ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳ ಸಹಕಾರ ಮತ್ತು ಬೆಂಬಲದಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ನಾನು ಇಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯವಾಯಿತು. ಹಾಗಾಗಿ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದ್ದಾರೆ.
ತುಮಕೂರಿನ ಕನ್ನಡ ಭವನದಲ್ಲಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಸಾಹಿತಿ ಎಂ.ಎಚ್.ನಾಗರಾಜ ಸಂಪಾದಕತ್ವದ ಏಕತೆಯ ಹೋರಾಟಗಾರ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಯಾವುದೇ ಒಳ್ಳೆಯ ಕೆಲಸಕ್ಕೆ ಕೈಹಾಕಿದಾಗ ಉಪನ್ಯಾಸಕರು, ಪ್ರಾಂಶುಪಾಲರು ಮತ್ತು ಗುಮಾಸ್ತರು ಎಲ್ಲರೂ ಕೈಜೋಡಿಸಿದರು. ಎಲ್ಲರ ಪರಿಶ್ರಮದ ಪ್ರತಿಫಲವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೆಲವೊಂದು ಬದಲಾವಣೆ ಮಾಡಲು ಸಹಕಾರಿಯಾಯಿತು.
ಹೈಸ್ಕೂಲ್ ನಲ್ಲಿ ಶಿಕ್ಷಕರು ಪ್ರತಿದಿನದ ಅವಧಿಗಿಂತ ಒಂದು ಗಂಟೆ ಹೆಚ್ಚುವರಿ ಇಂಗ್ಲೀಷ್ ತರಗತಿ ತೆಗೆದುಕೊಳ್ಳಬೇಕು ಎಂದು ನಾನು ಸಲಹೆಗಳನ್ನು ಕೊಟ್ಟಾಗ ಶಿಕ್ಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಆದರೆ ತುಮಕೂರು ಜಿಲ್ಲೆಯಲ್ಲಿ ಈ ಕಾರ್ಯಕ್ರಮಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಇದಕ್ಕಾಗಿ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಪ್ರಾಥಮಿಕ ಹಂತದಿಂದ ಹೈಸ್ಕೂಲ್ ಹಂತಕ್ಕೆ ಬರುವವರೆಗೂ ಶಿಕ್ಷಣ ಕಲಿಯುವುದಕ್ಕೆ ಆಸಕ್ತಿ ತೋರುತ್ತಿರಲಿಲ್ಲ. ಪ್ರಾಥಮಿಕ ಶಾಲೆಗೆ ಸೇರಲು ನಂಜಪ್ಪ ಮೇಸ್ಟ್ರು ಕಾರಣ. ನನ್ನನ್ನು ಎಳೆತಂದು ಶಾಲೆಗೆ ಸೇರಿಸಿದರು. ಅವರನ್ನು ಇಂದು ಸ್ಮರಿಸಬೇಕು. ಹೈಸ್ಕೂಲ್ ಹಂತ ಮುಗಿದ ಮೇಲೆ ನಾನು ಶಿಕ್ಷಣ ಕಲಿಯಬೇಕು ಎಂಬ ಮನಸ್ಸಾಯಿತು ಎಂದು ಹೇಳಿದರು.
ಯಾರೂ ದ್ವೇಷ ಮಾಡದೆ, ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಮನುಷ್ಯ ಸಂಬಂಧಗಳನ್ನು ಇಟ್ಟುಕೊಂಡು ನಮ್ಮ ವಿಚಾರಗಳನ್ನು ಹೇಳಲು ಸಾಧ್ಯ. ನಾವು ಮನುಷ್ಯನನ್ನು ದೂರ ಇಟ್ಟು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲರ ಜೊತೆ ಇರಬೇಕು. ಯಾವುದು ತುಚ್ಛವಾಗಿ ಕಾಣುತ್ತದೆಯೋ ಇದೆಲ್ಲವನ್ನು ಮೀರಿ ಮಾನವೀಯ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಬಹಳಷ್ಟು ಪುಸ್ತಕಗಳನ್ನು ಓದುವ ಮೂಲಕ ನನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಇಂತಹ ಸಂದರ್ಭದಲ್ಲಿ ವೃತ್ತಿಯಲ್ಲಿ ಜೊತೆಯಲ್ಲಿದ್ದರು ಮತ್ತು ಹೋರಾಟಗಾರರನ್ನು ಮತ್ತು ನನಗೆ ಅಕ್ಷರ ಮತ್ತು ಅರಿವನ್ನು ನೀಡಿದವರನ್ನು ಸದಾ ಸ್ಮರಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಂ.ಎಚ್.ನಾಗರಾಜ್ ಪ್ರಸ್ತಾವಿಕ ಮಾತನಾಡಿದರು. ರಾಣಿ ಚಂದ್ರಶೇಖರ್ ನಿರೂಪಿಸಿದರು.


