ಕಲಬುರ್ಗಿಯಲ್ಲಿ ಪರಿಶಿಷ್ಟ ಪಂಗಡದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ಹೋರಾಟ ಮಾಡುತ್ತಿರುವ ಹೋರಾಟಗಾರ ಶ್ರವಣ್ಕುಮಾರ್ ನಾಯಕ್ರನ್ನು ಗಡಿಪಾರಿಗೆ ಒತ್ತಾಯಿಸಿರುವುದು ಖಂಡನೀಯ ಎಂದು ಕುಪ್ಪೂರು ಶ್ರೀಧರನಾಯಕ್ ತಿಳಿಸಿದ್ದಾರೆ.
ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ವಾಲ್ಮೀಕಿ ಸಮುದಾಯದ ರಾಜ್ಯಮಟ್ಟದ ಹೋರಾಟಗಾರರ ಸಭೆ ನಡೆಸಿ ಮಾತನಾಡಿ ಅವರು, ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಕ್ಕೆ ವಂಚಿಸಿ, ನೌಕರಿಯ ಜೊತೆಗೆ, ಸರ್ಕಾರದ ಸವಲತ್ತುಗಳನ್ನು ಪಡೆಯುವವರ ವಿರುದ್ದ ಕ್ರಮ ಕೈಗೊಳ್ಳದೆ, ನಕಲಿ ಜಾತಿ ಪತ್ರ ಪಡೆದವರು ನೀಡಿದ ದೂರನ್ನೇ ಕೇಂದ್ರೀಕರಿಸಿ ಹೋರಾಟಗಾರರನ್ನು ಗಡಿಪಾರು ಮಾಡಲು ಮುಂದಾದರೆ ಉಗ್ರ ಹೋರಾಟ ನಡೆಸುವುದಲ್ಲದೆ, ಕಲ್ಬುರ್ಗಿ ಚಲೋದಂತಹ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.
ಇಂದು ರಾಜ್ಯದಲ್ಲಿ ಶೋಷಿತ ಸಮುದಾಯಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜಾತಿ ಪಟ್ಟಿಯಲ್ಲಿರುವ ವಿವಿಧ ಜಾತಿಗಳ ಹೆಸರಿನಲ್ಲಿ ಉಳ್ಳುವರು, ಮುಂದುವರೆದ ಜಾತಿಗಳ ಜನರು ನಕಲಿ ದಾಖಲೆ ಸೃಷ್ಟಿ ಮಾಡಿ, ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದು ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಹಲವಾರು ವರ್ಷಗಳಿಂದ ಶ್ರವಣಕುಮಾರ್ ನಾಯಕ್ ಹೋರಾಟ ನಡೆಸುತಿದ್ದಾರೆ.
ಬೇಡ ಜಂಗಮ, ಬುಡುಗ ಜಂಗಮ, ಜೇನು ಕುರುಬ, ಕಾಡು ಕುರುಬ ಇನ್ನಿತರ ಹೆಸರಿನಲ್ಲಿ ಉಳ್ಳುವರು ಜಾತಿ ಪ್ರಮಾಣ ಪತ್ರಗಳನ್ನು ನಕಲು ಮಾಡಿ,ತಮ್ಮ ಮಕ್ಕಳಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಲಪಟಾಯಿಸಿದರೆ, ರಾಜಕೀಯ ಮೀಸಲಾತಿಯನ್ನು ಪಡೆಯಲಾಗುತ್ತಿದೆ. ಇದರ ವಿರುದ್ದ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಕೆಲವರು ಶ್ರವಣಕುಮಾರ್ ಮೇಲೆ ಇಲ್ಲಸಲ್ಲದ ಆರೋಪ ಮಾಡಿ, ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿರುವುದು ಖಂಡನೀಯ. ಒಂದು ವೇಳೆ ಜಿಲ್ಲಾಡಳಿತ ಈ ಒತ್ತಾಯಕ್ಕೆ ಮಣಿದರೆ ಇಡೀ ರಾಜ್ಯದಾದ್ಯಂತ ಕಲ್ಬುರ್ಗಿ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕುಪ್ಪೂರು ಶ್ರೀಧರನಾಯಕ್ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ನಾಯಕ್, ನರಸಾಪುರ ನಾಗರಾಜು, ಬೆಂಗಳೂರು ರಮೇಶ್, ಹೆಚ್.ಜಿ.ರಂಗನಾಥ್, ಭಾಗ್ಯಮ್ಮ, ರಾಮಾಂಜಿ ನಾಯಕ್, ಸೋಲಾರ್ ರಾಜಣ್ಣ, ಅರುಣ್ ಕುಮಾರ್ ಸೇರಿದಂತೆ ಹಲವರು ಇದ್ದರು.


