ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ ವ್ಯಕ್ತಿಗಳು ನಾನು ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವವರಿಗೆ ಕೆಲ ಕಾಂಗ್ರೆಸ್ ಮುಖಂಡರೇ ಕೈಜೋಡಿಸಿರುವುದು ವಿಷಾದದ ಸಂಗತಿ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಹೇಳಿದ್ದಾರೆ.
ತುಮಕೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ ಹಾಗೂ ರಾಜೀವ್ಗಾಂಧಿ ಅವರ ಸಂಸ್ಮರಣೆ ಅಂಗವಾಗಿ ಹುತಾತ್ಮರ ದಿನ ಆಚರಣೆಯಲ್ಲಿ ಅವರು ಮಾತನಾಡಿದರು.
ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಬೇಕು ಎಂದು ಹೋರಾಟ ನಡೆಸಿದ ಮಹಾತ್ಮ ಗಾಂಧಿ ಗುಂಡಿಗೆ ಬಲಿಯಾದರು. ಪಂಜಾಬ್ ಅನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕೆಂಬ ಉಗ್ರರ ಆಸೆಗೆ ತಣ್ಣೀರೆರಚಿ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸಿದ ಇಂದಿರಾಗಾಂಧಿ ಹಾಗೂ ಶ್ರೀಲಂಕಾ ಮತ್ತು ತಮಿಳರ ನಡುವಿನ ಯುದ್ದವನ್ನು ತಡೆಯುವ ನಿಟ್ಟಿನಲ್ಲಿ ಶ್ರೀಲಂಕಾಕ್ಕೆ ಶಾಂತಿಪಾಲನ ಪಡೆ ಕಳುಹಿಸಿ ಪ್ರಪಂಚದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಸ್ಮರಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಗಾಂಧೀಜಿ ಅಹಿಂಸೆ ಪ್ರತಿಪಾದಿಸಿದರು. ಮುವತ್ತಕ್ಕೂ ಹೆಚ್ಚು ವರ್ಷ ಗಾಂಧಿ ಅವರ ಅಹಿಂಸಾ ಹೋರಾಟವನ್ನು ಬ್ರಿಟೀಷರು ಸಹಿಸಿಕೊಂಡರು. ಆದರೆ ನಮ್ಮಲ್ಲಿ ಸ್ವಾತಂತ್ರ್ಯ ಬಂದು ಒಂದು ವರ್ಷದ ಕಾಲ ಅವರನ್ನು ಸಹಿಕೊಳ್ಳದೆ ಹತ್ಯೆ ಮಾಡಿದರು ಎಂದರು.
ಅಂದು ಗಾಂಧೀಜಿ ಹತ್ಯೆಗೆ ಪಿತೂರಿ ಮಾಡಿದ ಸಾವರ್ಕರ್ ಇಂದು ಬಿಜೆಪಿ ಪಕ್ಷದ ಪರಮ ಶ್ರೇಷ್ಠ ನಾಯಕ. ಈ ವಿಷಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಡಿಸಿಸಿ ಮಾಜಿ ಅಧ್ಯಕ್ಷ ಎಸ್.ಷಪಿ ಅಹಮದ್, ಟೂಡಾ ಮಾಜಿ ಅಧ್ಯಕ್ಷ ಸಿದ್ದಲಿಂಗೇಗೌಡ, ಡಿಸಿಸಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ, ಮುರುಳೀಧರ್ ಹಾಲಪ್ಪ, ರೇವಣ್ಣಸಿದ್ದಯ್ಯ, ಶಿವಾಜಿ, ಪ್ರಸನ್ನಕುಮಾರ್ ಮಾತನಾಡಿದರು. ಮರಿಚನ್ನಮ್ಮ, ಡಾ.ಫಹ್ಹಾನ್, ಸುಜಾತ ಮೊದಲಾದವರು ಇದ್ದರು.