ಇಂದು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರಿಂದ ಸಾಮಾನ್ಯ ಜನ ಬದುಕುವು ಕಷ್ಟವಾಗಿದೆ. ಗ್ಯಾಸ್ ಹಾಗೂ ದಿನಸಿ ಕೊಳ್ಳಲು ಬಡವರಿಗೆ ಕಷ್ಟವಾಗುತ್ತದೆ ಎಂದು ನಾವು ಕುಟುಂಬದ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಘೋಷಣೆ ಮಾಡಿದ್ದೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ
ಹಾವೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಬಸ್ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ನುಡಿದಂತೆ ನಡೆಯುವವರು. ಬಡವ ಬಲ್ಲಿದನೆನ್ನದೆ ಪ್ರತೀ ಮನೆಗೆ 200 ಯುನಿಟ್ ವಿದ್ಯುತ್ ನೀಡುವ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎಲ್ಲಾ ಯೋಜನೆಗಳು ನಿಮಗೆ ಬೇಕು ಎನ್ನುವುದಾದರೆ ಜನಪರವಾದ ಕಾಂಗ್ರೆಸ್ ಪಕ್ಷಕ್ಕೆ ತಾವೆಲ್ಲ ಬೆಂಬಲ ನೀಡಿ, ಮುಂಬರುವ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಪ್ರೀತಿ, ಸ್ನೇಹ, ಸಹೋದರತ್ವ ಇರಬೇಕಾದ ಜನ ಮನಸಿನಲ್ಲಿ ದ್ವೇಷ, ವೈರತ್ವ ತುಂಬಿದ್ದಾರೆ. ಒಡೆದಿರುವ ಸಮಾಜವನ್ನು ಒಂದು ಮಾಡಲು ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಈ ತಿಂಗಳ 30 ರಂದು ಈ ಯಾತ್ರೆ ಕೊನೆಯಾಗಲಿದೆ, ನಾವು ಅಲ್ಲಿಗೆ ಹೋಗಬೇಕು ಎಂದು ಯೋಚನೆ ಮಾಡಿದ್ದೇವೆ ಎಂದರು.
ರಾಹುಲ್ ಗಾಂಧಿ ಇಂದು ಜನರ ಮನಸಲ್ಲಿ ನೆಲೆಯೂರಿದ್ದಾರೆ. ಇಲ್ಲಿ ಬಡಜನರ, ಅಲ್ಪಸಂಖ್ಯಾತರ, ಮಹಿಳೆಯರ, ಮಕ್ಕಳ, ಕಾರ್ಮಿಕರ, ರೈತರ ವಿರೋಧಿ ಸರ್ಕಾರ ಇದೆ. ಈ ಸರ್ಕಾರ ಇರುವವರೆಗೆ ರಾಜ್ಯ ಉದ್ಧಾರವಾಗಲ್ಲ. ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ರೈತರು ಗೊಬ್ಬರ, ಬೀಜ, ಔಷಧಿ ಕೇಳಿದ್ದಕ್ಕೆ ಗೋಲಿಬಾರ್ ಮಾಡಿಸಿ, ಅಮಾಯಕ ರೈತರನ್ನು ಕೊಂದರು. ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಲಂಬಾಣಿ ತಾಂಡಗಳು, ಗೊಲ್ಲರ ಹಟ್ಟಿಗಳು ಹೀಗೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ, ಅವರಿಗೆ ಭೂಒಡೆತನ ಹಕ್ಕು ನೀಡಿದ್ದು ನಮ್ಮ ಸರ್ಕಾರ. ಬಿಜೆಪಿಯವರು ಓಟಿನಾಸೆಗೆ ಇದನ್ನು ತಾವು ಮಾಡಿದ್ದು ಎನ್ನುತ್ತಿದ್ದಾರೆ ಎಂದು ಟೀಕಿಸಿದರು.