ರಾಹುಲ್ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷ ಚಂದ್ರಶೇಖರಗೌಡ ನೇತೃತ್ವದಲ್ಲಿ ತುಮಕೂರಿನ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಪ್ರಜಾಪ್ರಭುತ್ವದ ಯಶಸ್ವಿಗೆ ಆಡಳಿತ ಎಷ್ಟು ಮುಖ್ಯವೋ, ವಿರೋಧಪಕ್ಷವೂ ಅಷ್ಟೇ ಮಹತ್ವದ ಪಾತ್ರವನ್ನು ವಹಿಸುತ್ತದೆ. ಈ ಬಗ್ಗೆ ತಿಳುವಳಿಕೆ ಇರದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ನಡೆ ಖಂಡನೀಯ ಎಂದರು.
ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಅವರ ಮೇಲೆ ಇಲ್ಲಸಲ್ಲದ ಕೇಸು ಹಾಕಿ, ಚುನಾವಣೆ ಸಂದರ್ಭದಲ್ಲಿ ಅವರ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಸಂವಿಧಾನಬಾಹಿರ ಕೃತ್ಯವಾಗಿದೆ. ರಾಹುಲ್ಗಾಂಧಿ ಅವರ ಸದಸ್ಯತ್ವ ಅನರ್ಹ ಪ್ರಕ್ರಿಯೆ ಪೂರ್ವ ನಿಯೋಜಿತದಂತೆ ಕಂಡುಬರುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿಯವರು ಪ್ರಜಾಪ್ರಭುತ್ವದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಾ, ವಿರೋಧಿಗಳನ್ನು ಭಯದ ಮೂಲಕ ಹಣಿಯಲು ಹೊರಟಿದ್ದಾರೆ. ಇದು ಭಾರತದಂತಹ ದೇಶದ ಪ್ರಧಾನಿಯೊಬ್ಬರ ನಡೆವಳಿಕೆ ಶೋಭೆ ತರುವಂತಹದ್ದಲ್ಲ. ಕೂಡಲೇ ರಾಹುಲ್ ಗಾಂಧಿ ಅವರ ಮೇಲಿನ ಅನಗತ್ಯ ಕಿರುಕುಳವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ, ರಾಹುಲ್ಗಾಂಧಿ ಸಂಸತ್ತಿನಲ್ಲಿ ನಮ್ಮ ಪ್ರಧಾನಿಯವರ ಅಪ್ತ ಅದಾನಿಯವರಿಗೆ 20 ಸಾವಿರ ಕೋಟಿ ಎಲ್ಲಿಂದ ಬಂತು ಎಂಬ ಪ್ರಶ್ನೆ ಕೇಳಿದ್ದರಿಂದ ತೀವ್ರ ಮುಜುಗರಕ್ಕೆ ಒಳಗಾಗಿ, ತನ್ನ ಸ್ನೇಹಿತರ ರಕ್ಷಣೆಗಾಗಿ ರಾಹುಲ್ಗಾಂಧಿಯವರು ಪಾರ್ಲಿಮೆಂಟ್ಗೆ ಬರದಂತೆ ನೋಡಿಕೊಂಡರು. ಭಾರತದ ಇದುವರೆಗಿನ ರಾಜಕೀಯ ವ್ಯವಸ್ಥೆಯಲ್ಲಿ ತೀರ ಅಪರೂಪದ ಘಟನೆ ಇದಾಗಿದೆ ಎಂದರು.
ಪ್ರತಿಭಟನೆಯಲ್ಲಿ ಇಕ್ಬಾಲ್ ಅಹಮದ್, ರೆಡ್ಡಿಚಿನ್ನಯಲ್ಲಪ್ಪ, ಎಚ್.ಸಿ.ಹನುಮಂತಯ್ಯ, ಮಂಜುನಾಥ್, ರಾಜಣ್ಣ, ಸುಜಾತ, ನರಸಿಂಹ ಮೂರ್ತಿ, ಸಂಜೀವ್ಕುಮಾರ್, ಶಿವಾಜಿ, ಶಿವಾನಂದ್, ಮಹಿಳಾ ಘಟಕದ ಡಾ.ಅರುಂಧತಿ, ನಾಗಮಣಿ, ಕೆಂಪಣ್ಣ, ಆಟೋರಾಜು ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.


