ಹಾಲಿ ಶಾಸಕ ಜ್ಯೋತಿಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ತುಮಕೂರು ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಎಂದು ಪೈಪೋಟಿಗೆ ಇಳಿದಿರುವ ನಡುವೆಯೇ ನಾನೂ ಕೂಡ ತುಮಕೂರು ಕ್ಷೇತ್ರದ ಅಭ್ಯರ್ಥಿ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಈಗಾಗಲೇ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಹಾಲಿ ಶಾಸಕ ಜ್ಯೋತಿಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ನಡುವೆ ಪಕ್ಷದಿಂದ ಟಿಕೆಟ್ ಗಿಟ್ಟಿಸಲು ಪೈಪೋಟಿ ನಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಬಿಜೆಪಿಯಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು ಯಾರಿಗೆ ಟಿಕೆಟ್ ಕೊಟ್ಟರೆ ಗೆಲ್ಲಬಹುದು ಎಂಬ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.
ಈಗಿರುವ ಮಾಹಿತಿಯಂತೆ ಹಾಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಉದ್ಯಮಿ ಎನ್.ಎಸ್.ಜಯಕುಮಾರ್ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾಹಿತಿಯು ಜನರ ನಡುವೆ ಹರಿದಾಡುತ್ತಿದೆ. ಜ್ಯೋತಿ ಗಣೇಶ್ ಗೆ ವರ್ಚಸ್ಸು ಇಲ್ಲ. ಸೊಗಡು ಶಿವಣ್ಣಗೆ ಟಿಕೆಟ್ ನೀಡುವುದು ಅನುಮಾನ. ಎನ್.ಎಸ್ ಜಯಕುಮಾರ್ ಸಮರ್ಥ ನಾಯಕರಲ್ಲ ಎಂಬುದು ಟಿಕೆಟ್ ನೀಡಲು ಬಿಜೆಪಿ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.
ತುಮಕೂರು ನಗರ ಕ್ಷೇತ್ರಕ್ಕೆ ಅಭ್ಯರ್ಥಿಗಳಾಗಿ ಜ್ಯೋತಿಗಣೇಶ್, ಸೊಗಡು ಶಿವಣ್ಣ ಮತ್ತು ಉದ್ಯಮಿ ಜಯಕುಮಾರ್ ಹೆಸರುಗಳು ಚಾಲ್ತಿಯಲ್ಲಿದ್ದು ಈಗ ಮತ್ತೊಬ್ಬರು ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ಹುಲಿನಾಯ್ಕರ್ ಹೇಳಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ನಾನು ಈಗಾಗಲೇ ವಿಧಾನ ಪರಿಷತ್ ಸದಸ್ಯನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಜೊತೆಗೆ ಹಿಂದುಳಿದ ವರ್ಗಕ್ಕೆ ಸೇರಿದ್ದೇನೆ. ನನಗೆ ಬೆಂಬಲ ನೀಡಬೇಕು ಎಂದು ಹುಲಿನಾಯ್ಕರ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಹುಲಿನಾಯ್ಕರ್ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಹುಲಿನಾಯ್ಕರ್ ಜೆಡಿಎಸ್ ನಲ್ಲಿದ್ವವರು. ಜೆಡಿಎಸ್ ಗೆ ರಾಜಿನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ ಬಂದವರು. ಹಲವು ವರ್ಷಗಳಿಂದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾಗಿ ಯಾವುದೇ ಸಮಸ್ಯೆ ಮಾಡಿಕೊಳ್ಳದೆ ನಿಭಾಯಿಸಿಕೊಂಡು ಬಂದವರು. ಸಜ್ಜನ ವ್ಯಕ್ತಿ ಎಂಬ ಹೆಸರು ಮಾಡಿದ್ದು ತಮಗೆ ಟಿಕೆಟ್ ನೀಡಿದರೆ ಗೆಲ್ಲುತ್ತೇನೆ ಎಂದು ಪಕ್ಷದ ರಾಜ್ಯ ನಾಯಕರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಮನೆಗೆ ಬರುವ ಪಕ್ಷದ ಪ್ರಮುಖ ಕಾರ್ಯಕರ್ತರು, ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂಬರುವ ಚುನಾವಣೆಯಲ್ಲಿ ನನ್ನ ಬೆಂಬಲಕ್ಕೆ ಬರಬೇಕು ಎಂದು ಮನವಿ ಮಾಡುತ್ತಿದ್ದು, ಕಾರ್ಯಕರ್ತರು ಕೂಡ ಹುಲಿನಾಯ್ಕರ್ ಮಾತಿಗೆ ತಲೆದೂಗಿ ಬರುತ್ತಿದ್ದಾರೆ ಎಂದು ಹುಲಿನಾಯ್ಕರ್ ಅವರನ್ನು ಭೇಟಿ ಮಾಡಿ ಬಂದಿರುವ ಮುಖಂಡರು ದಿ ನ್ಯೂಸ್ ಕಿಟ್.ಇನ್ ಗೆ ತಿಳಿಸಿದ್ದಾರೆ.
ಜ್ಯೋತಿಗಣೇಶ್ ಮತ್ತು ಸೊಗಡು ಶಿವಣ್ಣ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಅಪ್ಪ-ಮಗ ಸೇರಿಕೊಂಡು ತುಮಕೂರು ನಗರವನ್ನು ಅಭಿವೃದ್ಧಿ ಮಾಡಲೇ ಇಲ್ಲ ಎಂದು ಸೊಗಡು ಶಿವಣ್ಣ ಆರೋಪಿಸಿದ್ದರು. ಸಂಸದ ಬಸವರಾಜು ಮತ್ತು ಸೊಗಡು ಶಿವಣ್ಣ ನಡುವೆ ಬಹಿರಂಗ ಸಮರ ಏರ್ಪಟ್ಟಿತ್ತು. ಇತ್ತೀಚಿನ ದಿನಗಳಲ್ಲಿ ಅದು ಕಡಿಮೆಯಾಗಿತ್ತು.
ಇದೀಗ ಹುಲಿನಾಯ್ಕರ್ ಹೆಸರು ತುಮಕೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದರೆ ಹಿಂದುಳಿದ ವರ್ಗಗಳ ಮತಗಳು ಬಿಜೆಪಿಗೆ ದೊರೆಯಲಿವೆ ಎಂಬ ಚರ್ಚೆಯೂ ನಡೆಯುತ್ತಿದೆ. ಆದ್ದರಿಂದ ಇರುವ ನಾಲ್ವರಲ್ಲಿ ಯಾರಿಗೆ ಟಿಕೆಟ್ ಎಂಬುದು ಗೊತ್ತಾಗಬೇಕಾಗಿದೆ.
ಕೆ.ಈ.ಸಿದ್ದಯ್ಯ.


