ತುಮಕೂರು ಜಿಲ್ಲೆಯ ಎಲ್ಲಾ ಹತ್ತು ತಾಲೂಕುಗಳಲ್ಲಿ ನಡೆದಿರುವ ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಡಿಪಿಆರ್ ನಲ್ಲಿ ನಮೂದಿಸಿರುವ ವಸ್ತುಗಳ ಬೆಲೆಗೂ, ಕಾಮಗಾರಿಯಲ್ಲಿ ಅಳವಡಿಸಿರುವ ವಸ್ತುಗಳ ಬೆಲೆಗೂ ಅಜಗಜಾಂತರ ವ್ಯತ್ಯಾಸವಾಗಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾರಣ್ಣ ಪಾಳ್ಳೆಗಾರ್ ಆಗ್ರಹಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ಗ್ರಾಮದಲ್ಲಿ ನೂರು ಮನೆಗಳಿದ್ದರೆ ಮೂವತ್ತು ಮನೆಗಳಿಗೆ ನಲ್ಲಿ ಅಳವಡಿಸಿ ನೀರು ನೀಡಿ, ಸಂಪೂರ್ಣ ಬಿಲ್ ಮಾಡಿಕೊಳ್ಳಲಾಗಿದೆ. 150 ಮನೆಗಳಿದ್ದರೆ 300 ಮನೆಗಳಿಗೆ ಅಂದಾಜು ತಯಾರಿಸಿ, ಯೋಜನೆಯ ಆರಂಭದಲ್ಲಿಯೇ ಅವ್ಯವಹಾರಕ್ಕೆ ನಾಂದಿ ಹಾಡಲಾಗಿದೆ. ಇದರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇಡೀ ಯೋಜನೆಯಲ್ಲಿ ಕರ್ನಾಟಕ ಪಾರದರ್ಶಕ ಅಧಿನಿಯಮದ ಉಲ್ಲಂಘನೆಯಾಗಿದೆ. ನಲ್ಲಿ ಅಳವಡಿಸಲು ಬಳಸುವ ಸ್ಟೀಲ್ ಪೈಪ್ ಮೂರು ನೂರು ಬೆಲೆ ನಮೂದಿಸಿ, ಕಾಮಗಾರಿಯಲ್ಲಿ ಕೇವಲ 80 ರೂ ಬೆಲೆಯ ಪೈಪ್ ಅಳವಡಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಸಿಇಓ, ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಸೇರಿ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ತನಿಖೆಗೆ ಒತ್ತಾಯಿಸಲಾಗಿದೆ ಎಂದರು.
ಆದರೆ ಇಸದುವರೆಗೂ ಯಾರ ವಿರುದ್ದವೂ ಕ್ರಮ ಕೈಗೊಂಡಿಲ್ಲ. ಆರ್.ಟಿ.ಐ ಮೂಲಕ ಕಾಮಗಾರಿಗಳ ಮಾಹಿತಿ ಕೇಳಿದರೂ ನೀಡದೆ ಸತಾಯಿಸಲಾಗುತ್ತಿದೆ. ಮೇಲ್ಮನವಿಗೂ ಬೆಲೆ ಇಲ್ಲದಂತಾಗಿದೆ. ನಲ್ಲಿ ನೀರಿನ ಕೆಲಸ ಮಾಡಿ ಅನುಭವವೇ ಇಲ್ಲದ, ಮೂರನೇ ದರ್ಜೆ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಗಳ ಕಾಮಗಾರಿ ನೀಡಿ, ಕರ್ನಾಟಕ ಪಾರದರ್ಶಕ ಅಧಿನಿಯಮ ಉಲ್ಲಂಘಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ ಎನ್ನಲಾದ ಜಿಲ್ಲೆಯ 45ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಜನರೊಂದಿಗೆ ಮಾತನಾಡಿ, ಅದನ್ನು ಚಿತ್ರೀಕರಿಸಿ, ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ 50 ಅಡಿ ಪೈಪ್ ಬೇಕಾಗುವ ಕಡೆಗೆ 500 ಅಡಿ ನಮೂದಿಸ ನಕಲಿ ಬಿಲ್ ತಯಾರಿಸಲಾಗಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ನಡೆಸದೆ ಬಿಲ್ ಪಾವತಿಸಿದ್ದರೆ, ಇನ್ನು ಕೆಲವೆಡೆ ಹಳೆಯ ಕಾಮಗಾರಿಗೆ ಬಿಲ್ ತಯಾರಿಸಿ ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿದರು.
ಸರ್ಕಾರ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ದ ಕ್ರಮ ಕೈಗೊಳ್ಳವ ಜೊತೆಗೆ ಎಲ್ಲ ಮನೆಗೆ ಕುಡಿಯುವ ನೀರು ಒದಗಿಸಬೇಕೆಂದು ಮಾರಪ್ಪ ಪಾಳ್ಳೆಗಾರ್ ಒತ್ತಾಯಿಸಿದರು.


