ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕೋಟ್ಯಂತರ ರೂಪಾಯಿ ಸಿಕ್ಕಿದ ನಂತರವೂ ಕಾನೂನು ಕ್ರಮ ಜರುಗಿಸಲು ಆಗದೆ, ಅಸಹಾಯಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಚುನಾವಣೆಯ ಹೊತ್ತಿನಲ್ಲೇ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಮಗ ಗುತ್ತಿಗೆದಾರರೊಬ್ಬರಿಂದ ಕಂತೆ- ಕಂತೆ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ದಾಳಿಯ ಸಂದರ್ಭದಲ್ಲಿ ಸಿಕ್ಕ ನಗದು ಹಣದ ದೃಶ್ಯಕ್ಕೆ ಜನ ಸಾಮಾನ್ಯರು ಬೆಚ್ಚಿಬಿದ್ದಿದ್ದಾರೆ. ಗುತ್ತಿಗೆದಾರರ ಸಂಘ ಆರಂಭದಿಂದಲೂ ಮಾಡಿಕೊಂಡು ಬಂದ 40ರಷ್ಟು ಕಮಿಷನ್ ಆರೋಪಕ್ಕೆ ಪ್ರಬಲ ಸಾಕ್ಷಿಯೊಂದು ಸಿಕ್ಕಂತಾಗಿದೆ ಎಂದರು.
ಪ್ರಕರಣ ಬಯಲಿಗೆ ಬಂದು ನಾಲ್ಕು ದಿನಗಳು ಕಳೆದರೂ ರಾಜ್ಯ ಸರಕಾರ ತಮ್ಮದೇ ಪಕ್ಷದ ಶಾಸಕರನ್ನು ಕಾನೂನು ಕ್ರಮಕ್ಕೆ ಒಳಪಡಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು. ಆರೋಪಿ ಸ್ಥಾನದಲ್ಲಿ ನಿಂತು, ಇಷ್ಟೊತ್ತಿಗೆ ಜೈಲು ಪಾಲಾಗಬೇಕಿದ್ದ ಮಾಡಾಳು ವಿರೂಪಾಕ್ಷಪ್ಪಗೆ ರಾಜಾಥ್ಯಿತ್ಯ ನೀಡಲಾಗುತ್ತಿದೆ. ಆತ ಸಾಕ್ಷಿಗಳನ್ನು ಸಂಬಾಳಿಸಿಕೊಂಡು, ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಡಳಿತ ಪಕ್ಷ ಬಿಜೆಪಿಗೆ ಸಿಕ್ಕಿರುವ ಪವಿತ್ರ ಅಧಿಕಾರ ಬಳಕೆಯಾಗುತ್ತಿದೆ. ಇದು ನಾಚಿಕೆಗೇಡು ಮಾತ್ರವಲ್ಲ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಸಹಾಯಕತೆಯನ್ನು ತೋರಿಸುತ್ತಿದೆ ಎಂದು ಆರೋಪಿಸಿದರು.
ತಮ್ಮ ಶಾಸಕನ ಲಂಚಾವತಾರ ಸಾಕ್ಷಿ ಸಮೇತ ಬಯಲಿಗೆ ಬಂದಾಗ ಮುಖ್ಯಮಂತ್ರಿಗಳು ತಮ್ಮ ಪದವಿಯನ್ನು ಮರೆತಂತೆ ವರ್ತಿಸುತ್ತಿದ್ದಾರೆ. ಆರೋಪಿಯ ರಕ್ಷಣೆಗೆ ನಿಂತಿದ್ದಾರೆ ಎಂದು ಟೀಕಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಅಕ್ರಮ ಲಂಚ ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲು ನಿಸ್ಸಾಹಯಕರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು. ಮಾಡಾಳ್ ವಿರೂಪಾಕ್ಷಪ್ಪನನ್ನು ಕೂಡಲೇ ಬಂಧಿಸಿ, ಜನರಿಗೆ ಕಾನೂನಿನ ಬಗೆಗೆ ಇರುವ ಗೌರವವನ್ನು ಕಾಪಾಡಬೇಕು ಎಂದು ಹೇಳಿದರು.
ಚುನಾವಣೆ ಸಮಯದಲ್ಲಿ ಅಕ್ರಮ ಹಣ ಸಂಗ್ರಹದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಶಾಸಕರು ಹಾಗೂ ಮಂತ್ರಿಗಳ ಗೃಹ ಹಾಗೂ ಕಚೇರಿಯನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.


