ತುಮಕೂರು ತಾಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯ ಗ್ರಾಮದ ಹೊರಗೆ ಗುಡಿಸಲಲ್ಲಿಟ್ಟಿದ್ದ ನವಜಾತ ಶಿಶುವೊಂದು ಮೃತಪಟ್ಟ ಹಿನ್ನೆಲೆಯಲ್ಲಿ ಕಾಡುಗೊಲ್ಲ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಆಗಸ್ಟ್ 5ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸಮುದಾಯದ ಅಧಿಕಾರಿಗಳೇ ಹೆಚ್ಚು ಮಾತನಾಡಿದ್ದು, ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವೇಳೆ ಸಂತ್ರಸ್ಥರ ವಿರುದ್ಧ ಹಾಕಿರುವ ಎಫ್ಐಆರ್ ರದ್ದುಗೊಳಿಸಬೇಕೆಂಬ ಆಗ್ರಹವೂ ಸಭೆಯಲ್ಲಿ ವ್ಯಕ್ತವಾಯಿತು.
ಜಿಲ್ಲಾಧಿಕಾರಿಗಳು ನಡೆಸಿದ ಕಾಡುಗೊಲ್ಲರ ಸಭೆ ಅರ್ಥಪೂರ್ಣವಾಗಿತ್ತು. ಕಾಡುಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಈ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಾಯಿತು ಎಂದು ಸಭೆಯಲ್ಲಿ ಭಾಗಿಯಾಗಿದ್ದವರು ತಿಳಿಸಿದರು.
ತಿಪಟೂರಿನಿಂದ ಆಗಮಿಸಿದ್ದ ಸಾಹಿತಿ ಉಜ್ಜಜ್ಜಿ ರಾಜಣ್ಣನವರು ನ್ಯೂಸ್ ಕಿಟ್ ಜೊತೆ ಮಾತನಾಡಿ, ನನಗೂ ಸೇರಿದಂತೆ ಹಲವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಎಲ್ಲವನ್ನು ನಮ್ಮ ಸಮುದಾಯದ ಅಧಿಕಾರಿಗಳೇ ಮಾತನಾಡಿದರು. ಪ್ರಜಾಪ್ರಭುತ್ವದ ವ್ಯವಸ್ಥೆಯೊಳಗೆ ಬಡ್ತಿ, ಮುಂಬಡ್ತಿ ಪಡೆಯುತ್ತಿರುವ ಅಕ್ಷರಸ್ಥರು ಹಟ್ಟಿಗಳನ್ನು ಬಿಟ್ಟು ಹೋದ ನಂತರವೇ ಮತ್ತೆ ಅವರು ಹಟ್ಟಿಗಳಿಗೆ ಬಂದ ಮೇಲೆ ನಮಗೆ ಪಂಚಾಂಗದ ಪರಿಚಯವಾಯಿತು ಎಂದು ಬೇಸರ ಹೊರಹಾಕಿದರು.
ನಮ್ಮ ಎದೆಯೊಳಗಿನ ದನಿ ಬಾಬಾ ಸಾಹೇಬರನ್ನು ಮರೆಯುವಂತಹ, ಅಪ್ರಜಾಸತ್ತಾತ್ಮಕ ಪಂಚಾಂಗವೊಂದು ನಮ್ಮ ಮೇಲೆ ಏರಲ್ಪಟ್ಟಿದ್ದು, ನಮ್ಮೊಳಗಿನವರು ಅಕ್ಷರಸ್ಥರಾದ ನಂತರ ಬಗೆದಷ್ಟೂ ಬಾಬಾಸಾಹೇಬರನ್ನು ಕಾಣಬೇಕೆಂಬ ಹಂಬಲ ತುಡಿತವಿದ್ದರು ಸಹ ನಮ್ಮ ಸಮುದಾಯದೊಳಗೆ ಅಕ್ಷರಸ್ಥರು ಮಾಡಿರುವ ಅನಾಹುತಗಳು ಒಂದೆರಡಲ್ಲ. ನಮ್ಮೊಳಗಿನ ಅಕ್ಷರಸ್ಥ ಸಮಾಜವೇ ನಮ್ಮನ್ನು ಅಸ್ಪೃಷ್ಯತೆಯಿಂದ ಕಂಡಾಗ, ನಮ್ಮ ಕಷ್ಟ ಸುಖಗಳನ್ನು ಆಲಿಸುವ ಪ್ರಭುತ್ವದ ಜತೆಗೆ ಅದು ಮಧ್ಯವರ್ತಿಯಾಗಿ ನಿಂತಾಗ ನೊಂದ ನನ್ನ ಕೊರಳಿನ ದನಿಗೆ ಮಾತುಗಳು ನಾಲಿಗೆಯ ಮೇಲೆ ಹೇಗೆ ತಾನೆ ನುಲಿದು ಬಂದಾವು. ಇದು ಅತ್ಯಂತ ಬೇಸರದ ಸಂಗತಿ ಎಂದು ಕಾಡುಗೊಲ್ಲರ ಈ ಪರಿಸ್ಥಿತಿಗೆ ಕಾರಣ ಯಾರು ಎಂಬ ಬಗ್ಗೆ ನೋವು ತೋಡಿಕೊಂಡರು.
