ಗಣಿ ಮಾಲಿಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ನೂತನ ಪಕ್ಷವನ್ನು ಸ್ಥಾಪಿಸಿ ಘೋಷಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹೊಸ ಪಕ್ಷದ ಹೆಸರನ್ನು ಘೋಷಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಮುಂದಿನ ದಿನಗಳಲ್ಲಿ ಹೊಸ ಪಕ್ಷವನ್ನು ಸಂಘಟನೆ ಮಾಡಿ ನಾನು ಗಂಗಾವತಿಯಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಯಾವುದೇ ಅಡೆತಡೆ ಬಂದರೂ ಅದನ್ನು ನಿವಾರಣೆ ಮಾಡಿಕೊಂಡು ಮುನ್ನಡೆಯುತ್ತೇನೆ. ಪಕ್ಷವನ್ನು ಸಂಘಟಿಸಿ ಮುಂಬರುವ ಚುನಾವಣೆಯಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.
ನಾನು ಕೆಲಸ ಮಾಡಿದ ಪಕ್ಷದಿಂದ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಬೇಕಾಯಿತು. ನಾನು ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷವನ್ನು ಸ್ಥಾಪನೆ ಮಾಡಿದ್ದು, ಮುಂದೆ ಹೆಜ್ಜೆ ಹಾಕುತ್ತೇನೆ ಎಂದು ಮಾಹಿತಿ ನೀಡಿದರು.
ಮುಂದಿನ 10 ರಿಂದ 15 ದಿನಗಳೊಳಗೆ ಪಕ್ಷದ ಚಿನ್ಹೆ, ಕಚೇರಿಯ ಸ್ಥಾಪಿಸುವ ಕುರಿತು ಮಾಹಿತಿ ನೀಡುತ್ತೇನೆ. ಸಚಿವ ಶ್ರೀರಾಮುಲು ನಾನು ಬಾಲ್ಯದಿಂದ ಗೆಳೆಯರು. ಅವರನ್ನು ಹೊಸ ಪಕ್ಷಕ್ಕೆ ಕರೆತರುವ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಹೇಳಿದರು.