ಭಾರತದ ಸಂವಿಧಾನ ಅತ್ಯದ್ಬುತ ಸಂವಿಧಾನವಾಗಿದೆ. ಇಡೀ ಪ್ರಪಂಚದಲ್ಲಿರುವಂತಹ ಅತ್ಯುತ್ತಮ ಪ್ರಜಾತಾಂತ್ರಿಕ ಮೌಲ್ಯಗಳನ್ನು ಇಟ್ಟುಕೊಂಡು ನಮ್ಮ ಸಂವಿಧಾನ ರಚನೆಯಾಗಿದೆ. ಇಂತಹ ಸಂವಿಧಾನ ಇಂದು ಅಪಾಯದಲ್ಲಿದ್ದು ಇದನ್ನು ಸಂರಕ್ಷಣೆ ಮಾಡಬೇಕಾಗಿದೆ ಎಂದು ಕೇರಳ ಸರ್ಕಾರ ಮಾಜಿ ಆರೋಗ್ಯ ಸಚಿವ ಹಾಗೂ ಶಾಸಕಿ ಕೆ.ಕೆ.ಶೈಲಜಾ ಟೀಚರ್ ಆತಂಕ ವ್ಯಕ್ತಪಡಿಸಿದರು.
ತುಮಕೂರಿನ ಅಮಾನಿಕೆರೆಯಲ್ಲಿರುವ ಗಾಜಿನಮನೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾತ್ಯತೀತತೆ ಬಹಳ ಮುಖ್ಯ ವಿಚಾರವಾಗಿದೆ. ಸಂವಿಧಾನ ಬಂದ ಮೇಲೆ ಭೂಮಾಲಿಕರ ಅಧಿಕಾರದ ವಿರುದ್ಧ ನಿರಂತರ ಹೋರಾಟದ ಫಲವಾಗಿ ಉತ್ತಮ ಕಾನೂನುಗಳನ್ನು ಜಾರಿಗೆ ತಂದು ಸಾಕಷ್ಟು ಬದಲಾವಣೆ ಕಾಣುವಂತಾಗಿದೆ. ಇದು ಸಂವಿಧಾನದ ಶಕ್ತಿ ಎಂದರು.
ನಮ್ಮ ಭಾರತವನ್ನು ಯಾವುದೋ ಒಂದು ಸಮುದಾಯದ ಭಾರತವೆಂದು ಹೇಳಲು ಬರುವುದಿಲ್ಲ. ಇದು ಹಿಂದೂ ಭಾರತ, ಮುಸ್ಲೀಮರ ಭಾರತ ಮತ್ತು ಕ್ರಿಶ್ಚಿಯನ್ನರ ಭಾರತ ಎಂದು ಹೇಳಲು ಸಾಧ್ಯವಿಲ್ಲ. ಅದೊಂದು ಜಾತ್ಯತೀತ ಭಾರತ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತ ಎನ್ನುವುದನ್ನು ಸ್ವಾತಂತ್ರ್ಯ ನಂತರ ರಚನೆಯಾಗಿರುವ ಸಂವಿಧಾನ ನಮಗೆ ಹೇಳಿಕೊಟ್ಟಿದೆ ಎಂದರು.

ಆದರೆ ಇಂದು ಇದಕ್ಕೆ ವಿರುದ್ಧವಾದ ಆಳ್ವಿಕೆ ನಡೆಯುತ್ತಿದೆ. ಧಾರ್ಮಿಕ ಮೂಲಭೂತವಾದ ನಮ್ಮ ದೇಶದ ಬಹಳ ದೊಡ್ಡ ಶತ್ರುವಾಗಿದೆ. ಬಿಲ್ಕಿಶ್ ಬಾನು ಪ್ರಕರಣದಲ್ಲಿ ಏನು ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತು. ಬಿಲ್ಕಿಸ್ ಬಾನು ಮೇಲೆ ಮೂಲಭೂತವಾದಿಗಳು ದಾಳಿ ಮಾಡಿದರು. ಆಕೆಯ ಮೇಲೆ ಅತ್ಯಾಚಾರ ನಡೆಯಿತು. ಆದರೆ ಗುಜರಾತ್ ಸರ್ಕಾರ ಇಂತಹ ಕೊಲೆಗಡುಕರು ಮತ್ತು ಅತ್ಯಾಚಾರಿಗಳನ್ನು ಸನ್ನಡೆತೆ ಆಧಾರದ ಮೇಲೆ ಅವರನ್ನು ಉತ್ತಮ ವ್ಯಕ್ತಿಗಳು ಎಂದು ಬಿಡುಗಡೆ ಮಾಡಿದೆ. ಹೀಗಾಗಿ ಅವರು ಇಂದು ಮುಕ್ತವಾಗಿ ಎಲ್ಲೆಡೆ ತಿರುಗಾಡಿಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರ ಇಂದು ಬಹುರಾಷ್ಟ್ರೀಯ ಕಾರ್ಪೋರೇಟ್ ಗಳ ಪರವಾಗಿ ಕೆಲಸ ಮಾಡುತ್ತಿದೆ. ಅಡುಗೆ ಅನಿಲ, ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಹಿಳೆಯರು ಇಷ್ಟೊಂದು ಬೆಲೆಯನ್ನು ಭರಿಸಲು ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ ಅವರು ದಿನಬಳಕೆ ವಸ್ತುಗಳ ಬೆಲೆಯನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಯುತ್ತಿಲ್ಲ ಎಂದು ಆರೋಪಿಸಿದರು.
ಇಂದು ಮನುಸ್ಮೃತಿಯ ಪರವಾದ ಆಡಳಿತ ನಡೆಸಲಾಗುತ್ತಿದೆ. ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿದೆ. ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧವಾಗಿ ತಮ್ಮ ಎಲ್ಲ ಬಗೆಯ ಹಕ್ಕುಗಳಿಗಾಗಿ ತಮಗೆ ಬೇಕಾಗಿರುವ ಶಿಕ್ಷಣ, ಮತದಾನ, ಸಮಾನತೆ, ಸಮಾನವಾದ ಅವಕಾಶಗಳ ಹಕ್ಕಿಗಾಗಿ ಮಹಿಳೆಯರು ಹೋರಾಟ ಮಾಡಿದ ಫಲವಾಗಿ ನಾವು ಇಲ್ಲಿ ಸೇರಿ ಚರ್ಚಿಸಲು ಸಾಧ್ಯವಾಗಿದೆ ಎಂದರು.

ಆಸ್ತಿ ಉಳ್ಳವರಾಗಿರಲಿ ಅಥವಾ ಇಲ್ಲದವರಾಗಿರಲಿ ಎಲ್ಲ ಮಹಿಳೆಯರು ಸಮಾನವಾಗಿರಬೇಕು. ಸಮಾನವಾಧಂತಹ ಹಕ್ಕುಗಳಿರಬೇಕು. ಶಿಕ್ಷಣ, ಉದ್ಯೋಗ ಮತ್ತು ಮತದಾನಕ್ಕೆ ಪ್ರಬಲ ಹೋರಾಟ ನಡೆಯಿತು.
ಬಂಗಾಳದ ಕವಿ ದೇವೇಂದ್ರನಾಥ ಟ್ಯಾಗೋರ್ ಯಾವ ರೀತಿಯ ಭಾರತ ನಮಗೆ ಬೇಕು ಎಂಬುದನ್ನು ಹೇಳಿದ್ದಾರೆ. ಎಲ್ಲಿ ಮಾತುಗಳು ನಿರ್ಬಂಧಿತವಾಗಿಲ್ಲವೋ ಅಂತಹ ಸಮಾಜ ನಮಗೆ ಬೇಕು. ಸಮಾನತೆಯ ದೇಶ ನಮಗೆ ಬೇಕಾಗಿದೆ. ಇದು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಸಮಾನತೆಯ ಸಮಾಜ ನಮಗೆ ಬೇಕು ಎಂಬ ಕನಸಿನ ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಯಾಗಿತ್ತು ಎಂದು ಹೇಳಿದರು.
ಭಾರತದಲ್ಲಿ ಇಂದು ಮಕ್ಕಳ ಸಾವುಗಳು, ಶಿಶು ಮರಣ, ಹೆರಿಗೆಯ ಸಂದರ್ಭದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸಾವುಗಳು ಸಂಭವಿಸುತ್ತಿವೆ. ನಿರಂತರ ಹೋರಾಟದ ಫಲವಾಗಿ ಶಿಶು ಮತ್ತು ತಾಯಿ ಮರಣದ ಪ್ರಕರಣಗಳು ಕಡಿಮೆ ಆಗಿವೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಉತ್ತಮ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಜನಪರ ಚಿಂತಕ ಕೆ.ದೊರೈರಾಜ್, ಲೇಖಕಿ ಮಲ್ಲಿಕಾ ಬಸವರಾಜು, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ವಾಣಿ ಪೆರಿಯೋಡಿ, ವಿಮಲ, ಅಕ್ಕಯ್ ಪದ್ಮಶಾಲಿ, ಕಲ್ಯಾಣಿ, ವಿಜಯಮ್ಮ, ಡಾ.ಅರುಂಧತಿ ಮೊದಲಾದವರು ಉಪಸ್ಥಿತರಿದ್ದರು.


