ಬಸವಣ್ಣನವರ ತತ್ವಾದರ್ಶಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನುಂಟು ಮಾಡುವ ಕಾಯಕದಲ್ಲಿ ಮಠಗಳು ಮುಂಚೂಣಿಯಲ್ಲಿರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಿದ್ದಗಂಗಾ ಮಠದ ಶಿವೈಕ್ಯ ಡಾ.ಶಿವಕುಮಾರ ಶ್ರೀಗಳ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಬದುಕಿನಲ್ಲಿ ಮುಗ್ಧತೆ ಕಾಯ್ದುಕೊಂಡು ಆತ್ಮಸಾಕ್ಷಿಯಿಂದ ನಡೆದುಕೊಳ್ಳುವುದು ಬಹಳ ಕಷ್ಟ. ಸತ್ಯವೆಂಬ ಸಾತ್ವಿಕ ವಿಚಾರವನ್ನಿಟ್ಟುಕೊಂಡು, ಲೌಕಿಕ ಲಾಭನಷ್ಟಗಳಿಂದ ದೂರವಿರುವವರು ಮಾತ್ರ ಆತ್ಮಸಾಕ್ಷಿಯಿಂದ ನಡೆದುಕೊಳ್ಳಲು ಸಾಧ್ಯ ಎಂದರು.
ವಿವೇಕಾನಂದರು ಅತಿ ಸಣ್ಣ ವಯಸ್ಸಿನಲ್ಲಿ ಮುಕ್ತಿಮಾರ್ಗ ಕಂಡುಕೊಂಡರು. ಆಗ ಪರಮಹಂಸರ ಬಳಿ ಹೋಗಿ ನನಗೆ ಮುಕ್ತಿಮಾರ್ಗ ಲಭಿಸಿದೆ ಎಂದು ಹೇಳಿದರು. ಆಗ ಪರಮಹಂಸರು ನಿನ್ನ ಸಾಧನೆಯಿಂದ ಸಾವಿರಾರು ಜನ ಬೆಳಕು ಕಾಣುವಂತಾಗಬೇಕೆಂದು ಬೋಧಿಸಿದರು. ಪರಿಣಾಮ ವಿವೇಕಾನಂದರು ವಿಶ್ವಗುರುವಾದರು ಎಂದು ಹೇಳಿದರು.
ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಿಗಳು, ಬಡಮಕ್ಕಳು ಮಠಕ್ಕೆ ಬಂದು ಅನ್ನ, ಆರೋಗ್ಯ, ವಿದ್ಯೆ, ಆಶ್ರಯ ಎಲ್ಲವನ್ನೂ ಪಡೆಯುತ್ತಿದ್ದಾರೆ. ಭಕ್ತರೇ ಮಠದ ಆಸ್ತಿ ಹಾಗೂ ಪರಮಾತ್ಮನೇ ಅಕ್ಷಯಪಾತ್ರೆ, ಎಲ್ಲ ಸೇವಾ ಕಾರ್ಯಗಳಿಗೆ ಶರಣರು, ದೀನದಲಿತರೇ ಒಡೆಯರು ಎಂದು ಶಿವಕುಮಾರ ಸ್ವಾಮೀಜಿಗಳು ಎಂದು ನಂಬಿದವರು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ವತಿಯಿಂದ ಡಾ. ಶಿವಕುಮಾರ ಶ್ರೀಗಳ ಜನ್ಮದಿನದಂದು ದಾಸೋಹ ದಿನವೆಂದು ಆಚರಿಸಲಾಗುತ್ತದೆ. ಮಠಮಾನ್ಯಗಳಲ್ಲಿ ದಾಸೋಹ ಮಾಡಲಾಗುತ್ತಿದೆ. ಈ ಕ್ಷೇತ್ರಕ್ಕೆ ದಾಸೋಹಕ್ಕೆ ವ್ಯವಸ್ಥೆಗಳನ್ನು ಮಾಡುವ ಮೂಲಕ ದಾಸೋಹ ದಿನವನ್ನು ಆಚರಿಸಲಾಗುವುದು ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ವಿ.ಸೋಮಣ್ಣ, ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ, ಎಸ್.ಟಿ. ಸೋಮಶೇಖರ್, ಸಂಸದ ಭಗವಂತ ಖೂಬಾ ಇತರರು ಇದ್ದರು.