ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಫೆ.15ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಸಿಯೂಟ ತಯಾರಕರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಂಚಾಲಕ ಕಾಂತರಾಜು ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಬಿಸಿಯೂಟ ತಯಾರಕರಿಗೆ 1.5 ಲಕ್ಷ ಇಡುಗಂಟು ಹಣ ಕೊಡಬೇಕು. ಬಿಸಿಯೂಟ ಯೋಜನೆ ಮತ್ತು ತಯಾರಕರಿಗೆ ಮಾರಕವಾಗುವ ಹೊಸ ಆದೇಶ ನೀಡುವುದನ್ನು ಇಲಾಖೆ ನಿಲ್ಲಿಸಬೇಕು ಎಂದು ಹೇಳಿದರು.
ಸರ್ಕಾರ ಕನಿಷ್ಠ 31,500 ಮಾಸಿಕ ವೇತನ ಜಾರಿಗೊಳಿಸಬೇಕು. ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ತಯಾರಿಕೆ ಯೋಜನೆ ಅನ್ನುವುದನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮವೆಂದು ಮಾರ್ಪಡಿಸಬೇಕು. ಅಡುಗೆ ತಯಾರಕರನ್ನು ಗೌರವ ಕಾರ್ಯಕರ್ತೆಯರು ಎನ್ನುವುದನ್ನು ಕೈಬಿಟ್ಟು ಕಾರ್ಮಿಕರು ಎಂದು ಘೋಷಿಸಬೇಕು. ಕಾರ್ಮಿಕ ಇಲಾಖೆಗೆ ಒಳಪಡಿಸಬೇಕು. 60 ವರ್ಷ ಮೀರಿ ನಿವೃತ್ತಿಯಾದವರಿಗೆ 2 ಲಕ್ಷ ರೂ ಇಡುಗಂಟು ಮತ್ತು ಮಾಸಿಕ 3 ಸಾವಿರ ಪಿಂಚಣಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಜಿಲ್ಲಾ ಸಂಚಾಲಕಿ ಉಮಾದೇವಿ, ಗುಬ್ಬಿ ತಾಲ್ಲೂಕು ಅಧ್ಯಕ್ಷೆ ವನಜಾಕ್ಷಿ, ಕೊರಟಗೆರೆ ತಾಲೂಕು ಅಧ್ಯಕ್ಷೆ ಪಾರ್ವತಮ್ಮ, ಶಿರಾ ತಾಲ್ಲೂಕು ಅಧ್ಯಕ್ಷೆ ಪುಷ್ಪಲತಾ, ಲಕ್ಷ್ಮಮ್ಮ, ರೇಣುಕಮ್ಮ, ಸಿ.ಮಂಜುಳ, ನಾಗರತ್ನಮ್ಮ, ಶಾಂತಮ್ಮ ಮೊದಲಾದವರು ಉಪಸ್ಥಿತರಿದ್ದರು.


