ರಾಜ್ಯ ಚುನಾವಣಾ ಆಯೋಗದ ಕೆಲಸ ಕಾರ್ಯಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹತ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಮತ್ತು ಸಂವಹನ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನ ಎಎಪಿ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶೋಭಾ ಕರಂದ್ಲಾಜೆ ತಮ್ಮ ಕಾರ್ಯಕರ್ತರಿಗೆ ಕಾಗದ ಬರೆದಿದ್ದು, ಯಾವ – ಯಾವ ಮತಗಟ್ಟೆಗಳನ್ನು ಸೂಕ್ಷ್ಣ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳ ಎಂದು ಘೋಷಿಸಬೇಕು. ಯಾವ ಭಾಗಗಳಲ್ಲಿ ಕೇಂದ್ರ ಸೇನಾಪಡೆಗಳು ಅಥವಾ ಅರೇ ಸೇನಾಪಡೆ ತುಕಡಿಗಳನ್ನು ನಿಯೋಜಿಸಬೇಕು ಎಂಬ ಇವರವನ್ನು ಕೇಳಿರುವ ಬಗ್ಗೆ ಕಾಗದದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವರಾಗಿರುವ ಅವರು ಡಿಸಿ ಮತ್ತು ಎಸ್ಪಿ ಗಳನ್ನ ಸಂಪರ್ಕ ಮಾಡಿ ಈ ವಿವರವನ್ನ ಪಡೆಯಬೇಕು. ಅದನ್ನ ಬಿಟ್ಟು ತಮ್ಮ ಕಾರ್ಯಕರ್ತರಿಂದ ಈ ರೀತಿ ಮಾಹಿತಿ ಕಲೆ ಹಾಕುವುದು ಎಷ್ಟರ ಮಟ್ಟಿಗೆ ಸರಿ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಸರ್ಕಾರ ಬಿಟ್ಟು ಬೇರೆ ಯಾವುದಾದರೂ ಸರ್ಕಾರ ಅಧಿಕಾರಕ್ಕೆ ಬರದಿದ್ದರೇ ರಾಜ್ಯದಲ್ಲಿ ಕೋಮುಗಲಭೆ, ಕೋಮುಘರ್ಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಿರುವುದು ರಾಜ್ಯದ ಜನರಿಗೆ ಬೆದರಿಕೆ ಹಾಕಿರುವ ರೀತಿ ಎಂದು ಟೀಕಿಸಿದ್ದಾರೆ.
ಶೋಭಾ ಕರಂದ್ಲಾಜೆ ಅವರು ಬರೆದ ಕಾಗದ ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಏಕ ಪಕ್ಷಕ್ಕೆ ಅನುಕೂಲಗಳನ್ನ ಮಾಡಿ, ಬೇರೆ ಪಕ್ಷಗಳಿಗೆ ತೊಂದರೆಗಳನ್ನ ಉಂಟು ಮಾಡುವ ರೀತಿ ಕಾಣಿಸುತ್ತಿದೆ. ಒಂದು ರಾಜಕೀಯ ಪಕ್ಷ ಹಾಗೂ ಕೇಂದ್ರ ಗೃಹ ಸಚಿವರು ಈ ರೀತಿಯ ಬೆದರಿಕೆಯನ್ನ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು.


