ಹಿಂದಿನ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿದ್ದು ನಿಮ್ಮನ್ನ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ಹಾಗಾಗಿ ಬಿಜೆಪಿಯ ಮೊದಲ ಆದ್ಯತೆ ಅಭಿವೃದ್ಧಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೆಕಲ್ ಗ್ರಾಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಿಯವರೆಗೆ ಕಣ್ಣು ಹಾಯಿಸಿದರೂ ಅಲ್ಲಿವರೆಗೆ ಜನ ಕಾಣುತ್ತಿದ್ದಾರೆ. ಯಾದಗಿರಿ ಸಮೃದ್ಧ ಇತಿಹಾಸವನ್ನು ಹೊಂದಿದೆ. ರಟ್ಟಿಗಳ್ಳಿ ಕೋಟೆ ನಮ್ಮ ಪೂರ್ವಜರ ಪ್ರತೀಕವಾಗಿದೆ. ಸುರಪುರದ ರಾಜ ವೆಂಕಟಪ್ಪ ನಾಯಕ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದರು ಎಂದು ಇತಿಹಾಸವನ್ನು ನೆನಪು ಮಾಡಿದರು.
ಯಾದಗಿರಿ ಸಾಮಾನ್ಯವೇ ಅಲ್ಲ. ಈ ಕ್ಷೇತ್ರ ಹಿಂದುಳಿಯಲು ಹಿಂದಿನ ಸರ್ಕಾರಗಳೇ ಕಾರಣ. ವೋಟ್ ಬ್ಯಾಂಕಿಂಗ್ ರಾಜಕಾರಣದಿಂದ ಹಿನ್ನೆಡೆಯಾಯಿತು ಎಂದು ಆರೋಪಿಸಿದ್ದಾರೆ.
ಪ್ರಸ್ತುತ ರಾಜ್ಯ ಸರ್ಕಾರದಿಂದ ಕರ್ನಾಟಕ ಮತ್ತಷ್ಟು ಅಭಿವೃದ್ದಿಯಾಗುತ್ತಿದ್ದು, ಕರ್ನಾಟಕದಲ್ಲಿ ವಿಕಾಸ ಪರ್ವ ಆರಂಭವಾಗಿದೆ. ಬಿಜೆಪಿ ಸರ್ಕಾರದಲ್ಲಿ ವೋಟ್ ಬ್ಯಾಂಕ್ ರಾಜಕಾರಣವೇ ಇಲ್ಲ. ನಮ್ಮ ಆದ್ಯತೆ ಅಭಿವೃದ್ದಿ ಜೊತೆ ವಿಕಾಸದ ಮಂತ್ರ ಎಂದು ಪುನರುಚ್ಚರಿಸಿದರು.
ಹಿಂದಿನ ಸರ್ಕಾರಗಳು ಕೇವಲ ಘೋಷಣೆಗಳನ್ನ ಮಾಡಿದ್ದವು, ಹಿಂದುಳಿದ ಜಿಲ್ಲೆ ಎಂದು ನಿರ್ಲಕ್ಷ್ಯ ಮಾಡಿದವು. ವೋಟ್ ಬ್ಯಾಂಕ್ ಆಧಾರದಲ್ಲಿ ಉತ್ತರ ಕರ್ನಾಟಕವನ್ನ ನಿರ್ಲಕ್ಷ್ಯಸಿದ್ದವು. ಉತ್ತರ ಕರ್ನಾಟಕ ಸಮೃದ್ಧಿಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲ ಎಂದರು.
ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ಉಪಯೋಗವವಿದೆ. ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕ 6 ಸಾವಿರ ರೂ ನೀಡಿದರೆ, ರಾಜ್ಯ ಸರ್ಕಾರ 4 ಸಾವಿರ ರೂ ಕೊಡುತ್ತಿದೆ ಎಂದು ಹೇಳಿದರು.
ನೀರಾವರಿ ಯೋಜನೆ ಮೂಲಕ ಜನರನ್ನು ತಲುಪುತ್ತಿದ್ದೇವೆ. ಹನಿ ನೀರಾವರಿ ಕೃಷಿ ಪದ್ದತಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹರ್ ಘರ್ ಜಲ್ ಯೋಜನೆಯಿಂದ ಕೋಟಿ ಕೋಟಿ ಜನರಿಗೆ ಉಪಯೋಗವಾಗಿದೆ ಎಂದು ತಿಳಿಸಿದರು.
All reactions:
11