ಕಾಡುಗೊಲ್ಲ ಸಮುದಾಯದ ಮುಖಂಡ ಚಿನ್ನಪ್ಪ ಮಾತನಾಡಿ, ನಿಗಮ ಮಂಡಳಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜಮೀನುಗಳು, ದಾರಿಗಳು, ನೀರು, ಕರೆಂಟ್, ಶಿಕ್ಷಣ, ರಾಜಕೀಯದ ಕುರಿತು ಹಲವರು ಮಾತನಾಡಿದರು. ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಬೇಕು. ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಬೇಕು. ಆದರೆ ಹಾಸ್ಟೆಲ್ ಸೌಲಭ್ಯಕ್ಕೆ ಅರ್ಜಿ ಹಾಕಿದರೆ ಪರ್ಸೆಂಟೇಜ್ ಇಲ್ಲವೆಂದು ಹಾಸ್ಟೆಲ್ ಕೊಡುವುದಿಲ್ಲ. ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೀಟು ಕೊಟ್ಟರೆ, ಅವರು ಹಾಸ್ಟೆಲ್ ಸೌಲಭ್ಯಗಳಿಗೆ ಹೊಂದಿಕೊಳ್ಳುತ್ತಾರೆ. ಆಗ ಅವರು ಯಾವ ಕಾರಣಕ್ಕೂ ಹಟ್ಟಿಯ ಹೊರಗೆ ಕುಳಿತುಕೊಳ್ಳುವುದಿಲ್ಲ. ಕಾಡುಗೊಲ್ಲ ಸಮುದಾಯ ಸಾಕ್ಷರತೆಯಲ್ಲಿ ತೀರಾ ಹಿಂದುಳಿದಿದೆ. ಅವರು ಬದಲಾವಣೆ ಆಗಬೇಕು ಎಂದರೆ ಹಟ್ಟಿಗಳನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕಿನಲ್ಲೂ ಸಮುದಾಯದ ಎರಡು ಹಾಸ್ಟೆಲ್ ಸ್ಥಾಪಿಸಬೇಕು. ಇದರಿಂದ ಕಾಡುಗೊಲ್ಲರಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮಾತನಾಡಿ, ತುಮಕೂರು ತಾಲ್ಲೂಕಿನಲ್ಲಿ ಸರ್ಕಾರಿ ಜಾಗದಲ್ಲಿ 76 ಗೊಲ್ಲರಹಟ್ಟಿಗಳಿವೆ. 46 ಗೊಲ್ಲರಹಟ್ಟಿಗಳು ಖಾಸಗಿಯವರ ಜಮೀನಿನಲ್ಲಿವೆ. ಸರ್ಕಾರಿ ಜಾಗದಲ್ಲಿರುವ ಕಾಡುಗೊಲ್ಲರಹಟ್ಟಿಗಳನ್ನು ಅಭಿವೃದ್ಧಿ ಮಾಡಲು ಕೂಡಲೇ ಆದೇಶ ಮಾಡುತ್ತೇನೆ. ಖಾಸಗಿ ಜಾಗದಲ್ಲಿರುವ ಹಟ್ಟಿಗಳ ನಿವಾಸಿಗಳಿಗೆ ಹಂತಹಂತವಾಗಿ ಹಕ್ಕುಪತ್ರವನ್ನು ಕೊಡುತ್ತೇವೆ. ಅಭಿವೃದ್ಧಿ ಮಾಡುತ್ತೇವೆ. ಆದ್ದರಿಂದ ಕಾಡುಗೊಲ್ಲ ಸಮುದಾಯವು ಮೂಢನಂಬಿಕೆಗಳನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹಟ್ಟಿಗಳಲ್ಲಿರುವ ಸಮಸ್ಯೆಗಳು ನಮಗೂ ತಿಳಿದಿವೆ. ಅಭಿವೃದ್ಧಿ ಕೆಲಸಗಳನ್ನು ಕೇಳುತ್ತಿದ್ದೀರಾ. ಮಾಡೋಣ ಎಂದು ಹೇಳಿದ್ದಾರೆ.
