Thursday, September 19, 2024
Google search engine
Homeಮುಖಪುಟಕಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ರಕ್ತದಾನ - ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ

ಕಾಯಂಗೊಳಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ರಕ್ತದಾನ – ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉಪವಾಸ ಸತ್ಯಾಗ್ರಹ

ಸೇವೆ ಕಾಯಂಗೊಳಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ರಾಜ್ಯಾದ್ಯಂತ ನಡೆಸುತ್ತಿರುವ ಪ್ರತಿಭಟನಾ ಧರಣಿ 27ನೇ ದಿನವೂ ಮುಂದುವರೆಯಿತು. ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದು ಇಂದು ಅತಿಥಿ ಉಪನ್ಯಾಸಕರು ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.

ಧರಣಿಯಲ್ಲಿ ಹದಿನೈದಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ.ಕೆ.ಎಚ್. ಧರ್ಮವೀರ, 20 ವರ್ಷಗಳಿಂದ ಸರ್ಕಾರ ನಮ್ಮ ರಕ್ತ ಹೀರುತ್ತಿದೆ. ಆದರೂ ನಾವು ಹೋರಾಟವನ್ನು ನಿಲ್ಲಿಸುವುದಿಲ್ಲ. ಕಳೆದ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಮಾತ್ರ ಜಾಣಕುರುಡನಂತೆ ವರ್ತಿಸುತ್ತಿರುವುದು ಆತಂಕಕ್ಕೆ ಈಡು ಮಾಡಿದೆ ಈಗಾಲಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ನಾವು ಪಾದಯಾತ್ರೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡಕಲ್ಮನಿ ಅವರ ನಿರಂತರ ಸಂಪರ್ಕದಲ್ಲಿದ್ದು ಇನ್ನೊಂದೆರಡು ದಿನಗಳಲ್ಲಿ ತುಮಕೂರಿಂದ ಪಾದಯಾತ್ರೆ ಆರಂಭವಾಗಲಿದೆ. ಎಲ್ಲಾ ಅತಿಥಿ ಉಪನ್ಯಾಸಕರು ಪಾದಯಾತ್ರೆಗೆ ಸಿದ್ಧಗೊಳ್ಳಬೇಕು ಎಂದು ಮನವಿ ಮಾಡಿದರು.

ಅತಿಥಿ ಉಪನ್ಯಾಸಕ ಡಾ.ಶಿವಣ್ಣ ತಿಮ್ಮಲಾಪುರ ಮಾತನಾಡಿ, ಉಪನ್ಯಾಸಕರಿಗೆ ಕೇವಲ ವಿದ್ಯಾದಾನ ಮಾಡುವುದಷ್ಟೇ ಗೊತ್ತಿಲ್ಲ ರಕ್ತದಾನ ಮಾಡುವುದು ನಮಗೆ ಗೊತ್ತು. ಇಂದು ರಕ್ತದಾನ ಮಾಡುವ ಮೂಲಕ ನಾವು ಪ್ರತಿಭಟನೆ ನಡೆಸಿದ್ದೇವೆ, ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಮಾಡುತ್ತೇವೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೇಳಿದರು.

ಹಿರಿಯ ಉಪನ್ಯಾಸಕ ಡಾ. ಕಂಚಿಗರಾಯಪ್ಪ ಮಾತನಾಡಿ, ಯುಜಿಸಿ ನಿಯಮಾವಳಿಗಳ ಪ್ರಕಾರ ಎಲ್ಲ ಅರ್ಹತೆಗಳಿದ್ದರೂ ನಮಗೆ ಸರ್ಕಾರದ ಕೆಲಸ ಸಿಗದೇ 55 ವರ್ಷ ಪೂರೈಸಿದ್ದೇನೆ. ಕೊನೆಯ ದಿನಗಳಲ್ಲಾದರೂ ನೆಮ್ಮದಿಯ ಜೀವನ ಮಾಡಲು ಸರ್ಕಾರ ನಮ್ಮನ್ನು ಕಾಯಂಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ನಿರ್ಮಲ, ಕೃಷ್ಣೆಗೌಡ, ಡಾ. ಸುರೇಶ್, ಡಾ.ಮನು, ನರಸಿಂಹ, ಶಂಕರ್ ಹಾರೋಗೆರೆ, ಮೂರ್ತಿ, ಆನಂದ್, ಮೋಹನ್‌ಕುಮಾರ್, ಪುಟ್ಟರಾಜು, ತಿಪ್ಪೇಸ್ವಾವಿ, ಸುನಿಲ್ ಕುಮಾರ್, ರಶ್ಮಿ, ಪುಜಾ. ಲತಾ, ಹರ್ಷ. ತೇಜಸ್ವಿನಿ, ನಾರಾಯಣಪ್ಪ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular