ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ಪೀಠ ಗೌರಿಶಂಕರ್ ಅವರ ಆಯ್ಕೆ ಅಸಿಂಧು ಎಂದು ಇಂದು ತೀರ್ಪು ನೀಡಿದೆ. ಆದರೆ ಚುನಾವಣಾ ದಿನಾಂಕ ಪ್ರಕಟವಾಗಿರುವುದರಿಂದ ಆದೇಶಕ್ಕೆ ತಡೆ ಕೋರಿ ವಕೀಲ ಹೇಮಂತ್ ರಾಜ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಮನವಿಯನ್ನು ಪರಿಗಣಿಸಿದ ಹೈಕೋರ್ಟ್ 30 ದಿನಗಳ ಕಾಲ ಆದೇಶಕ್ಕೆ ತಡೆ ನೀಡಿದೆ.
ಈ ಮೂಲಕ ಶಾಸಕ ಗೌರಿಶಂಕರ್ ಅವರಿಗೆ ತಾತ್ಕಾಲಿಕ ರಿಲೀಪ್ ಸಿಕ್ಕಂತಾಗಿದೆ. 30 ದಿನಗಳಲ್ಲಿ ಶಾಸಕ ಗೌರಿಶಂಕರ್ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಲಾಗಿದೆ.
2018ರ ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ತುಮಕೂರು ಗ್ರಾಮಾಂತರ ಕ್ಷೇತ್ರದ 32 ಸಾವಿರ ವಯಸ್ಕರ್ ಮತ್ತು 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿ ಬಾಂಡ್ ಗಳನ್ನು ವಿತರಿಸಿದ್ದಾರೆ ಎಂದು ಗೌರಿಶಂಕರ್ ವಿರುದ್ಧ ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡ ದೂರು ದಾಖಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕಸದಸ್ಯ ಪೀಠ ಇಂದು ತೀರ್ಪು ನೀಡಿದೆ.


