ಪ್ರಚಾರ ನಡೆಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಸಿಲಿನ ಝಳಕ್ಕೆ ಕುಸಿದು ಬಿದ್ದಿರುವ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.
ಕಾರಿನ ಡೋರ್ ನಲ್ಲಿ ನಿಂತುಕೊಂಡು ಜನಗಳತ್ತ ಕೈಬೀಸುತ್ತಿದ್ದ ಸಮಯದಲ್ಲಿ ಬಿಸಿಲಿನ ಝಳಕ್ಕೆ ಕುಸಿದು ಬಿದ್ದರು. ಕೂಡಲೇ ಅಲ್ಲಿದ್ದವರು ಸಿದ್ದರಾಮಯ್ಯ ಅವರನ್ನು ಎತ್ತಿದರು ಎಂದು ತಿಳಿದುಬಂದಿದೆ.
ಕೂಡಲೇ ಸಿದ್ದರಾಮಯ್ಯ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಅವರು ಚೇತರಿಸಿಕೊಂಡಿದ್ದಾರೆ.
ಗಟ್ಟಿಮುಟ್ಟಾಗಿದ್ದೇನೆ:ಸಿದ್ದರಾಮಯ್ಯ
ಗಾಬರಿ ಪಡುವಂತಹದ್ದೇನಿಲ್ಲ, ಗಟ್ಟಿಮುಟ್ಟಾಗಿದ್ದೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೆ ಎಂದು ಹೇಳಿದ್ದಾರೆ.
ಈಗ ಆರಾಮಾಗಿದ್ದೇನೆ. ಇದನ್ನು ಅತಿರಂಜಿತ ರೀತಿಯಲ್ಲಿ ವರದಿಮಾಡಿ ಜನ ಗಾಬರಿ ಪಡುವಂತೆ ಮಾಡಬೇಡಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿಸಿದ್ದಾರೆ.


