತಾಯಿಗಳಿಗಿಂತ ಶಿಕ್ಷಕರಿಗೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಯೇ ಪೂರ್ಣ ಮಾಹಿತಿ ಇರುತ್ತದೆ. ಹಾಗಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳ ಪೋಷಕರ ಜೊತೆ ಮಾತನಾಡಿ, ಮಕ್ಕಳು ಓದುವಂತೆ ಪ್ರೇರೆಪಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ನಾವು ಎಂತಹವರು ಎಂಬುದನ್ನು ನಮ್ಮ ಸ್ನೇಹಿತರ ವಲಯವನ್ನು ನೋಡಿ ತಿಳಿಯಬಹುದು. ಕೆಟ್ಟವರ ಸಹವಾಸ ಕೈ ಬಿಡಿ, ಐದು ನಿಮಿಷದ ಮೊಬೈಲ್ ಗೀಳು ನಿಮ್ಮ ಐವತ್ತು ವರ್ಷದ ಜೀವನವನ್ನು ಹಾಳು ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಬ್ಬೀರ ಅಹ್ಮದ್ ಸರ್ಜಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಕೆಎಂಡಿಸಿಯ ಜಿಲ್ಲಾ ವ್ಯವಸ್ಥಾಪಕ ಅಲೀಮ್ ಉಲ್ಲಾ, ಮೌಲಾನ ಅಜಾದ್ ಶಾಲೆಯ ಪ್ರಾಂಶುಪಾಲ ಹರೀಶ್, ಎಸ್.ಎಂ, ಇಆರ್ಓ ಅಫ್ಜಲ್ಖಾನ್ ಮತ್ತಿತರರು ಇದ್ದರು.