ಹಿರಿಯ ಸಮಾಜವಾದಿ ಚಿಂತಕ, ಮೈಸೂರಿನ ನೃಪತುಂಬ ಕನ್ಡಡ ಮಾಧ್ಯಮ ಸಂಸ್ಥೆಗಳ ಸಂಸ್ಥಾಪಕ ಪ. ಮಲ್ಲೇಶ್ ಮೈಸೂರಿನಲ್ಲಿ ಜನವರಿ 19ರಂದು ನಿಧನರಾಗಿದ್ದಾರೆ.
ಚಿತ್ರದುರ್ಗದ ಹತ್ತಿರವಿರುವ ರಂಗಾಪುರ ಪ.ಮಲ್ಲೇಶ್ ಅವರ ಹುಟ್ಟೂರು. ಅಲ್ಲಿಂದ ಬಂದು ಮೈಸೂರಿನಲ್ಲಿ ನೆಲೆಸಿದ್ದರು. ಮೈಸೂರಿನಲ್ಲಿ ರಾಜ್ಯದ ಏಕೈಕ ಕನ್ನಡ ಮಾಧ್ಯಮ ಪಿಯುಸಿ ವಿಜ್ಞಾನ ವಿಭಾಗ ಸಂಸ್ಥೆ ನಡೆಸುತ್ತಿದ್ದರು.
ಗಣ್ಯರ ಕಂಬನಿ:-
ಪ.ಮಲ್ಲೇಶ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಹಿರಿಯ ಸಮಾಜವಾದಿ ಚಿಂತಕ, ಪ್ರಗತಿಪರ ಹೋರಾಟಗಾರ ಮತ್ತು ನನ್ನ ಬಹುಕಾಲದ ಆತ್ಮೀಯ ಸ್ನೇಹಿತ ಪ.ಮಲ್ಲೇಶ್ ಅವರ ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅವರ ಸಾವು ಕರ್ನಾಟಕದ ಪಾಲಿಗೆ ತುಂಬಲಾರದ ನಷ್ಟ. ಮಲ್ಲೇಶ್ ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಕೂಡ ಪ.ಮಲ್ಲೇಶ್ ಅವರ ಸೈದ್ಧಾಂತಿಕ ಬದ್ದತೆಯ ಬಗ್ಗೆ ಸ್ಮರಿಸಿದ್ದಾರೆ.
ಇಳಿವಯಸ್ಸಿನಲ್ಲಿಯೂ ದಣಿವಿಲ್ಲದ ಹೋರಾಟದ ಕೆಚ್ಚು ಮತ್ತು ರಾಜಿಯಿಲ್ಲದ ಸೈದ್ದಾಂತಿಕ ಬದ್ದತೆಯ ಪ.ಮಲ್ಲೇಶ್ ಅವರು ಇನ್ನು ಕೆಲವು ಕಾಲ ನಮ್ಮ ಜೊತೆಗಿರಬೇಕಾಗಿತ್ತು. ನೀವು ಸದಾ ಸ್ಮರಣೀಯರು ಎಂದು ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ಮೈಸೂರಿನ ಸಮಾಜವಾದಿ ಹಿರಿಯ ಹೋರಾಟಗಾರ ಮಲ್ಲೇಶ್ ಅವರ ಜೊತೆ ಹೆಚ್ಚಿನವುಗಳಲ್ಲಿ ಭಾಗವಹಿಸಿದ ನೆನಪಿಗಳಲ್ಲಿ ಅವರು ನಮ್ಮೊಂದಿಗೆ ಉಳಿದಿರುತ್ತಾರೆ. ಅವರಿಗೆ ಗೌರವಪೂರ್ಕ ನಮನಗಳು ಎಂದು ಮೈಸೂರಿನ ಪಂಡಿತಾರಾಧ್ಯ ಸ್ಮರಿಸಿದ್ದಾರೆ.