ಕ್ರಾಂತಿಕಾರಿ ಕವಿ ಮತ್ತು ಹಾಡುಗಾರ ಗದ್ದರ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
1949ರಲ್ಲಿ ಆಂಧ್ರಪ್ರದೇಶದ ತುಫ್ರಾನ್ನಲ್ಲಿ ಜನಿಸಿದ ಗದ್ದರ್ ಅವರ ಮೂಲ ಹೆಸರು ಗುಮ್ಮಡಿ ವಿಠಲ್ ರಾವ್ ಎಂದು. ತಮ್ಮ ಕ್ರಾಂತಿಕಾರಿ ಹಾಡುಗಳ ಮೂಲಕ ಆಂಧ್ರಪ್ರದೇಶ ಸೇರಿದಂತೆ ದೇಶದಲ್ಲಿ ಜನಾನುರಾಗಿಯಾಗಿದ್ದರು.
ತೆಲಂಗಾಣ ಜನ ಚಳವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗದ್ದರ್ ಆಶುಕವಿಯಾಗಿದ್ದರು. ವೇದಿಕೆಯಲ್ಲೇ ಹಾಡು ಕಟ್ಟಿ ಹಾಡುತ್ತಿದ್ದರು. ಜನ ಸಂಸ್ಕೃತಿಯ ಭಾಗವಾದ ಜನಪದ, ಹೋರಾಟದ ಹಾಡುಗಳಿಗೆ ಕ್ರಾಂತಿಕಾರಿ ಸ್ಪರ್ಶ ನೀಡಿದ್ದರು.
ಹೋರಾಟದ ಹಾಡುಗಳ ಮೂಲಕ ಪ್ರಜಾ ಸಾಂಸ್ಕೃತಿಕ ಯುದ್ದ ನೌಕೆಯಾಗಿ ಇಡೀ ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಗದ್ದರ್ ಅಗಲಿಕೆ ಪ್ರಜಾಪ್ರಭುತ್ವವಾದಿ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚಿಂತಕರು ಹೇಳಿದ್ದಾರೆ.