ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಲ್ಲಿ ಅಧಿಕಾರದ ಹಪಾಹಪಿ ಇರಲಿಲ್ಲ. ಅವರು ವಿರೋಧ ಪಕ್ಷದಲ್ಲಿ ಹೆಚ್ಚು ಇರಲು ಬಯಸುತ್ತಿದ್ದರು ಎಂದು ನೇಗಿಲ ಗೆರೆಗಳು ಕೃತಿಕಾರ ಸುಗತ ಶ್ರೀನಿವಾಸರಾಜ್ ಹೇಳಿದ್ದಾರೆ.
ತುಮಕೂರಿನ ಕನ್ನಡಭವನದಲ್ಲಿ ನಡೆದ ದೇವೇಗೌಡರ ಕುರಿತ ನೇಗಿಲ ಗೆರೆಗಳು ಕೃತಿಯ ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವೆಲ್ಲ ಅಂಶಗಳನ್ನು ದಾಖಲೆ ಸಹಿತ ಇಂಗ್ಲೀಷ್ ಹಾಗು ಕನ್ನಡ ಅನುವಾದಿತ ಕೃತಿಯಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.

ನೇಗಿಲ ಗೆರೆಗಳು ಕೃತಿಯನ್ನು ಬರೆಯಲು ಕೈಗೆತ್ತಿಕೊಂಡಾಗ ದೇವೇಗೌಡರ ಬಗ್ಗೆ ಇದ್ದ ಭಾವನೆಗಳೇ ಬದಲಾದವು. ಗೌಡರು ರಾಜಕೀಯದ ಹೊರತಾಗಿ ಅವರೊಳಗಿರುವ ಅದ್ಬುತ ಜ್ಞಾನ, ಸ್ಮರಣಶಕ್ತಿ, ಓದಿನ ಆಸಕ್ತಿ, ಶಾಸನಸಭೆ, ಪಾರ್ಲಿಮೆಂಟ್ ನ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳುತ್ತಿದ್ದ ಪರಿ, ರೈತರ ಪರವಾಗಿ, ನೀರಾವರಿ ಯೋಜನೆ ಜಾರಿ ವಿಷಯವಾಗಿ ಅಧಿಕಾರ ತ್ಯಾಗ ಮಾಡುತ್ತಿದ್ದ ಅವರ ಬದ್ದತೆ ಎಲ್ಲವೂ ತಿಳಿಯಿತು ಎಂದು ಹೇಳಿದರು.
ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಬಿ.ಎನ್.ಚಂದ್ರಶೇಖರಯ್ಯ ಮಾತನಾಡಿ, 1960ರ ದಶಕದಿಂದಲೂ ರಾಜ್ಯ ಹಾಗೂ ರಾಷ್ಟ್ರ ರಾಜಕಾಋಣದಲ್ಲಿ ಸಕ್ರಿಯರಾಗಿರುವ ರೈತರ ಮಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಸ್ತುತ ಜನನೇತಾರರಾಗಿ ಗುರುತಿಸಲ್ಪಟ್ಟಿದ್ದಾರೆ ಎಂದು ತಿಳಿಸಿದರು.
ದೇವೇಗೌಡರು ಶಾಸಕರಾಗಿ, ಸಚಿವರಾಗಿ, ವಿಪಕ್ಷ ನಾಯಕರಾಗಿ ಮುಖ್ಯಮಂತ್ರಿಯಾಗಿ, ಪ್ರಧಾನಿಯವರೆಗೆ ಉನ್ನತ ಸ್ಥಾನಕ್ಕೇರಿದ್ದರೂ ತಮ್ಮ 6 ದಶಕ ಮೀರಿದ ರಾಜಕೀಯದಲ್ಲಿ ಅಧಿಕಾರ ಸ್ಥಾನದಲ್ಲಿದ್ದುದು ಕೇವಲ ಹತ್ತು ವರ್ಷಗಳು ಮಾತ್ರ. ಈ ಹತ್ತು ವರ್ಷದಲ್ಲಿ ಪ್ರತಿ ದಿನ, ಪ್ರತಿಕ್ಷಣವನ್ನು ವ್ಯರ್ಥ ಮಾಡದೆ ರೈತಪರ, ನೀರಾವರಿ ಯೋಜನೆಗಳ ಜಾರಿಗೆ ಹೆಚ್ಚಿನ ಒತ್ತುಕೊಟ್ಟಿದ್ದರು ಎಂದು ಸ್ಮರಿಸಿದರು.
ಪ್ರಧಾನಿಯಾಗಿದ್ದರೂ ವೈಯಕ್ತಿಕ ಭದ್ರತೆಗೆ ಒತ್ತುಕೊಡದೆ ಸೌತ್ ಬ್ಲಾಕ್ ಕಚೇರಿಗೆ ಮುಕ್ತ ಪ್ರವೇಶ ಕಲ್ಪಿಸಿದ್ದರು. ಬುಲೆಟ್ ಪ್ರೂಪ್ ಭದ್ರೆಯಿಲ್ಲದೆ ಕಾಶ್ಮೀರಕ್ಕೆ ಭೇಟಿ ಕೊಟ್ಟು ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಮರುಸ್ಥಾಪಿಸಿದ್ದನ್ನು ಇಲ್ಲಿನ ಜನ ಎಂದಿಗೂ ಮರೆಯುವುದಿಲ್ಲ. ಕೃಷ್ಣ, ಕಾವೇರಿ ಯೋಜನೆಗಳ ಜಾರಿ ವಿಚಾರದಲ್ಲಿ ಅವರ ಹೋರಾಟ, ಸಡಿಲಿಸದ ಪಟ್ಟುಗಳು ಅವಿಸ್ಮರಣೀಯ ಎಂದರು.


