ರಾಜ್ಯಪಾಲರಾಗಲು ಕರ್ನಾಟಕದ ವ್ಯಕ್ತಿಯೊಬ್ಬ ಸವೆಸಿದ ಹಾದಿಯನ್ನು ಗಮನಿಸಿ. ಕರ್ನಾಟಕದ ಮೂಡಬಿದಿರೆಯವರಾದ ಗೌರವಾನ್ವಿತ ಅಬ್ದುಲ್ ನಜೀರ್ ಅವರು 4, ಜನವರಿ 2023ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ನಿವೃತ್ತರಾದರು.
11, ಫೆಬ್ರವರಿ 2023ರಂದು ಮಾನ್ಯ ನಜೀರ್ ಅವರನ್ನು ಆಂದ್ರಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಇದರಲ್ಲೇನು ವಿಶೇಷ? ಇದೆ ಮಾರಾಯ್ರೆ, ನೋಡಿ…
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ರಾಮಜನ್ಮಭೂಮಿ ಪ್ರಕರಣದ ತೀರ್ಪು ನೀಡಿದ ಸಂವಿಧಾನ ಪೀಠದ ಭಾಗವಾಗಿದ್ದರು. ಡಿಮಾನಿಟೈಸೇಶನ್ ನ್ನು ಮಾನ್ಯ ಮಾಡಿದ ಸಂವಿಧಾನ ಪೀಠದ ಭಾಗವಾಗಿದ್ದರು.
ದ್ವೇಷ ಭಾಷಣ ಮಾಡುತ್ತಾರೆ ಎನ್ನಲಾಗುವ ಸಚಿವರ ಮೇಲೆ ನಿಯಂತ್ರಣ ಹೇರಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ಸಂವಿಧಾನ ಪೀಠದ ಭಾಗವಾಗಿದ್ದರು ಅಬ್ದುಲ್ ನಜೀರ್.
ತ್ರಿವಳಿ ತಲಾಖ್ ತೀರ್ಪಿನಲ್ಲಿ 5 ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ‘ತ್ರಿವಳಿ ತಲಾಖ್ ಸಂವಿಧಾನಬದ್ಧ’ ಎಂದು ಹೇಳಿದ ಇಬ್ಬರ ಪೈಕಿ ನಜೀರ್ ಸಹ ಒಬ್ಬರು
ಹೀಗೆ, ಹಾ ಒಂದು ನಿಮಿಷ. ಇದನ್ನೂ ಓದಿಬಿಡಿ
26, ಡಿಸೆಂಬರ್ 2021ರಂದು ಆಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಮಾನ್ಯ ಅಬ್ದುಲ್ ನಜೀರ್ ಅವರು ‘ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಕಾನೂನು ವ್ಯವಸ್ಥೆ ಮುಂದುವರಿದಿತ್ತು.
ಮನು, ಕೌಟಿಲ್ಯ, ಕಾತ್ಯಾಯನ, ಬ್ರಿಶಪ್ತಿ, ನಾರದ, ಪರಾಶರ, ಯಾಜ್ಞವಲ್ಕ್ಯರಂತಹ ಕಾನೂನು ತಜ್ಞರು ಪ್ರಾಚೀನ ಭಾರತಲ್ಲಿದ್ದರು. ಭಾರತದ ನ್ಯಾಯಾಂಗ ವ್ಯವಸ್ಥೆಯ ಭವಿಷ್ಯವೇನು’ ಎಂದು ಭಾಷಣ ಮಾಡಿದ್ದರು.
ಈಗಲೂ ಮತ್ತೇನು ವಿಶೇಷ ಅಂತ ಕೇಳುವಿರೋ? ಅದೇನೋ ಹೇಳ್ತಾರಲ್ಲ ‘ಕೊಡಲಿಯ ಕಾವು… ಮತ್ತೂ ಹೇಳ್ತಾರಲ್ಲ, ‘ನೀ ನನಗಿದ್ದರೆ, ನಾ ನಿನಗೆ’
ಆದರೂ ಮತ್ತೊಂದು ಮಾತಿದೆಯಲ್ಲ, ‘ಕೆಟ್ಟರೂ ಸುಖವಿರಬೇಕು’ ಎಲ್ಲವನ್ನೂ ಜೋಡಿಸಿಕೊಂಡು ಓದಿ ಅಂತ ಹೇಳಬೇಕಿಲ್ಲ ಎಂಬುದು ನಿಮಗೂ ಗೊತ್ತು, ಮೈ ಲಾರ್ಡ್ ಗೂ ಗೊತ್ತು
ಲೇಖನದ ಅಭಿಪ್ರಾಯಗಳು ಲೇಖಕರವು: ಶ್ರೀಪಾದ್ ಭಟ್


