ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತು ಹೋಗಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿಯನ್ನು ರಾಜ್ಯದಿಂದ ಹೊರಗೆ ಕಳುಹಿಸುವುದಕ್ಕೆ ಈಗಾಗಲೇ ಜನ ಸಿದ್ಧರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ 40 ಅಥವಾ 50ರಷ್ಟು ಕಮಿಷನ್ ನಡೆಯನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪರ್ಸಂಟೇಜ್ ಕುರಿತು ಇತ್ತೀಚೆಗೆ ಬಿಜೆಪಿ ಶಾಸಕರ ಆಡಿಯೋ ಒಂದು ಹೊರಬಂದಿದೆ. ಇದರ ಬಗ್ಗೆ ಅವರ ಪಕ್ಷದ ನಾಯಕರುಗಳಲ್ಲಿಯೇ ಚರ್ಚೆ ನಡೆಯುತ್ತಿದೆ. ಈ ವಿಷಯದಲ್ಲಿ ಬಿಜೆಪಿ ಪಕ್ಷದವರೇ ಕೆಸರರೆಚಾಟದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸ್ಯಾಂಟ್ರೋ ರವಿ ಪ್ರಕರಣ ಈಗ ಹಳೆಯ ವಿಷಯವಾಗಿದೆ. ಈ ಪ್ರಕರಣವನ್ನು ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಿಐಡಿಗೆ ನೀಡಿದ್ದಾರೆ. ಈ ತನಿಖೆಯಲ್ಲಿ ಈ ಸರ್ಕಾರ ಯಾವ ಸತ್ಯಾಂಶವನ್ನು ಹೊರ ತರುತ್ತದೆ ನೋಡೋಣ ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಪಂಚರತ್ನ ಯಾತ್ರೆ ಇಂದಿನಿಂದ ಆರಂಭವಾಗುತ್ತದೆ. ಫೆ. 2 ರವರೆಗೆ ಮೂರನೇ ಹಂತದ ರಥಯಾತ್ರೆ ಇದಾಗಿದ್ದು, ಸುಮಾರು ಹದಿನೈದು ದಿನಗಳ ಕಾಲ ಯಾತ್ರೆ ನಡೆಯುತ್ತದೆ. ವಿಜಯಪುರ, ರಾಯಚೂರು ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ನಮ್ಮ ರಥ ಯಾತ್ರೆ ನಡೆಸಲಾಗುತ್ತಿದೆ. ನಂತರ ನಾಲ್ಕನೇ ಹಂತರ ಪಂಚರತ್ನ ಯಾತ್ರೆ ಕಿತ್ತೂರು ಕರ್ನಾಟಕದಲ್ಲಿ ನಡೆಯುತ್ತೆ ಎಂದು ಹೇಳಿದ್ದಾರೆ.