ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ ಗೆ ತುಂಬಾ ಹತ್ತಿರದಲ್ಲಿದ್ದು ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡುವುದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುದ್ದಹನುಮೇಗೌಡ ಅವರು ಯಾವುದೇ ಸಂದರ್ಭದಲ್ಲಿ ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಬಹುದು. ಅವರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ ಎಂದು ತಿಳಿಸಿದ್ದಾರೆ.
ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಈ ಬಗ್ಗೆ ನನ್ನ ಅಭಿಪ್ರಾಯ ಏನೂ ಇಲ್ಲ ಎಂದಿದ್ದಾರೆ.
ರಾಮನ ಕುರಿತ ಕೆಎನ್.ಆರ್ ಹೇಳಿಕೆ
ನಾನು ರೈತ, ಹೊಲಕ್ಕೆ ಹೋಗುವಾಗ ಸಗಣಿ ತೆಗೆದುಕೊಂಡು ಹೋಗಿ, ಸಗಣಿ ಮೂರ್ತಿ ಮಾಡಿ ಗರಿಕೆ ಹುಲ್ಲು ಇಟ್ಟು ಪೂಜೆ ಮಾಡುತ್ತಿದ್ದೆ. ಹೊಲದಲ್ಲಿ ಸಿಕ್ಕ ಬೆಣಚು ಕಲ್ಲಿಗೂ ಪೂಜೆ ಮಾಡುತ್ತಿದ್ದೆವು. ಅದು ನಮ್ಮ ನಂಬಿಕೆ ಎಂದು ತಿಳಿಸಿದ್ದಾರೆ.
ಬಾಬ್ರಿ ಮಸೀದಿ ದ್ವಂಸ ಮಾಡಿದ ನಂತರ ನಾನು ಅಲ್ಲಿಗೆ ಭೇಟಿ ಕೊಟ್ಟಾಗ ನಾನು ಅಲ್ಲಿ ಕಂಡ ಚಿತ್ರಣವನ್ನು ಅವತ್ತು ಹೇಳಿಕೊಂಡಿದ್ದೇನೆ ಅಷ್ಟೇ. ಬೊಂಬೆಯನ್ನ ದೇವರು ಅಂತಾ ಹೇಳಿದರೆ ಏನು ತಪ್ಪು. ಬೊಂಬೆಯಲ್ಲಿ ದೈವತ್ವ ಇರೋದಿಲ್ವಾ ಎಂದು ಹೇಳಿದ್ದಾರೆ.
ಬೊಂಬೆ ಅನ್ನೋ ಕಾರಣಕ್ಕೆ ತಿರಸ್ಕಾರ ಮನೋಭಾವದಿಂದ ಇವರು ಮಾತನಾಡ್ತಾರಲ್ಲ ಅದು ಸರಿನಾ ಎಂದು ಪ್ರಶ್ನಿಸಿದ ರಾಜಣ್ಣ, ಟೂರಿಂಗ್ ಟಾಕೀಸ್ ರೀತಿಯೇ ಇತ್ತು ಅವತ್ತು ಅಲ್ಲಿ. ಅದಕ್ಕೆ ಹೇಳಿದ್ದೇನೆ ನಾನು. ಅದನ್ನ ಬಿಟ್ಟು ದೇವರನ್ನೇ ಟೂರಿಂಗ್ ಟಾಕೀಸ್ ಅಂದಿಲ್ಲ ಎಂದು ಹೇಳಿದರು.
ಬಿಜೆಪಿಯವರು ನನಗೆ ರಾವಣ ಎಂದಿದ್ದಾರೆ. ಇದರಿಂದ ನನಗೆ ಬೇಜಾರಾಗಿಲ್ಲ, ರಾವಣ ಎಂದು ಅನಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ಅವನಂತಹ ಧೈವ ಭಕ್ತ ಯಾರೂ ಇರಲಿಲ್ಲ ಎಂದು ಹೇಳಿದ ಕೆಎನ್ಆರ್ ಇವರೆಲ್ಲ ಡೋಂಗಿ ಧೈವ ಭಕ್ತರಾಗಿದ್ದಾರೆ. ಹಿಂದೆ ಅಣ್ಣಾದೋರೈ ರಾಮಾಯಣಕ್ಕೆ ಬದಲಾಗಿ ರಾವಣಾಯಣ ನಾಟಕ ಆಡಿದ್ದರು. ಈ ನಾಟಕದಲ್ಲಿ ರಾವಣ ಸೀತೆ ಮೇಲೆ ಬಲಾತ್ಕಾರ ಮಾಡೋದಿಲ್ಲ. ಇದು ರಾವಣನ ದೊಡ್ಡ ಗುಣ ಅಲ್ವೇ ಎಂದು ಪ್ರಶ್ನಿಸಿದರು.