ಅಧ್ಯಾಪಕ ಜಿ.ಕೆ.ನಾಗಣ್ಣ ಮಾತನಾಡಿ, ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಾದ ದುರಂತದ ಬಗ್ಗೆ ಕಾನೂನು ಸೇವೆ ಪ್ರಾಧಿಕಾರದ ಕಾರ್ಯದರ್ಶಿ ತೆಗೆದುಕೊಂಡಿರುವುದು ಒಳ್ಳೆಯ ಬೆಳವಣಿಗೆ. ದುರಂತ ಏನೆಂದರೆ ನ್ಯಾಯಾಂಗ ಮಧ್ಯಪ್ರವೇಶಿಸುವವರೆಗೂ ಜಿಲ್ಲಾಡಳಿತ ಕಣ್ಣು ಮುಚ್ಚಿ ಕುಳಿತಿತ್ತು. ಕಾಡುಗೊಲ್ಲ ಸಮುದಾಯ ರಾಜ್ಯದಲ್ಲಿ ಇದೆಯೋ ಇಲ್ಲವೋ ಎಂಬುದು ಜಿಲ್ಲಾಧಿಕಾರಿಗಳಿಗೆ ಗೊತ್ತಿಲ್ಲ. ಪ್ರಭುತ್ವ ಈ ಸಮುದಾಯದ ಬಗ್ಗೆ ಕಾಳಜಿ ವಹಿಸಿಲ್ಲ. ಗೊಲ್ಲ ಸಮುದಾಯದಲ್ಲಿ ಮಹಿಳೆಯನ್ನು ತುಚ್ಛವಾಗಿ ಕಾಣುತ್ತಿದೆ. ಇದು ಅಪಮಾನ. ಇದು ನನ್ನನ್ನು ಸದಾ ಕಾಡುತ್ತಿದೆ. ಮುಟ್ಟಿನ ಸಂದರ್ಭದಲ್ಲಿ ಹೊರಗೆ ಇಡುವುದು ಒಳ್ಳೆಯದಲ್ಲ. ಇದಕ್ಕೆ ಕುಮ್ಮಕ್ಕು ಯಾರು ಅಂದರೆ ಕಾಡುಗೊಲ್ಲರಲ್ಲಿರುವ ಪುರೋಗಾಮಿ ಮನಸ್ಥಿತಿಯವರು. ಗೌಡಿಕೆ, ಯಜಮಾನರೆಂದು ಕರೆದುಕೊಲ್ಳುತ್ತಾ, ಮಹಿಳೆಯನ್ನು ಅತ್ಯಂತ ಬಹಿಷ್ಕೃತವಾಗಿ ಕಂಡಂತ ಸಮುದಾಯ. ಇದು ಹೋಗಲಾಡಿಸಬೇಕು ಎಂದು ಹೇಳಿದರು.
ನವಜಾತ ಶಿಶು ಮರಣ ಪ್ರಕರಣದಲ್ಲಿ ಸಂತಸ್ಥ ಬಾಣಂತಿಯ ಮೇಲೆ ಕೇಸಾಕಿದ್ದೀರಾ, ತಾತನ ಮೇಲೆ ಎಫ್ಐಆರ್ ಹಾಕಿದೆ. ಇದು ಪೈಶಾಚಿಕ ಕೃತ್ಯ. ಕಾನೂನು ಮೂಲಕ ಬದಲಾವಣೆ ಮಾಡುತ್ತೇವೆ ಎಂಬುದನ್ನು ಬಿಟ್ಟು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಚಿಕ್ಕಣ್ಣಸ್ವಾಮಿ ಪೂಜಾರಿ ಪಾಪಣ್ಣ, ಸಮುದಾಯದ ಮುಖಂಡರಾದ ಜಗದೀಶ್, ಸುನಂದಮ್ಮ, ನಿವೃತ್ತ ಅರಣ್ಯಾಧಿಕಾರಿ ಚಿಕ್ಕಪ್ಪಯ್ಯ, ಗಂಗಾಧರ್, ಬಿಬಿಎಂಪಿ ರಾಜಣ್ಣ, ದೊಡ್ಡಮಲ್ಲಯ್ಯ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.


