ಗೋಪಾಲನೆಯ ವೃತ್ತಿಯನ್ನು ಗೌರವಿಸುವ ಸಲುವಾಗಿ ಗಣೆಪದ, ಕಾವ್ಯಗಳ ಮೂಲಕ ಗೋವಿನ ಪಾಲನೆ, ಪೋಷಣೆಯಲ್ಲಿ ನೆಲಮೂಲ ಸಂಸ್ಕೃತಿಯನ್ನು ಸಮಾಜಕ್ಕೆ ಸಾರಿದ ಜುಂಜಪ್ಪ ತಳ ಸಮುದಾಯದ ಧ್ವನಿಯಾದರು ಎಂದು ಜನಪದ ವಿದ್ವಾಂಸ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಜುಂಜಪ್ಪಅಧ್ಯಯನ ಪೀಠ ವಿವಿ ಕಲಾ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಜುಂಜಪ್ಪನ ಕಾವ್ಯದಲ್ಲಿ ಪಶುಪಾಲನೆ ಮತ್ತು ಗಣೆಪದ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವೃತ್ತಿಯ ಗೌರವವನ್ನುಎತ್ತಿ ಹಿಡಿಯುವ ಮೂಲಕ ಗೋವಿನ ಪಾಲನೆ, ರಕ್ಷಣೆ, ಸಮುದಾಯದ ಸಾಂಸ್ಕೃತಿಕ ನಾಯಕನಾಗಿ ಪರಿಶ್ರಮದ ಮೂಲಕ ಹೊರಹೊಮ್ಮಿದವರು ಜುಂಜಪ್ಪ. ಸಮಾಜದ, ವ್ಯಕ್ತಿಯ, ಸಮುದಾಯದ ಸ್ಥಾನಮಾನಗಳನ್ನು ಗುರುತಿಸುವ ಗೋಪಾಲನೆಯ ವೃತ್ತಿಯನ್ನು ಗೋವಾಳರು ಅಥವಾ ಗೊಲ್ಲರು ಮಾಡುತ್ತಿದ್ದರು. ಗೋವಿನ ರಕ್ಷಣೆಯಲ್ಲಿ ಯುದ್ಧಗಳಾಗಿದ್ದನ್ನು ಇತಿಹಾಸ ಉಲ್ಲೇಖಿಸುತ್ತದೆ. ಗೋಪಾಲಕರು ಜೀವತೆತ್ತು ಗೋವುಗಳನ್ನು ರಕ್ಷಿಸಿ ಪೂಜೆಗೆ ಒಳಪಟ್ಟಿದ್ದಾರೆ ಎಂದು ಹೇಳಿದರು.
30 ಪ್ರಾಚೀನ ಕಾವ್ಯಗಳಲ್ಲಿ ಗೊಲ್ಲ ಸಮುದಾಯದ ಕುರಿತ ಪ್ರಸ್ತಾಪವಿದೆ. ಗೋಪಾಲಕರು ಭೌಗೋಳಿಕ ಅನ್ವೇಷಕರಾಗಿ, ಪಾರಂಪರಿಕ ಸಂಖ್ಯಾಶಾಸ್ತ್ರಜ್ಞರಾಗಿ, ಹಾಲೋತ್ಪನ್ನ ಪ್ರಕ್ರಿಯೆಗಳನ್ನು ಪಾರಂಪರಿಕವಾಗಿ ಭಾರತೀಯ ಸಮಾಜಕ್ಕೆ ಪರಿಚಯಿಸಿ, ನದಿ ಕಾಡುಗಳ ವಿಸ್ತಾರವನ್ನುಅನ್ವೇಷಿಸುವುದರ ರಾಯಭಾರಿಗಳೆಂದೇ ಹೇಳಬಹುದು. ಪಶುಪಾಲನೆಯ ತೀವ್ರತೆಯ ಮುಂದೆ ತಮ್ಮ ಖಾಸಗಿ ಬದುಕು ನಗಣ್ಯವಾಗಿತ್ತು ಎಂದು ಜುಂಜಪ್ಪ ತನ್ನ ಕಾವ್ಯಗಳಲ್ಲಿ ಹಾಡಿದ್ದಾರೆ ಎಂದರು.
ಜುಂಜಪ್ಪನ ಅರ್ಥದಲ್ಲಿ ಪಶುಪಾಲನೆಯು ಸಾಂಸ್ಕೃತಿಕ ಕೃಷಿ ಪದ್ಧತಿಯ ಸಂತಾನ ಸೂತ್ರವನ್ನು ಹಾಗೂ ಸಾಮಾಜಿಕ ನೈತಿಕ ಎಚ್ಚರಿಕೆಯನ್ನು ಸಾರುವ ವೃತ್ತಿಯಾಗಿತ್ತು. ಏಳು ಊನ ದನಗಳನ್ನು ಪಡೆದು, ಅವನ್ನುಪಾಲಿಸಿ, ಪೋಷಿಸಿ, ವೈರತ್ವ ಎದುರಿಸಿ 700 ದನಗಳ ಒಡೆಯನಾಗಿ, ಅರಸನಾಗಿಕೆರೆ, ಅಣೆಕಟ್ಟು, ಹುಲ್ಲುಬಾನಿ ನಿರ್ಮಿಸಲು, ಕಾಡಿನ ಸಂಪತ್ತನ್ನು ವೃದ್ಧಿಸಲು ಮುಂದಾದ ಜುಂಜಪ್ಪ ಧ್ವನಿರಹಿರ ಕೂಗಾದರು ಎಂದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ನಿವೃತ್ತ ಅರಣ್ಯಾಧಿಕಾರಿ ಡಾ. ಬಿ. ಚಿಕ್ಕಪ್ಪಯ್ಯ, ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಲೇಖಕ ಡಾ. ಜಿ. ವಿ. ಆನಂದಮೂರ್ತಿ, ತುಮಕೂರು ವಿಶ್ವವಿದ್ಯಾನಿಲಯದ ಜುಂಜಪ್ಪಅಧ್ಯಯನ ಪೀಠದ ಸಂಯೋಜಕ ಡಾ.ಎಸ್. ಶಿವಣ್ಣ ಬೆಳವಾಡಿ ಇದ್ದರು.