ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಿವಮೊಗ್ಗ ಜಿಲ್ಲೆಯ ನೀಲಮ್ಮ ಅವರ ಸಾವಿಗೆ ರಾಜ್ಯ ಸರ್ಕಾರದ ಹೊಣೆಗೇಡಿತನ ಕಾರಣ. ಮೃತರ ಕುಟುಂಬಕ್ಕೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕಳೆದ ಮೂರು ದಿನಗಳಿಂದ ಚಳಿ, ಬಿಸಿಲು ಎನ್ನದೆ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ, ಕನಿಷ್ಠ ಪಕ್ಷ ಅವರ ಸಮಸ್ಯೆಯನ್ನು ಆಲಿಸುವ ಸೌಜನ್ಯವಾದರೂ ರಾಜ್ಯ ಸರ್ಕಾರಕ್ಕೆ ಬೇಡವೇ? ಎಂದು ಪ್ರಶ್ನಿಸಿದ್ದಾರೆ.
ಮಾತುಕತೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡದೆ, ಏಕಾಏಕಿ ಪ್ರತಿಭಟನಾನಿರತ ಮೇಲೆ ಬಲಪ್ರಯೋಗ ಮಾಡುವುದು, ಬಂಧಿಸುವುದು ರಾಜ್ಯ ಸರ್ಕಾರದ ದಾರ್ಷ್ಟ್ಯವನ್ನು ತೋರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರುವ ಮೊದಲು ದೀಪ ಜೋರಾಗಿ ಉರಿಯುತ್ತದೆಯಂತೆ, ಬಿಜೆಪಿ ಸರ್ಕಾರವೂ ಹಾಗೆಯೇ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.